ಓಯೋ ರೂಮ್ನಲ್ಲಿ ಪ್ರಿಯತಮೆಯನ್ನು 17 ಬಾರಿ ಇರಿದು ಕೊಂದ ಟೆಕ್ಕಿ!
ಗೃಹಿಣಿಯಾಗಿದ್ದ ಹರಿಣಿ, ಜಾತ್ರೆಗೆ ಹೋಗಿದ್ದ ವೇಳೆ ಟೆಕ್ಕಿ ಯಶಸ್ ಪರಿಚಯವಾಗಿ ಇಬ್ಬರು ತಮ್ಮ ಫೋನ್ ಸಂಖ್ಯೆಯನ್ನು ಪರಸ್ಪರ ಪಡೆದುಕೊಂಡಿದ್ದರು.;
ಕೊಲೆಯಾದ ಹರಿಣಿ, ಟೆಕ್ಕಿ ಯಶಸ್
26ರ ಯುವಕ 36ರ ವಿವಾಹಿತ ಮಹಿಳೆ ಹಾಗೂ ಇಬ್ಬರು ಮಕ್ಕಳ ತಾಯಿಯನ್ನು ಓಯೋ ಹೋಟೆಲ್ ರೂಮಿಗೆ ಕರೆತಂದು ಆಕೆಗೆ ಬರೋಬ್ಬರಿ 17 ಬಾರಿ ಇರಿದು ಬರ್ಬರವಾಗಿ ಕೊಲೆಗೈದಿದ್ದಾನೆ. ಈ ಘಟನೆ ಬೆಂಗಳೂರಿನ ಪೂರ್ಣ ಪ್ರಜ್ಞಾಲೇಔಟ್ನ ಹೋಟೆಲ್ ಓಯೋ ರೂಮ್ನಲ್ಲಿ ನಡೆದಿದ್ದು, ಅನೈತಿಕ ಸಂಬಂಧವೇ ಕಾರಣ ಎಂದು ತಿಳಿದುಬಂದಿದೆ.
ಕೊಲೆಯಾದ ಮಹಿಳೆಯನ್ನು ಕೆಂಗೇರಿ ನಿವಾಸಿ ಹರಿಣಿ (36) ಎಂದು ಗುರುತಿಸಲಾಗಿದ್ದು, ಟೆಕ್ಕಿ ಯಶಸ್ ಎಂಬಾತ ಯುವಕ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಟೆಕ್ಕಿಯೊಂದಿಗೆ ಗೃಹಿಣಿಗೆ ಬೆಳೆದಿತ್ತು ಪ್ರೀತಿ
ಕೆಂಗೇರಿಯ ಹರಿಣಿ ದಾಸೇಗೌಡ ಎಂಬುವರ ಜೊತೆ ಮದುವೆ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳೂ ಇದ್ದರು. ಕೆಲ ತಿಂಗಳ ಹಿಂದಷ್ಟೇ ಏರಿಯಾದಲ್ಲಿ ಜಾತ್ರೆಯೊಂದು ನಡೆದಿತ್ತು. ಗೃಹಿಣಿಯಾಗಿದ್ದ ಹರಿಣಿ, ಜಾತ್ರೆಗೆ ಹೋಗಿದ್ದ ವೇಳೆ ಟೆಕ್ಕಿ ಯಶಸ್ ಪರಿಚಯವಾಗಿ ಇಬ್ಬರು ತಮ್ಮ ಫೋನ್ ಸಂಖ್ಯೆಯನ್ನು ಪರಸ್ಪರ ಪಡೆದುಕೊಂಡಿದ್ದರು.
ಬಳಿಕ ಇಬ್ಬರಿಗೂ ಸ್ನೇಹ ಬೆಳೆದು ಆಗಾಗ ಸುತ್ತಾಡುತ್ತಿದ್ದು, ಹೊಟೇಲ್ ರೂಮ್ಗಳಲ್ಲಿ ಭೇಟಿಯಾಗಿ ಏಕಾಂತ ಸಮಯವನ್ನು ಕಳೆಯುತ್ತಿದ್ದರು. ಹಲವು ಬಾರಿ ಇಬ್ಬರು ಇದೇ ರೀತಿ ಭೇಟಿ ಮಾಡುವುದು, ಫೋನ್ನಿನಲ್ಲಿ ಮಾತನಾಡುವುದು ಗಂಡ ದಾಸೇಗೌಡನಿಗೆ ತಿಳಿದುಬಂದಿದೆ. ಹೀಗಾಗಿ ಆಕೆಯ ಮೊಬೈಲ್ ಕಿತ್ತುಕೊಂಡು ಆಕೆಯನ್ನು ಮನೆಯಲ್ಲೇ ಕೂಡಿ ಹಾಕಿದ್ದ.
ಹುಚ್ಚನಂತೆ ಆಗಿದ್ದ ಲವರ್
ಆದರೆ ಕೆಲ ದಿನಗಳ ಬಳಿಕ ಮತ್ತೆ ಮನೆಯಿಂದ ಹೊರ ಬಂದಿದ್ದ ಹರಿಣಿ, ತನ್ನ ಬಾಯ್ ಫ್ರೆಂಡ್ ಯಶಸ್ನನ್ನು ಸಂಪರ್ಕಿಸಿದ್ದಳು. ಹರಿಣಿ ಸಂಪರ್ಕಕ್ಕೆ ಸಿಗದೇ ಲವರ್ ಯಶಸ್ ಹುಚ್ಚನಂತೆ ಆಗಿದ್ದ. ಹೀಗಾಗಿ ಹರಿಣಿ ಸಿಕ್ಕರೇ ಸಾಯಿಸಲು ನಿರ್ಧರಿಸಿ. ಚಾಕು ಖರೀದಿಸಿ ಜೊತೆಯಲ್ಲೇ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.
ಹರಿಣಿ ಆತನನ್ನು ಸಂಪರ್ಕ ಮಾಡಿದಾಗ ಆಕೆಯೊಂದಿಗೆ ಚೆನ್ನಾಗಿಯೇ ಮಾತನಾಡಿ, ಮೊದಲೇ ಬುಕ್ ಮಾಡಿದ್ದ ಓಯೋ ರೂಮ್ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಎಂದು ಆಕೆಯನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದ ಲವರ್ ಯಶಸ್ ಆಕೆಯನ್ನು ಕೊಂದಿದ್ದಾನೆ. ಈ ಬಗ್ಗೆ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ವಲಯದ ಲೋಕೇಶ್ ಜಗಲಾಸರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಆಕೆಯನ್ನು ಶುಕ್ರವಾರ ರಾತ್ರಿ ಕೊಲೆ ಮಾಡಿ ಸಾಫ್ಟ್ವೇರ್ ಇಂಜಿನಿಯರ್ ಯಶಸ್ ಪರಾರಿಯಾಗಿದ್ದ. ಈ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್ಪೆಕ್ಟರ್ ರಾಜು ತಂಡ, ಎಫ್ ಎಸ್ ಎಲ್ ತಂಡ ಕರೆಸಿ ಎಲ್ಲಾ ಸಾಕ್ಣ್ಯ ಸಂಗ್ರಹಿಸಿದ್ದರು. ಭಾನುವಾರ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿ ಯಶಸ್ ನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಸೋಮವಾರ ಪೊಲೀಸರು ಆತನನ್ನು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
ಇಂದಿರಾನಗರ ಹೊಟೇಲ್ನಲ್ಲೂ ನಡೆದಿತ್ತು ಕೊಲೆ
ಈ ಹಿಂದೆಯೂ ಇಂದಿರಾನಗರದ ಹೊಟೇಲ್ ಒಂದರಲ್ಲಿ ಬಾಡಿಗೆ ರೂಂ ಪಡೆದು ಪ್ರಿಯಕರ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿತ್ತು. ಆಕೆಯನ್ನು ಕೊಲೆ ಮಾಡಿ ಆಕೆಯ ಶವದೊಂದಿಗೆ ಆರೋಪಿ ಒಂದು ರಾತ್ರಿಯನ್ನು ಕಳೆದು ಮಾರನೆ ದಿನ ಬೆಳಗ್ಗೆ ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಓಯೋ ದರ್ಬಳಕೆ
ಕಡಿಮೆ ಬೆಲೆಗೆ ಲಭ್ಯವಾಗುವ ಓಯೋ ರೂಂಗಳನ್ನುಇತ್ತೀಚೆಗೆ ಕೆಲ ಪ್ರೇಮಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬರೀ ಬೆಂಗಳೂರು ಅಷ್ಟೇ ಅಲ್ಲದೆ, ನಗರ ಪ್ರದೇಶಗಳಲ್ಲಿ ಓಯೋ ಕೊಠಡಿಗಳನ್ನು 24 ಗಂಟೆಗಳ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತದೆ. ಆದರೆ ಇಂತಹ ಓಯೋ ರೂಮ್ಗಳ ದರ್ಬಳಕೆ ಆಗುತ್ತಿರುವುದು ವಿಪರ್ಯಾಸ.