Stampede| ವಿಧಾನಸೌಧ ಮುಂದೆ ಆರ್‌ಸಿಬಿ ವಿಜಯೋತ್ಸವಕ್ಕೆ ಸರ್ಕಾರ ಹಾಕಿತ್ತು 19 ಷರತ್ತು!

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮ ಮಾಡಲು ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ 19 ಷರತ್ತುಗಳನ್ನು ಹಾಕಿತ್ತು. ಕಾರ್ಯಕ್ರಮಕ್ಕೆ ಅನುಮತಿ ನೀಡಲು 19 ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿತ್ತು ಎಂಬುದು ಬಹಿರಂಗವಾಗಿದೆ.;

Update: 2025-06-07 05:24 GMT

ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆದ ಆರ್‌ಸಿಬಿ ಸನ್ಮಾನ

ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ʼಆರ್‌ಸಿಬಿ ತಂಡದ ಆಟಗಾರರಿಗೆ ಸನ್ಮಾನʼ ಕಾರ್ಯಕ್ರಮ ಆಯೋಜಿಸಲು ಕೆಎಸ್‌ಸಿಎ ಸಲ್ಲಿಸಿದ್ದ ಕೋರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುವ ಜೊತೆಗೆ 19 ಷರತ್ತುಗಳನ್ನೂ ವಿಧಿಸಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಭೀಕರ ಕಾಲ್ತುಳಿತದಲ್ಲಿ ೧೧ ಮಂದಿ ಮೃತಪಟ್ಟ ಪ್ರಕರಣ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿತ್ತು. ಘಟನೆ ಹಿನ್ನೆಲೆಯಲ್ಲಿ ಸರ್ಕಾರ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿ, ಕೆಎಸ್‌ಸಿಎ, ಕಾರ್ಯಕ್ರಮ ಸಂಘಟಕರಾದ ಡಿಎನ್‌ಎ ಇವೆಂಟ್ಸ್‌ ಹಾಗೂ ಆರ್‌ಸಿಬಿ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಬೆನ್ನಲ್ಲೇ ಕಾರ್ಯಕ್ರಮ ಆಯೋಜನೆಗೆ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ.  

ಸರ್ಕಾರ ವಿಧಿಸಿದ್ದ ಷರತ್ತುಗಳೇನು? 

1. ವಿಜಯೋತ್ಸವದಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳಿಗಾಗಲಿ, (ಗ್ರಾಂಡ್ ಸ್ಟೆಪ್ಸ್), ಪ್ರತಿಮೆಗಾಗಲಿ, ರಸ್ತೆಗಾಗಲಿ, ಉದ್ಯಾನವನಕ್ಕಾಗಲಿ ಯಾವುದೇ ರೀತಿಯ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಯಾವುದೇ ರೀತಿಯ ನಷ್ಟ ಸಂಭವಿಸಿದಲ್ಲಿ ಅದರ ಸಂಪೂರ್ಣ ದುರಸ್ತಿ ಅಥವಾ ವೆಚ್ಚವನ್ನು ಕೆಎಸ್‌ಸಿಎ ಭರಿಸಬೇಕು. 

2. ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ಕಾರ್ಯಕ್ರಮ ನಡೆಸಬೇಕು. ಈ ಕುರಿತು ಪೊಲೀಸ್ ಇಲಾಖೆಯೊಂದಿಗೆ  ಸಮನ್ವಯತೆ ಸಾಧಿಸಿ ಕಾರ್ಯ ನಿರ್ವಹಿಸಬೇಕು.  

3. ಕಚೇರಿ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯಕ್ರಮ ನಡೆಸಬೇಕು.

4. ಕಾರ್ಯಕ್ರಮ ನಡೆಯುವ ಸ್ಥಳವನ್ನು ಸ್ವಚ್ಛವಾಗಿಡಬೇಕು.

5. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲಿ/ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. 

6. ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ಲಘು ಉಪಾಹಾರ ಅಥವಾ ಭೋಜನ ಕೂಟ ಏರ್ಪಡಬೇಕು. ಉಪಹಾರ ವ್ಯವಸ್ಥೆಯನ್ನು ಮಾಡುವ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಭದ್ರತಾ ಠೇವಣಿಯಾಗಿ ಮುಂಗಡವಾಗಿ 10 ಸಾವಿರ ರೂ. ಇಡಬೇಕು. ಕಾರ್ಯಕ್ರಮ ಮುಗಿದ ನಂತರ ಯಾವುದೇ ದೂರುಗಳಿಲ್ಲದಿದ್ದಲ್ಲಿ ಆ ಮೊತ್ತವನ್ನು ಸಂಬಂಧಪಟ್ಟ ಸಂಸ್ಥೆಗೆ ಹಿಂತಿರುಗಿಸಲಾಗುವುದು.

7. ಕಾರ್ಯಕ್ರಮ ನಡೆಯುವ 1 ದಿನ ಮುಂಚೆ ಸ್ವಚ್ಛತಾ ವೆಚ್ಚವಾಗಿ 10 ರೂ.ಗಳನ್ನು ಪಾವತಿಸಬೇಕು. 

8. ಕಾರಣಾಂತರದಿಂದ ಕಾರ್ಯಕ್ರಮ ರದ್ದಾದಲ್ಲಿ ಮುಂಗಡವಾಗಿ ಪಾವತಿಸುವ ಸ್ವಚ್ಛತಾ ವೆಚ್ಚವನ್ನು ಹಿಂದಿರುಗಿಸುವುದಿಲ್ಲ.

9. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸ್ಟೇಜ್‌ ಅಳವಡಿಸಿದಲ್ಲಿ ವಿಧಾನಸೌಧದ ಕಟ್ಟಡಗಳ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಂದ ಧೃಢೀಕರಣವನ್ನು ಕಡ್ಡಾಯವಾಗಿ ಪಡೆಯಬೇಕು.  

10. ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುವಾಗ, ನಡೆಸುವಾಗ ಯಾವುದೇ ರೀತಿಯ ಅವಘಡ ಸಂಭವಿಸಿದರೆ ತಮ್ಮ ಸಂಸ್ಥೆಯೇ ಪೂರ್ಣ ಜವಾಬ್ದಾರಿಯಾಗಿರುತ್ತದೆ.

11. ವಿದ್ಯುತ್ ಉಪಕರಣಗಳನ್ನು ಆಳವಡಿಸಿದಲ್ಲಿ ವಿಧಾನಸೌಧದ ಪಿಡಬ್ಲುಡಿ ವಿದ್ಯುತ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರ ಧೃಢೀಕರಣ ಪಡೆಯುವುದು ಕಡ್ಡಾಯ.

12. ಆಹ್ವಾನ ಪತ್ರಿಕೆ ಸಿದ್ಧಪಡಿಸುವಾಗ ರಾಜ್ಯ ಶಿಷ್ಟಾಚಾರದಂತೆ ಧೃಢೀಕರಣ ಪಡೆಯುವುದು ಕಡ್ಡಾಯ.

13. ವಿಧಾಸೌಧ ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಡ್ರೋನ್ ನಿಷೇಧಿತ ಪ್ರದೇಶ ಎಂದು ಗುರುತಿಸಿರುವುದರಿಂದ ಡ್ರೋನ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ.

14.ಅಗ್ನಿಶಾಮಕ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು. 

15. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು.  

16. ಕಾರ್ಯಕ್ರಮಕ್ಕೆ ಅಗತ್ಯ ಟೆಂಟ್ ಇನ್ನಿತರ ವ್ಯವಸ್ಥೆ ಕಲ್ಪಿಸಿದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು/ಆಯೋಜಕರು ಭದ್ರತಾ ಠೇವಣಿಯಾಗಿ 15 ಲಕ್ಷ ರೂ. ಪಾವತಿಸಬೇಕು. 

17. ಕಾರ್ಯಕ್ರಮಕ್ಕಾಗಿ ಅಳವಡಿಸುವ ಪೀಠೋಪಕರಣಗಳನ್ನು ಕಾರ್ಯಕ್ರಮ ಮುಕ್ತಾಯಗೊಂಡ 3 ಗಂಟೆಗಳೊಳಗೆ ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಪಾವತಿಸಲಾಗಿರುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

18. ವಿಧಾನಸೌಧದ ಆವರಣದ ಹೊರಗೆ ಜನ ಸೇರುವುದರಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಬಿಬಿಎಂಪಿ ಮತ್ತು ಇನ್ನಿತರ ಸಂಬಂಧಪಟ್ಟ ಪ್ರಾಧಿಕಾರಿಗಳ ಪೂರ್ವನುಮತಿ ಪಡೆದು ಕಾರ್ಯಕ್ರಮ ನಡೆಸಬೇಕು.

19. ಆಹ್ವಾನ ಪತ್ರಿಕೆಯೊಂದಿಗೆ ಈ ಕಾರ್ಯಕ್ರಮಕ್ಕೆ ಆಗಮಿಸುವ ಆಹ್ವಾನಿತರು, ಗಣ್ಯರು ಮತ್ತು ಕಾರ್ಯಕ್ರಮಕ್ಕೆ ಬರುವ ಇತರರನ್ನು ಗುರುತಿಸಿ, ಕಾರ್ಯಕ್ರಮದ ಸ್ಥಳಕ್ಕೆ ಬಿಡುವ ಜವಾಬ್ದಾರಿ ಕೆಎಸ್‌ಸಿಎಗೆ ಸೇರಿರುತ್ತದೆ. 

Tags:    

Similar News