ಸಚಿವ ರಾಜಣ್ಣ ವಜಾ; ಅಧಿವೇಶನದ ಮುಗಿದ ನಂತರ ವರಿಷ್ಠರ ಭೇಟಿ- ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ಆ.11 ರಂದು ಸಹಕಾರ ಸಚಿವ ಕೆ.ಎನ್. ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದರು. ಆ ನಂತರ ಶಾಸಕ ರಾಜಣ್ಣ ಅಧಿವೇಶನಕ್ಕೂ ಹಾಜರಾಗಿರಲಿಲ್ಲ.;
ಸಚಿವ ಸತೀಶ್ ಜಾರಕಿಹೊಳಿ ಕೆ.ಎನ್. ರಾಜಣ್ಣನವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸಂಪುಟದಿಂದ ಕೆ.ಎನ್.ರಾಜಣ್ಣ ವಜಾಗೊಳಿಸಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಬುಧವಾರ ಕೆ.ಎನ್.ರಾಜಣ್ಣ ಅವರನ್ನು ಭೇಟಿಯಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿ ಹಲವು ಕಾಂಗ್ರೆಸ್ ಶಾಸಕರು ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಕೆ.ಎನ್.ರಾಜಣ್ಣ ಅವರ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಕೆಲವರ ಷಡ್ಯಂತ್ರದಿಂದ ಹೈಕಮಾಂಡ್ ನನ್ನ ಬಗ್ಗೆ ತಪ್ಪುತಿಳಿದಿರಬಹುದು. ದೆಹಲಿಗೆ ತೆರಳಿ ವರಿಷ್ಠರಿಗೆ ಮನವರಿಕೆ ಮಾಡುತ್ತೇನೆ ಎಂದು ರಾಜಣ್ಣ ತಿಳಿಸಿದ್ದಾರೆ. ಅವರಿಗೆ ನಾವು ಬೆಂಬಲ ನೀಡುತ್ತೇವೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ಆ.11 ರಂದು ಸಹಕಾರ ಸಚಿವ ಕೆ.ಎನ್. ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದರು. ಆ ನಂತರ ಶಾಸಕ ರಾಜಣ್ಣ ಅಧಿವೇಶನಕ್ಕೂ ಹಾಜರಾಗಿರಲಿಲ್ಲ. ರಾಜೀನಾಮೆ ಕುರಿತು ಸ್ಪಷ್ಟನೆ ನೀಡುವಂತೆ ಪ್ರತಿಪಕ್ಷಗಳು ಸದನದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದರೂ ಉತ್ತರ ನೀಡಿರಲಿಲ್ಲ.
ಇತ್ತೀಚೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಮತ ಕಳ್ಳತನದ ವಿರುದ್ದ ಪ್ರತಿಭಟನೆ ನಡೆದಿತ್ತು. ಮತಗಳ್ಳತನಕ್ಕೆ ಸಂಬಂಧಿಸಿದಂತೆ ವರಿಷ್ಠರು ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಕೆ.ಎನ್. ರಾಜಣ್ಣ ಹೇಳಿಕೆ ನೀಡಿದ್ದು ಸಚಿವ ಸ್ಥಾನಕ್ಕೆ ಮುಳುವಾಗಿರಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು.
ಸಂಪುಟದಿಂದ ಕೆ.ಎನ್. ರಾಜಣ್ಣನವರನ್ನು ವಜಾಗೊಳಿಸಿ ಮೂರು ದಿನಗಳಾದರೂ ಕಾಂಗ್ರೆಸ್ ನಾಯಕರಿಗೆ ವಜಾಗೊಳಿಸಿದ್ದಕ್ಕೆ ಕಾರಣ ತಿಳಿದಿಲ್ಲ. ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರಾಗಿರುವ ರಾಜಣ್ಣನನ್ನು ವಜಾಗೊಳಿಸಿದ್ದನ್ನು ಖಂಡಿಸಿ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ದಲಿತ ಸಮುದಾಯದ ಶಾಸಕರು ಹಾಗೂ ಸಮಾನ ಮನಸ್ಕರು ಕೆ.ಎನ್. ರಾಜಣ್ಣನವರನ್ನು ಭೇಟಿ ಮಾಡಿದ್ದು, ಹೈಕಮಾಂಡ್ ಮನವೋಲಿಸಲು ತೀರ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ರಘುಮೂರ್ತಿ, ಮಾಯಕೊಂಡ ಬಸಂತಪ್ಪ , ಅನಿಲ್ ಚಿಕ್ಕಮಾದು, ಬಿ. ಎಮ್. ನಾಗರಾಜ್ ಹಾಜರಿದ್ದರು.