ನಿರ್ಮಲಾನಂದ ಸ್ವಾಮೀಜಿ ಸೂಚನೆ: ಒಕ್ಕಲಿಗರ ಸಂಘದಿಂದ ಪ್ರತ್ಯೇಕ ಜಾತಿ ಸಮೀಕ್ಷೆ
ಜಾತಿ ಜನಗಣತಿ ವರದಿಗೆ ಕಾಂಗ್ರೆಸ್ ಪಕ್ಷ ವಿರಾಮ ನೀಡಿ, ಹೊಸ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿರುವ ಬೆನ್ನಿಗೇ, ಗಣತಿಗೆ ವಿರೋಧ ವ್ಯಕ್ತಪಡಿಸಿದ್ದ ಒಕ್ಕಲಿಗರ ಸಂಘ ಪ್ರತ್ಯೇಕವಾಗಿ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ.;
ಜಾತಿ ಜನಗಣತಿ ವರದಿಗೆ ಕಾಂಗ್ರೆಸ್ ಪಕ್ಷ ವಿರಾಮ ನೀಡಿ, ಹೊಸ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿರುವ ಬೆನ್ನಿಗೇ, ಗಣತಿಗೆ ವಿರೋಧ ವ್ಯಕ್ತಪಡಿಸಿದ್ದ ಒಕ್ಕಲಿಗರ ಸಂಘ ಪ್ರತ್ಯೇಕವಾಗಿ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ.
ಇತ್ತೀಚೆಗೆ ಲಿಂಗಾಯತರೂ ಅಖಿಲ ಭಾರತ ವೀರಶೈವ ಲಿಂಗಾಯತರ ಸಂಘವೂ ಪ್ರತ್ಯೇಕ ಜಾತಿ ಗಣತಿಗೆ ಮುಂದಾಗಿತ್ತು. ಈಗ, ಒಕ್ಕಲಿಗರ ಸಂಘವೂ ಪ್ರತ್ಯೇಕ ಜಾತಿ ಸಮೀಕ್ಷೆಗೆ ಮುಂದಾಗಿದ್ದು, ಇದಕ್ಕೆ ಆ ಸಮುದಾಯದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೂಚನೆ ನೀಡಿದ್ದಾರೆ.
ಜಾತಿಗಣತಿಯಲ್ಲಿ ಬಹಿರಂಗಗೊಂಡ ಜಾತಿಗಳ ಅಂಕಿ ಅಂಶಗಳಲ್ಲಿ ಒಕ್ಕಲಿಗ ಸಮುದಾಯ ನಾಲ್ಕನೇ ಸ್ಥಾನಕ್ಕೆ ಕುಸಿತವಾಗಿದ್ದನ್ನು ಖಂಡಿಸಿ, ನಿಜವಾದ ಅಂಕಿ ಅಂಶಗಳನ್ನು ದಾಖಲಿಸಬೇಕೆಂಬ ಒತ್ತಾಯವಿತ್ತು. ಈಗ ಪ್ರತ್ಯೇಕ ಸಮೀಕ್ಷೆ ನಡೆಸುವ ಮೂಲಕ ಜಾತಿಗಣತಿ ಅಂಕಿ ಅಂಶಗಳ ವಿರುದ್ಧ ಸೆಡ್ಡು ಹೊಡೆಯಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಮುದಾಯದ ಮಠಾಧೀಶರು, ನಾಯಕರು ಸ್ವಯಂಪ್ರೇರಿತರಾಗಿ ತಮ್ಮ ಸಮುದಾಯದ ಸಮೀಕ್ಷೆ ಆಗಬೇಕೆಂದ ಬೇಡಿಕೆ ಇಟ್ಟಿದ್ದರು. ಈಗ ನಿರ್ಮಲಾನಂದನಾಥ ಸ್ವಾಮೀಜಿ ಸೂಚನೆ ಬಳಿಕ ರಾಜ್ಯ ಒಕ್ಕಲಿಗರ ಸಂಘ ಈ ನಿರ್ಧಾರಕ್ಕೆ ಬಂದಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ದ ಜತೆ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಅವರು, "ಈಗಿನ ಜಾತಿಗಣತಿ ವರದಿಯಲ್ಲಿನ ಅಂಕಿ ಅಂಶಗಳಿಗೆ ನಮ್ಮ ವಿರೋಧ ಇತ್ತು. ಕಾಂಗ್ರೆಸ್ ಹೈಕಮಾಂಡ್ ಅರ್ಥಮಾಡಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ," ಎಂದು ಹೇಳಿದರು
ಸ್ವಾಮೀಜಿ ಸೂಚನೆ
"ರಾಜ್ಯದಲ್ಲಿ ಒಕ್ಕಲಿಗರ ಪ್ರತ್ಯೇಕ ಸಮೀಕ್ಷೆಗೆ ನಿರ್ಮಲಾನಂದ ಸ್ವಾಮೀಜಿ ಸೂಚನೆ ನೀಡಿದ್ದಾರೆ. ಸ್ವಾಮೀಜಿ ಖುದ್ದು ನಮಗೆ ಸೂಚನೆ ನೀಡಿದ್ದು, ರಾಜ್ಯಾದ್ಯಂತ ಒಕ್ಕಲಿಗರ ಸಮೀಕ್ಷೆ ನಡೆಸುವಂತೆ ಹೇಳಿದ್ದಾರೆ. ಇದಕ್ಕಾಗಿ ಒಕ್ಕಲಿಗರ ಸಂಘ ವಿಶೇಷ ಸಾಪ್ಟವೇರ್ ಸಿದ್ದಪಡಿಸಿದೆ. ಇದೇ 17 ರಂದು ಒಕ್ಕಲಿಗರ ಸಂಘದ ಸಭೆಯಲ್ಲಿ ಈ ಪ್ರತ್ಯೇಕ ಸಮೀಕ್ಷೆಯ ರೂಪುರೇಷೆ ಸಿದ್ಧಪಡಿಸಲಾಗುವುದು," ಎಂದು ಹೇಳಿದ್ದಾರೆ.
"ಇದಕ್ಕಾಗಿ ವಿಶೇಷ ಸಮೀಕ್ಷಾ ತಂಡ ರಚನೆ ಮಾಡಲಾಗುವುದು. ಪ್ರತಿ ತಾಲ್ಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ತಂಡ ರಚಿಸಿ ಸಮೀಕ್ಷೆ ಮಾಡಲಾಗುವುದು. ಒಂದು ಅಂದಾಜು ಪ್ರಕಾರ ಸುಮಾರು ಒಂದೂವರೆ ಕೋಟಿಯಿದ್ದಾರೆ. ಈಗ ಸರ್ಕಾರ ನಡೆಸಿರುವ ಸಮೀಕ್ಷೆಯಲ್ಲಿ 60 ಲಕ್ಷ ಇದ್ದಾರೆ ಎಂದು ಹೇಳಲಾಗಿದೆ. ಒಂದು ಸಮುದಾಯವನ್ನು ಖುಷಿ ಪಡಿಸಲು ಈ ಜಾತಿ ಜನಗಣತಿ ವರದಿಯಲ್ಲಿ ಅಂಕಿ ಅಂಶ ಸಿದ್ದಪಡಿಸಿದ್ದರು. ಒಂದು ವೇಳೆ ಜಾತಿಜನಗಣತಿ ವರದಿ ಜಾರಿ ಮಾಡಲು ಮುಂದಾಗಿದ್ದರೆ ಒಕ್ಕಲಿಗ ಹಾಗು ಲಿಂಗಾಯತ ಸಮುದಾಯದಿಂದ ದೊಡ್ಡ ಮಟ್ಟದ ಹೋರಾಟ ಮಾಡಲು ನಿರ್ಧಾರ ಆಗಿತ್ತು," ಎಂದು ಹೇಳಿದ್ದಾರೆ.
ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ದ ಫೆಡರಲ್ ಕರ್ನಾಟಕಕ್ಕೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.