ಹಿಂಗಾರು ಸೂರ್ಯಕಾಂತಿ ಖರೀದಿಗೆ ಎಂಎಸ್ಪಿ ನಿಗದಿ: ಕ್ವಿಂಟಲ್ಗೆ 7,280 ರೂಪಾಯಿ ನಿಗದಿ
ಎಫ್ಎಕ್ಯು ಗುಣಮಟ್ಟದ ಸೂರ್ಯಕಾಂತಿಗೆ ಪ್ರತಿ ಕ್ವಿಂಟಾಲ್ಗೆ 7,280 ರೂಪಾಯಿ ನಿಗದಿಪಡಿಸಲಾಗಿದ್ದು ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು.ದು̤;
ಸಚಿವ ಶಿವಾನಂದ ಪಾಟೀಲ್
ಹಿಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜ್ಯ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಎಫ್ಎಕ್ಯು (FAQ - Fair Average Quality) ಗುಣಮಟ್ಟದ ಸೂರ್ಯಕಾಂತಿಗೆ ಪ್ರತಿ ಕ್ವಿಂಟಲ್ಗೆ 7,280 ರೂಪಾಯಿ ದರ ನಿಗದಿಪಡಿಸಲಾಗಿದೆ. ಆರಂಭಿಕವಾಗಿ ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಚಿವರು ವಿವರಿಸಿದರು.
ಈ ಖರೀದಿಯನ್ನು ನಿರ್ವಹಿಸಲು ಕೇಂದ್ರ ಸರ್ಕಾರವು ನಾಫೆಡ್ (NAFED) ಹಾಗೂ ಎನ್ಸಿಸಿಎಫ್ (NCCF) ಸಂಸ್ಥೆಗಳನ್ನು ಮತ್ತು ರಾಜ್ಯ ಸರ್ಕಾರವು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿಯನ್ನು ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಿದೆ. ಅಗತ್ಯಕ್ಕನುಗುಣವಾಗಿ ಹೆಚ್ಚಿನ ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಖರೀದಿ ಪ್ರಕ್ರಿಯೆಯಲ್ಲಿ ಪ್ರತಿ ಎಕರೆಗೆ ಗರಿಷ್ಠ ನಾಲ್ಕು ಕ್ವಿಂಟಲ್ನಂತೆ, ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್ ಸೂರ್ಯಕಾಂತಿ ಕೊಂಡುಕೊಳ್ಳಲಾಗುವುದು. ಖರೀದಿ ಆದೇಶ ಹೊರಡಿಸಿದ ದಿನಾಂಕದಿಂದ ಮುಂದಿನ 90 ದಿನಗಳವರೆಗೆ ಖರೀದಿ ಕಾರ್ಯ ನಡೆಯಲಿದೆ. ರೈತರು ತಮ್ಮ ಸಮೀಪದ ಪ್ಯಾಕ್ಸ್ (PACS), ಎಫ್ಪಿಒ (FPO) ಅಥವಾ ಟಿಎಪಿಸಿಎಂಎಸ್ಗಳಲ್ಲಿ (TAPCMS) ತಮ್ಮ ಎಫ್ಐಡಿ ಸಂಖ್ಯೆಯನ್ನು (FID number) ನೀಡಿ ನೋಂದಣಿ ಮಾಡಿಸಿಕೊಂಡು ಸೂರ್ಯಕಾಂತಿಯನ್ನು ಮಾರಾಟ ಮಾಡಬಹುದಾಗಿದೆ.
ಕೇಂದ್ರ ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಗೋಧಿ, ಸಾಸಿವೆ, ಸೂರ್ಯಕಾಂತಿ, ಬಾರ್ಲಿ ಹಾಗೂ ಕಡಲೆಗೆ ಬೆಂಬಲ ಬೆಲೆಯಡಿ ಉತ್ತಮ ದರ ನೀಡಿ ಖರೀದಿಸುತ್ತಿದೆ. 2023-24ನೇ ಸಾಲಿನಲ್ಲಿ ಸೂರ್ಯಕಾಂತಿಗೆ ಕ್ವಿಂಟಾಲ್ಗೆ 7,140 ರೂಪಾಯಿ ಎಂಎಸ್ಪಿ ನಿಗದಿಪಡಿಸಲಾಗಿತ್ತು. ಪ್ರಸಕ್ತ 2024-25ನೇ ಸಾಲಿಗೆ ಈ ದರವನ್ನು 140 ರೂಪಾಯಿ ಹೆಚ್ಚಿಸಿ 7,280 ರೂಪಾಯಿಗೆ ನಿಗದಿಪಡಿಸಲಾಗಿದೆ.