ಧರ್ಮಸ್ಥಳ ಪ್ರಕರಣ: ಅನಾಮಿಕ ವ್ಯಕ್ತಿಯ ಗುರುತು ರಕ್ಷಣೆಗೆ 'ಎಐ ನಿರೋಧಕ' ಮಾಸ್ಕ್ ಬಳಕೆ

ಈಗಾಗಲೇ SIT ತನಿಖೆ ಆರಂಭಿಸಿದ್ದು, ಸೋಮವಾರ ಮಹಜರು ಮಾಡಲು ಆತ ಶವ ಹೂತಿಟ್ಟಿದ್ದೇನೆ ಎನ್ನಲಾದ ಸ್ಥಳಗಳಿಗೆ ಆತನನ್ನು ಪೊಲೀಸರು ಕರೆತಂದಿದ್ದಾರೆ.;

Update: 2025-07-28 10:21 GMT

ಶವವನ್ನು ಹೂಳಲಾಗಿದೆಯೇ ಎಂದು ಪತ್ತೆ ಹಚ್ಚಲು ಸ್ಥಳ ಮಹಜರು ಪ್ರಕ್ರಿಯೆ ಆರಂಭವಾಗಿದೆ. 

ಧರ್ಮಸ್ಥಳದಲ್ಲಿ ದಶಕದ ಹಿಂದೆ ನೂರಾರು ಶವಗಳನ್ನು ತಾನೇ ಹೂತುಹಾಕಿರುವುದಾಗಿ ಹೇಳಿಕೊಂಡಿರುವ ಅನಾಮಿಕ ವ್ಯಕ್ತಿಯ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ವಿಶೇಷ ತನಿಖಾ ದಳ (ಎಸ್​ಐಟಿ) ಈತನನ್ನು ಸ್ಥಳ ಮಹಜರಿಗೆ ಕರೆತಂದಿದೆ. ಈ ವೇಳೆ, ಆತನ ಗುರುತನ್ನು ರಹಸ್ಯವಾಗಿಡಲು ಎಸ್​ಐಟಿ ಒಂದು ವಿಶಿಷ್ಟ ತಂತ್ರಜ್ಞಾನ ಆಧಾರಿತ ಮಾಸ್ಕ್ ಅನ್ನು ಬಳಸಿದೆ.

ಸೋಮವಾರ ಮಹಜರು ನಡೆಸುವಾಗ ಮತ್ತು ಎಸ್​​ಐಟಿ ಕಚೇರಿಗೆ ಕರೆತಂದಾಗ, ಆ ಅನಾಮಿಕ ವ್ಯಕ್ತಿಯ ಮುಖವನ್ನು ಬಿಳಿ ಮತ್ತು ಕೇಸರಿ ಗೆರೆಗಳಿರುವ ವಿಶೇಷ ಮಾಸ್ಕ್ ಮೂಲಕ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಈ ಮಾಸ್ಕ್ ಕೇವಲ ವಿನ್ಯಾಸಕ್ಕಾಗಿರಲಿಲ್ಲ, ಬದಲಿಗೆ ಅದರ ಹಿಂದೆ ಮಹತ್ವದ ತಾಂತ್ರಿಕ ರಹಸ್ಯ ಅಡಗಿದೆ.

ಎಐ ಪತ್ತೆಗೆ ಅಸಾಧ್ಯವಾಗಿಸುವ ಮಾಸ್ಕ್

ಸಾಮಾನ್ಯ ಮಾಸ್ಕ್​ಗಳನ್ನು ಬಳಸಿದಾಗ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ಮಾಸ್ಕ್​​ ಹಾಕಿಕೊಂಡಿರುವ ವ್ಯಕ್ತಿಯ ಮುಖವನ್ನು ಗುರುತಿಸಲು ಸಾಧ್ಯವಿದೆ. ಕೆಲವು ಎಐಗಳು ಸಂಪೂರ್ಣವಾಗಿ ಪತ್ತೆಹಚ್ಚಲು ಸಾಧ್ಯವಾಗದಿದ್ದರೂ, ಸಾಕಷ್ಟು ಹೋಲಿಕೆಯನ್ನು ನೀಡಬಲ್ಲವು. ಇದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಈ ವಿಶೇಷ ಮಾಸ್ಕ್ ಅನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ.

ಬಿಳಿ ಗೆರೆಗಳು ಮತ್ತು ಕೇಸರಿ ಬಣ್ಣವನ್ನು ಹೊಂದಿರುವ ಈ ಮಾಸ್ಕ್​​ಗಳನ್ನು ಎಐಗಳು ಸುಲಭವಾಗಿ ಓದಲು ಅಥವಾ ಡಿಕೋಡ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಾಸ್ಕ್​ ಹಾಕಿಕೊಂಡಿರುವ ವ್ಯಕ್ತಿಯ ಮುಖವನ್ನು ಎಐ ಸಹಾಯದಿಂದ ಗುರುತಿಸುವುದು ಅಸಾಧ್ಯವಾಗುತ್ತದೆ. ಈ ಮೂಲಕ ಎಸ್​ಐಟಿ ಅನಾಮಿಕ ವ್ಯಕ್ತಿಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗವಾಗದಂತೆ ಸಂಪೂರ್ಣವಾಗಿ ರಹಸ್ಯವಾಗಿಡಲು ಈ ಮಾಸ್ಕ್ ಅಳವಡಿಸಿದೆ ಎಂಬುದಾಗಿ ವರದಿಯಾಗಿದೆ.

ಮಹಜರು ಸಂದರ್ಭದಲ್ಲಿ, ನೇತ್ರಾವತಿ ನದಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ತಾನು ತಲೆಬುರುಡೆಗಳನ್ನು ತಂದ ಸ್ಥಳ ಮತ್ತು ಶವಗಳನ್ನು ಹೂತಿದ್ದ ಸ್ಥಳಗಳಲ್ಲಿ ಇನ್ನಷ್ಟು ಮೂಳೆಗಳು ಇರುವುದನ್ನು ಈ ಅನಾಮಿಕ ವ್ಯಕ್ತಿ ಎಸ್​ಐಟಿ ತಂಡಕ್ಕೆ ತೋರಿಸಿದ್ದಾನೆ. ಈ ಮಾಹಿತಿ ಆಧಾರದಲ್ಲಿ ಅರಣ್ಯದ ಒಳಭಾಗದಲ್ಲಿ ಶವ ಸಮಾಧಿಗಳೆಂದು ಶಂಕಿಸಲಾದ ಸ್ಥಳಗಳ ಮೇಲೆ ಗುರುತು ಹಾಕುವ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. 

Tags:    

Similar News