ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ | ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

Update: 2024-07-22 13:35 GMT

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಸೋಮವಾರ ಆದೇಶ ಹೊರಡಿಸಲಾಗಿದೆ. 2ನೇ ಅಸಹಜ ಲೈಂಗಿಕ ದೌರ್ಜನ್ಯ ಕೇಸಿನಲ್ಲೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.

ಹೊಳೆನರಸೀಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಕೋರಿ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಕೋರ್ಟ್, ಆದೇಶ ಕಾಯ್ದಿರಿಸಿತ್ತು. ಇಂದು ಎರಡೂ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಆರೋಪಿ ಸೂರಜ್ ರೇವಣ್ಣ ಯಾವುದೇ ರೀತಿಯಲ್ಲೂ ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು. ತನಿಖಾಧಿಕಾರಿ ಮುಂದೆ ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಹಾಜರಾಗಬೇಕು. 6 ತಿಂಗಳ ಅವಧಿಗೆ ಅಥವಾ ಚಾರ್ಜ್ ಶೀಟ್​ ಸಲ್ಲಿಸುವವರೆಗೆ ಅರ್ಜಿದಾರರು ಇದೇ ರೀತಿಯ ಅಪರಾಧವನ್ನು ಮಾಡಬಾರದು ಎಂದು ಶರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಕರಣದ ಹಿನ್ನೆಲೆ

ಜೂನ್ 22ರಂದು ಅರಕಲಗೂಡು ಮೂಲದ ಯುವಕ ಹಾಗೂ ಜೂನ್ 25ರಂದು ಹೊಳೆನರಸೀಪುರ ಮೂಲದ ಯುವಕ ಸೂರಜ್ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಎರಡೂ ಪ್ರಕರಣಗಳ ತನಿಖೆ ನಡೆಸಿದ್ದ ಸಿಐಡಿ, ಹಾಸನದ ಗನ್ನಕಡ ತೋಟದ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದರು. ಸಂತ್ರಸ್ತನನ್ನು ಕರೆ ತಂದು ಸ್ಥಳ ಮಹಜರು ಪೂರ್ಣಗೊಳಿಸಿದ್ದರು.

ಇನ್ನು ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್ ರೇವಣ್ಣ ಬ್ರಿಗೇಡ್‌ನ ಖಜಾಂಚಿಯಿಂದಲೇ ಪೊಲೀಸ್​ ಠಾಣೆಗೆ ದೂರು ದಾಖಲಾಗಿತ್ತು. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ವಿರುದ್ಧ ಎಫ್​​ಐಆರ್ ದಾಖಲಾಗಿದ್ದು, ನಾಲ್ಕು ವರ್ಷಗಳ ಹಿಂದೆ ಕೊರೊನಾ ಸಮಯದಲ್ಲಿ ದೌರ್ಜನ್ಯ ನಡೆದಿದೆ ಎಂದು ಆರೋಪ ಮಾಡಲಾಗಿತ್ತು.

ಗನ್ನಿಕಡದ ತೋಟದ ಮನೆಯಲ್ಲಿ ದೌರ್ಜನ್ಯ ನಡೆದಿದೆ ಎಂದು ಆರೋಪ ಮಾಡಿ 11 ಪುಟಗಳ ದೂರು ನೀಡಿದ್ದರು. ಸೂರಜ್​ ರೇವಣ್ಣ ಅವರು ನನ್ನ ಬೆದರಿಸಿ ಸಂತ್ರಸ್ತನ ಮನವೊಲಿಸುವಂತೆ ಹೇಳಿದ್ದರು. ಜೀವ ಬೆದರಿಕೆ ಹಾಕಿ, ನನ್ನಿಂದಲೇ ಬಲವಂತವಾಗಿ ಸಂತ್ರಸ್ತನ ವಿರುದ್ಧ ದೂರು ಕೊಡಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದರು. ಇನ್ನು, ಹಾಸನದ ನಗರಸಭೆ ಸದಸ್ಯರ ಹೆಸರನ್ನು ಕೂಡ ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದರು.

Tags:    

Similar News