10 ಕೋಟಿ ರೂ. ಜಾಹೀರಾತು ತೆರಿಗೆ ಬಾಕಿ ; ಕೆಎಸ್ಸಿಎಗೆ ಬಿಬಿಎಂಪಿ ನೋಟಿಸ್
ಕಾಲ್ತುಳಿತ ಘಟನೆಯಲ್ಲಿ ಕೆಎಸ್ಸಿಎ ವಿರುದ್ಧ ಪ್ರಕರಣ ದಾಖಲಾಗಿ, ಕಾರ್ಯದರ್ಶಿ ಹಾಗೂ ಖಜಾಂಚಿ ರಾಜೀನಾಮೆ ನೀಡುತ್ತಿದ್ದಂತೆ ಕೆಎಸ್ಸಿಎಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ಬಾಕಿ ಇರುವ ಜಾಹೀರಾತು ತೆರಿಗೆ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ನೀಡಿದೆ.;
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂಕಷ್ಟಗಳ ಸರಮಾಲೆ ಶುರುವಾಗಿದೆ.
ಕಾಲ್ತುಳಿತ ಘಟನೆಯಲ್ಲಿ ಕೆಎಸ್ಸಿಎ ವಿರುದ್ಧ ಪ್ರಕರಣ ದಾಖಲಾಗಿ, ಕಾರ್ಯದರ್ಶಿ ಹಾಗೂ ಖಜಾಂಚಿ ರಾಜೀನಾಮೆ ನೀಡುತ್ತಿದ್ದಂತೆ ಈಗ ಹೊಸ ಸಂಕಷ್ಟ ಎದುರಾಗಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಜಾಹೀರಾತು ಪ್ರದರ್ಶಿಸಿದ್ದ ಕೆಎಸ್ಸಿಎಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಬಿಬಿಎಂಪಿ) ಬಾಕಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
10 ಕೋಟಿ ಜಾಹೀರಾತು ತೆರಿಗೆ ಬಾಕಿ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಜಾಹೀರಾತು ಪ್ರದರ್ಶನ ಮಾಡುತ್ತಿರುವ ಕೆಎಸ್ಸಿಎ ಕಳೆದ ಹಲವು ವರ್ಷಗಳಿಂದ 10 ಕೋಟಿ ರೂ. ಜಾಹೀರಾತು ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ತೆರಿಗೆ ವಸೂಲಿಗೆ ಬಿಬಿಎಂಪಿ ಸಾಕಷ್ಟು ಬಾರಿ ನೋಟಿಸ್ ನೀಡಿದ್ದರೂ ಪಾವತಿ ಮಾಡಿರಲಿಲ್ಲ.
ಕಾಲ್ತುಳಿತ ಘಟನೆಯ ಬಳಿಕ ತೀವ್ರ ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಸರ್ಕಾರ ಈಗ ಬಿಬಿಎಂಪಿ ಮೂಲಕ ಜಾಹೀರಾತು ತೆರಿಗೆ ವಸೂಲಿ ಮಾಡಲು ಮುಂದಾಗಿದ್ದು, ಮತ್ತೊಮ್ಮೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಲು ತಯಾರಿ ನಡೆಸಿದೆ.
ಜಾಹೀರಾತು ನಿಯಮ ಉಲ್ಲಂಘನೆಯ ಬಗ್ಗೆ ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಕೆಎಸ್ಸಿಎ ಎಚ್ಚೆತ್ತುಕೊಂಡಿರಲಿಲ್ಲ. ಈ ಬಾರಿ ಬಾಕಿ ಜಾಹೀರಾತು ತೆರಿಗೆ ಪಾವತಿಸದಿದ್ದರೆ ಕಾನೂನು ಸಮರ ಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಿದೆ.
ಆರ್ಸಿಬಿ ವಿಜಯೋತ್ಸವಕ್ಕೆ ಯಾವುದೇ ಪೂರ್ವ ತಯಾರಿ ನಡೆಸದೇ ಕಾಲ್ತುಳಿತ ದುರಂತಕ್ಕೆ ಕಾರಣವಾಗಿರುವ ಕೆಎಸ್ಸಿಎ ಮೇಲೆ ಪಾಲಿಕೆ ಬಾಕಿ ತೆರಿಗೆ ವಸೂಲಿಗೆ ಬೆನ್ನತ್ತಿರುವುದು ಸಂಕಷ್ಟದ ಸುಳಿಗೆ ಸಿಲುಕಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ 11ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 25ಲಕ್ಷ ರೂ. ಪರಿಹಾರ ಘೋಷಿಸಿದೆ.
ಪ್ರತಿಪಕ್ಷ ನಾಯಕ ಆಕ್ರೋಶ
ಬೆಂಗಳೂರು ಕಾಲ್ತುಳಿತ ಪ್ರಕರಣವು ಕುತ್ತಿಗೆಗೆ ಬರುತ್ತಿದ್ದಂತೆ ಕೆಎಸ್ಸಿಎ ಸಂಸ್ಥೆಯನ್ನು ಬಲಿಪಶು ಮಾಡಲು ಸಿಎಂ ಸಿದ್ದರಾಮಯ್ಯ ಅವರು ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರದ ಕ್ರಮದ ಮುಂದಿನ ಭಾಗವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಾಹೀರಾತು ತೆರಿಗೆ ಬಾಕಿ ನೆಪದಲ್ಲಿ ಬಿಬಿಎಂಪಿ ಮೂಲಕ ಕೆಎಸ್ಸಿಎ ಸಂಸ್ಥೆಯ ನಟ್ಟು ಬೋಲ್ಟು ಟೈಟು ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಡಿರುವ ತಪ್ಪು ಒಪ್ಪಿಕೊಂಡು ರಾಜೀನಾಮೆ ಕೊಡುವ ಬದಲು ಒಂದು ತಪ್ಪನ್ನು ಮುಚ್ಚಿಕೊಳ್ಳಲು ತಪ್ಪಿನ ಮೇಲೆ ತಪ್ಪು ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಸರ್ವನಾಶ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಅಶೋಕ್ ಹೇಳಿದ್ದಾರೆ.