ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ| ಜೂನ್ 4 ‘ಕರ್ನಾಟಕದ ಕರಾಳ ದಿನʼ ಎಂದು ಬಣ್ಣಿಸಿದ ವಿಜಯೇಂದ್ರ

ಕ್ರಿಕೆಟ್ ಅಭಿಮಾನದ ಲಾಭ ಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ನೀವು ಮತ್ತು ನಿಮ್ಮ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ ಎಂದು ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.;

Update: 2025-06-10 04:36 GMT

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ 

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ  ಪತ್ರ ಬರೆದಿದ್ದು, ಜೂನ್ 4 ‘ಕರ್ನಾಟಕದ ಕರಾಳ ದಿನʼ ಎಂದು ಬಣ್ಣಿಸಿದ್ದಾರೆ. 

ಪತ್ರದಲ್ಲಿ ಏನಿದೆ? 

ಜೂನ್ 4 `ಕರ್ನಾಟಕದ ಕರಾಳ ದಿನ' ಎಂದು ಕರೆದಿರುವ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಕ್ರಿಕೆಟ್ ಅಭಿಮಾನದ ಲಾಭ ಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ನೀವು ಮತ್ತು ನಿಮ್ಮ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ. ಅಲ್ಲಿ ಸೇರಿದ್ದ ಸಾವಿರಾರು ಜನರು ನೋವು-ಸಂಕಷ್ಟವನ್ನು ಅನುಭವಿಸಿದ್ದಾರೆ. ಕುಟುಂಬ ಬೆಳಗಬೇಕಿದ್ದ, ಉಜ್ವಲ ಭವಿಷ್ಯದ ಕನಸು ಕಂಡಿದ್ದ 11 ಯುವ ಜನರ ಸಾವು ಆ ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡು ಹೆತ್ತವರು ನಿತ್ಯ ಕಣ್ಣೀರಿಡುವಂತಾಗಿದೆ. ಇಡೀ ಘಟನೆಯಿಂದಾಗಿ ಈ ಕ್ಷಣಕ್ಕೂ ಇಡೀ ರಾಜ್ಯ ಮಮ್ಮಲ ಮರುಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. 

ಕರ್ನಾಟಕದ ಘನತೆಗೆ ಕಪ್ಪು ಮಸಿ

ಘಟನೆ ಬಗ್ಗೆ ಸಿ.ಎಂ ಹೇಳಿಕೆಯನ್ನು ಖಂಡಿಸಿರುವ ವಿಯಯೇಂದ್ರ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘಟನೆ ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ. ನಮ್ಮ ರಾಜ್ಯ ಅಸುರಕ್ಷತೆಯ ತಾಣ ಎಂಬ ಸಂದೇಶ ರವಾನೆಯಾಗಿದೆ. ಇಷ್ಟಾಗಿಯೂ ಸರ್ಕಾರಕ್ಕೂ ಈ ಘಟನೆಗೂ ಏನೇನೂ ಸಂಬಂಧವಿಲ್ಲ, ಸರ್ಕಾರ ಈ ಘಟನೆಯ ಜವಾಬ್ದಾರಿಯನ್ನು ಹೊರಲಾಗದು ಎಂಬ ನಿಮ್ಮ ಹೇಳಿಕೆ ಪಲಾಯನವಾದ ಹಾಗೂ ನಿರ್ಲಜ್ಜತನದ ಹೊಣೆಗೇಡಿತನವನ್ನು ಪ್ರತಿಬಿಂಬಿಸುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನದ ನಿಮ್ಮ ನಡೆ ಪರಂಪರೆಯ ಕರ್ನಾಟಕದ ನೈತಿಕ ರಾಜಕಾರಣವನ್ನು ಅವಮಾನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ, ಆದ್ದರಿಂದ ಇದರಲ್ಲಿ ಸರ್ಕಾರದ ಯಾವ ತಪ್ಪೂ ಇಲ್ಲ, ದುರ್ಘಟನೆ ನಡೆದಿರುವುದು ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಎಂದು ಹೇಳಿಕೆ ನೀಡಿದ್ದೀರಿ. ಸುದೀರ್ಘ ರಾಜಕಾರಣ ಹಾಗೂ ಅಧಿಕಾರದ ಅನುಭವ ಹೊಂದಿರುವ ನಿಮ್ಮ ಬಾಯಿಂದ ಇಂತಹ ಮಾತುಗಳು  ನಿಮ್ಮ ಪ್ರಬುದ್ಧತೆಯನ್ನು ನಾವು ಶಂಕಿಸುವಂತಾಗಿದೆ. ನಿಮ್ಮ ಹೇಳಿಕೆಯಿಂದಾಗಿ ನೀವು ಇಡೀ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಯೋ ಎಂಬ ಪ್ರಶ್ನೆ ಕಾಲ್ತುಳಿತದಲ್ಲಿ ನೊಂದವರು ಕೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆಡಳಿತ ವ್ಯವಸ್ಥೆ ನಿಮ್ಮ ಕೈತಪ್ಪಿ ದಿಕ್ಕೆಟ್ಟು ಹೋಗಿದೆ 

ಪೊಲೀಸರ ರಕ್ಷಣೆ ನಿಮಗೆ, ನಿಮ್ಮ ಮಂತ್ರಿ ಮಂಡಲಕ್ಕೆ, ನಿಮ್ಮ ಕುಟುಂಬಕ್ಕೆ, ನಿಮ್ಮ ಅಧಿಕಾರಿಗಳಿಗೆ ಮಾತ್ರ ಹೊರತೂ ಸ್ಟೇಡಿಯಂ ಬಳಿಯ ದುರಂತದಲ್ಲಿ ಸಾವು-ನೋವು ಅನುಭವಿಸಿದ ಜನಸಾಮಾನ್ಯರಿಗಲ್ಲ ಎಂಬುದು ನಿಮ್ಮ ಮಾತಿನ ಧಾಟಿಯಲ್ಲಿ ವ್ಯಕ್ತವಾಗುತ್ತಿದೆ. ಕೂಗಳತೆಯ ದೂರದಲ್ಲಿ ಈ ದುರಂತ ಘಟನೆ ನಡೆದರೂ ಎರಡು ಗಂಟೆಯ ಅಂತರದವರೆಗೂ  ತಮಗೆ ದುರಂತದ ಕುರಿತು ಮಾಹಿತಿ ಸಿಗಲಿಲ್ಲ ಎಂಬ ನಿಮ್ಮ ಹೇಳಿಕೆ ಗಮನಿಸಿದರೆ ಆಡಳಿತ ವ್ಯವಸ್ಥೆ ನಿಮ್ಮ ಕೈತಪ್ಪಿ ದಿಕ್ಕೆಟ್ಟು ಹೋಗಿದೆ ಎಂದು ಗೊತ್ತಾಗುತ್ತದೆ. ಇಂತಹ ದುರ್ಬಲ ಸಮರ್ಥನೆಯ ಮೂಲಕ ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 

ಅಸಲಿ ಸತ್ಯ ರಾಜ್ಯದ ಜನರಿಗೆ ಅರ್ಥವಾಗಿದೆ 

ಪೋಲಿಸ್ ಅಧಿಕಾರಿಗಳ ಮುನ್ನೆಚ್ಚರಿಕೆಯ ಸ್ಪಷ್ಟ ಸೂಚನೆಯ ಪತ್ರವನ್ನು ಕಣ್ಣೆತ್ತಿಯೂ ನೋಡದೇ ಪಕ್ಕಕ್ಕೆ ಸರಿಸಿದ ನಿಮ್ಮ ಇಡೀ ಅಧಿಕಾರ ವ್ಯವಸ್ಥೆ ಕ್ರಿಕೆಟಿಗರ ಸನ್ಮಾನ ಸಮಾರಂಭಕ್ಕೆ ಹರಿದು ಬರುವ ಜನಸಾಗರದ ಮೆಚ್ಚುಗೆಯನ್ನು ಪಡೆಯಬೇಕೆಂಬ ರಾಜಕೀಯ ಉನ್ಮಾದದಲ್ಲಿ ತೇಲಿಹೋಗಿತ್ತು. ಇದರ ಪರಿಣಾಮವಾಗಿ ಯೋಜಿತವಲ್ಲದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಉಂಟಾಗಬಹುದಾದ ಅವಘಡಗಳನ್ನು ಪರಾಮರ್ಶಿಸದೇ, ಏಕಪಕ್ಷೀಯವಾಗಿ ಸರ್ವಾಧಿಕಾರಿ ಆದೇಶದಿoದಾಗಿ ಅಧಿಕಾರಿಗಳು ನಿಸ್ಸಹಾಯಕರಾಗಿ ಅದನ್ನು ಪಾಲಿಸುವ ಅನಿವಾರ್ಯತೆಗೆ ಸಿಲುಕಿದ್ದು ಅಸಲೀ ಸತ್ಯ ಎಂಬುದು ಇಡೀ ರಾಜ್ಯದ ಜನತೆಗೇ ತಿಳಿದಿದೆ ಎಂದು ತಿಳಿಸಿದ್ದಾರೆ. 

“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು”

“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು” ಎಂಬಂತೆ ಬೆಂಗಳೂರು ಪೋಲಿಸ್ ಆಯುಕ್ತರೂ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಜನರ ಆಕ್ರೋಶವನ್ನು ತಣಿಸಬಹುದು ಎಂಬ ದುರಾಲೋಚನೆಯಿಂದ ಅವರನ್ನು ಬಲಿಪಶು ಮಾಡಿದಿರಿ. ನೀವು, ನಿಮ್ಮ ಉಪ-ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳ ಬೇಜವಾಬ್ದಾರಿತನದಿಂದಾಗಿ ಹಾಗೂ ನಿಮ್ಮ ಸುತ್ತಲಿನ ಭಟ್ಟಂಗಿಗಳ ಸಲಹೆಯನ್ನು ಅನುಸರಿಸಲಾಗಿ ಇಂತಹ ಘೋರ ಘಟನೆ ಸಂಭವಿಸಿತು ಎಂಬುದು ʼಅಂಗೈ ಹುಣ್ಣಿನಷ್ಟೇ ʼನಿಖರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನ್ಯಾಯವಲ್ಲದ ಸಾವುಗಳಿಗೆ ಕನಿಷ್ಟ ನ್ಯಾಯ ಒದಗಿಸಬೇಕು

ಇಡೀ ಘಟನೆಯ ಕುರಿತು ಈವರೆವಿಗೂ ನಿಮ್ಮ ಬಾಯಿಂದ ಕನಿಷ್ಟ ಪಶ್ಚಾತಾಪದ ಮಾತೂ ಹೊರಬಂದಿಲ್ಲ. ಅನಿವಾರ್ಯವೆಂಬಂತೆ ಜೀವ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಘೋಷಿಸಿರುವುದನ್ನೇ ಬಹುದೊಡ್ಡ ಸ್ಪಂದನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದೀರಿ. ನಿಮ್ಮ ಪರಿಹಾರಗಳು ಅಮೂಲ್ಯ ಜೀವಗಳನ್ನು ಆ ಕುಟುಂಬಗಳಿಗೆ ಮರಳಿಸಲಾಗದು, ಆದರೆ ನ್ಯಾಯವಲ್ಲದ ಸಾವುಗಳಿಗೆ ಕನಿಷ್ಟ ನ್ಯಾಯ ಸಿಗಬೇಕೆಂದರೆ ಹೊಣೆಗೇಡಿತನದ ನಿರ್ಧಾರ ಕೈಗೊಂಡ ಉನ್ನತ ಸ್ಥಾನದಲ್ಲಿರುವ ನೀವು ನೈತಿಕ ಜವಾಬ್ದಾರಿಯನ್ನು ಹೊರಲೇಬೇಕು, ಇಲ್ಲವಾದರೆ ಇತಿಹಾಸ ಎಂದೂ ನಿಮ್ಮನ್ನು ಕ್ಷಮಿಸಲಾರದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 

ಪೋಲಿಸ್ ವ್ಯವಸ್ಥೆಯ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದ್ದೀರಿ

ಘನ ಉಚ್ಚ ನ್ಯಾಯಾಲಯ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ನಿಮ್ಮ ವಿವೇಚನೆಯಿಂದ ನಿಯೋಜಿಸಲ್ಪಟ್ಟ ನಿವೃತ್ತ ನ್ಯಾಯಮೂರ್ತಿಗಳ ಮೂಲಕ ನ್ಯಾಯಾಂಗ ತನಿಖೆಗೂ ಆದೇಶಿಸಿದ್ದೀರಿ. ನಿಮ್ಮದೇ ಮುಷ್ಠಿಯಲ್ಲಿರುವ ಅಧಿಕಾರ ವ್ಯವಸ್ಥೆಯಿಂದ ತನಿಖೆ ನಡೆಸುವ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಿದ್ದೀರಿ. ಇದರಲ್ಲಿ ಘನ ಉಚ್ಚನ್ಯಾಯಾಲಯದ ವಿಚಾರಣೆಯೊಂದನ್ನು ಹೊರತುಪಡಿಸಿ ಇನ್ಯಾವುದೇ ತನಿಖೆಗಳಿಂದಲೂ ನ್ಯಾಯ ಸಿಗುತ್ತದೆ, ತಪ್ಪಿತಸ್ಥರ ತಲೆದಂಡವಾಗುತ್ತದೆ ಎಂಬ ನಂಬಿಕೆ ರಾಜ್ಯದ ಜನತೆಗೆ ಉಳಿದಿಲ್ಲ. ಏಕೆಂದರೆ ನೀವು ಅಧಿಕಾರದಲ್ಲಿ ಉಳಿದುಕೊಳ್ಳಲು ಇಡೀ ಪೋಲಿಸ್ ವ್ಯವಸ್ಥೆಯ ಆತ್ಮಸ್ಥೈರ್ಯವನ್ನೇ ಕುಗ್ಗುವಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೀರಿ. ಸಾಮಾನ್ಯ ಪೇದೆಯಿಂದ ಹಿಡಿದು ಅಧಿಕಾರಿಗಳವರೆಗಿನ ಇಡೀ ಪೊಲೀಸ್ ವ್ಯವಸ್ಥೆ ನಿಮ್ಮ ನಿರ್ಧಾರಗಳಿಂದ ಈಗಾಗಲೇ ಘಾಸಿಗೊಂಡಿದೆ. ಈಗಾಗಲೇ ಹಳಿ ತಪ್ಪಿರುವ ಕಾನೂನು ಸುವ್ಯವಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಸ್ತವ್ಯಸ್ತಗೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.

ರಾಜೀನಾಮೆ ನೀಡಿ

ಕರ್ನಾಟಕದ ಇತಿಹಾಸದಲ್ಲಿ ಜೂನ್ 4 ರಂದು ನಡೆದ ಕಾಲ್ತುಳಿತದ ಘೋರ ದುರಂತದ ಅಧ್ಯಾಯದಲ್ಲಿ ಕಳಂಕಿತ ಸ್ಥಾನದಲ್ಲಿರುವ ನೀವು, ಉಪ-ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಹಾಗೂ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ರವರು ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡಲು ಬಯಸುತ್ತೇನೆ. ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಆರೋಪಗಳು ಬಂದಾಗ ನೈತಿಕ ಜವಾಬ್ದಾರಿ ಹೊತ್ತು ರಾಜಿ ನಾಮೆ ನೀಡಿದ ಪ್ರಸಂಗಗಳು ಪರಂಪರೆಯ ರಾಜಕಾರಣದ ಘನತೆಯ ಬಿಂದುಗಳಾಗಿವೆ ಎಂದು ಅವರು ತಿಳಿಸಿದ್ದಾರೆ. 

 ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಡಿ. ದೇವರಾಜ ಅರಸರು, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ ,ಹೆಚ್. ಡಿ ದೇವೇಗೌಡರು, ಜೆ. ಹೆಚ್ ಪಟೇಲ್, ಎಸ್. ಎಂ ಕೃಷ್ಣರವರು ಹಾಗೂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಇತರರು ಮುಖ್ಯಮಂತ್ರಿಗಳ ಸ್ಥಾನದಲ್ಲಿ ಕುಳಿತು ಕರ್ನಾಟಕದ ಜನರ ಹೃದಯಗಳಲ್ಲಿ ಶಾಶ್ವತ ಗೌರವ-ಅಭಿಮಾನಗಳನ್ನು ಉಳಿಸಿಕೊಂಡಿದ್ದಾರೆ. ಈ ಪರಂಪರೆ ಮುಂದುವರೆಯಬೇಕೆನ್ನುವುದು ಕರ್ನಾಟಕದ ಜನತೆಯ ಅಭಿಪ್ರಾಯವಾಗಿದೆ. ಇದಕ್ಕೆ ಅಪಚಾರವಾಗದಂತೆ ತಾವು ನಡೆದುಕೊಳ್ಳಬೇಕೆನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

Tags:    

Similar News