Invest Karnataka 2025: ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯುತ್ತಮ ರಾಜ್ಯ: ರಾಜನಾಥ್ ಸಿಂಗ್
Invest Karnataka 2025: ಇನ್ವೆಸ್ಟ್ ಕರ್ನಾಟಕ-2025ಕ್ಕೆ ಚಾಲನೆ ಕೊಟ್ಟ ನಂತರ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯದ ಸಾಧನೆಗಳನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ಹೂಡಿಕೆಗೆ ಕರ್ನಾಟಕ ಅತ್ಯುತ್ತಮ ರಾಜ್ಯ ಎಂದಿದ್ದಾರೆ.;
ಬಹು ನಿರೀಕ್ಷಿತ ಇನ್ವೆಸ್ಟ್ ಕರ್ನಾಟಕ 2025 (Invest Karnataka 2025) ಸಮಾವೇಶಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯದ ಬೆಳವಣಿಗೆಗಳನ್ನು ಕೊಂಡಾಡಿದರು.
'ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕೆಲಸದ ಪರಿಸರವನ್ನು ಹೊಂದಿರುವ ಕರ್ನಾಟಕ ಬಂಡವಾಳ ಹೂಡಿಕೆಗೆ ಹೇಳಿಮಾಡಿಸಿದ ರಾಜ್ಯ. ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡಿದರೆ ಇಡೀ ದೇಶವೇ ಅವರ ಬೆನ್ನಿಗಿರಲಿದೆ. ಭಾರತದ ಭವಿಷ್ಯದ ಬಗ್ಗೆ ಅನುಮಾನವಿರುವವರು ಒಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಐಟಿ, ಸ್ಟಾರ್ಟ್ಅಪ್ ಹಾಗೂ ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದರೆ, ಅವರ ಸಂಶಯಗಳೆಲ್ಲ ನಿವಾರಣೆಯಾಗುತ್ತವೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶವಾಗಿರುವ ಇನ್ವೆಸ್ಟ್ ಕರ್ನಾಟಕ 2025 ಫೆ.11 ರಿಂದ ಫೆ.14ರವರೆಗೆ ನಡೆಯಲಿದ್ದು, ಸಮಾವೇಶದಲ್ಲಿ ಜಗತ್ತಿನ ನಾನಾ ದೇಶಗಳ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
'ಕರ್ನಾಟಕವು ಜ್ಞಾನ ಮತ್ತು ಸಂಪತ್ತು ಎರಡೂ ಮೇಳೈಸಿರುವ ರಾಜ್ಯವಾಗಿದೆ. ದೇಶದ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ವೈಮಾಂತರಿಕ್ಷ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಯುವಜನರ ಆಗರವಾಗಿದೆ. ಇಲ್ಲಿರುವ ಶಕ್ತಿ, ಮಹತ್ತ್ವಾಕಾಂಕ್ಷೆ ಮತ್ತು ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಕರ್ನಾಟಕ ರಾಜ್ಯದಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ . ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆಯೇ ಕಾರಣ' ಎಂದು ರಾಜನಾಥ್ ಸಿಂಗ್ ಸಂತಸ ವ್ಯಕ್ತಪಡಿಸಿದರು.
ಮಾರುಕಟ್ಟೆ ಆಧರಿತ ಆರ್ಥಿಕತೆ ಮಾತ್ರ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಲ್ಲದು. ಇದು ಸಾಧ್ಯವಾಗಬೇಕೆಂದರೆ ಖಾಸಗಿ ಉದ್ಯಮಿಗಳು ಬಹಳ ಮುಖ್ಯ. ಹಿಂದೆ ಹೂಡಿಕೆದಾರರಿಗೆ ಕೆಂಪುಪಟ್ಟಿಯ ತೊಂದರೆ ಎದುರಾಗುತ್ತಿತ್ತು, ಆದರೆ ಈಗ ರತ್ನಗಂಬಳಿಯ ಸ್ವಾಗತ ಸಿಗುತ್ತಿದೆ. ಭಾರತವು ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಸರಕಾರದಿಂದ ಪ್ರಮುಖ ನಿರ್ಧಾರಗಳೂ ಹೊರಬರುತ್ತಿವೆ ಎಂದು ರಾಜನಾಥ್ ಸಿಂಗ್ ವಿವರಿಸಿದರು.
ಸಮಾವೇಶದಲ್ಲಿ 16 ದೇಶಗಳ ರಾಯಭಾರಿಗಳು ಭಾಗಿ
ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳೊಂದಿಗೆ, ಹಲವು ದೇಶಗಳ ರಾಯಭಾರಿಗಳು ಭಾಗವಹಿಸಿದ್ದಾರೆ.
ಬಹ್ರೇನ್ ದೇಶದ ರಾಯಭಾರಿ ಮಹಮದ್ ಅಲ್ ಗಾವ್ಡ್, ಕ್ಯೂಬಾದ ಅಬೆಲ್ ಅಬಾಲ್ ಡೆಸ್ಪೇನ್, ಇಟಲಿಯ ಆಂಟೋನಿಯೊ ಬಾರ್ತೋಲಿ, ನೇಪಾಳದ ಡಾ. ಶಂಕರ್ ಪ್ರಸಾದ್ ಶರ್ಮ, ಪೋಲೆಂಡಿನ ಸೆಬಾಸ್ಟಿಯನ್ ಡಾಮ್ಜಾಲ್ಸ್ಕಿ, ಮಲೇಷ್ಯಾದ ದಾತೊ ಮಜಾಫರ್ ಷಾ ಮುಸ್ತಫ, ಜಪಾನಿನ ಓನೋ ಕೀಚಿ, ಕಾಂಗೋದ ರೇಮಂಡ್ ಸರ್ಜ್ ಬೇಲ್, ಜಮೈಕಾದ ಜೇಸನ್ ಹಾಲ್ ಫಿಜಿಯ ಜಗನ್ನಾಥ ಸ್ವಾಮಿ, ಜಮೈಕಾದ ಜೇಸನ್ ಹಾಲ್, ಕಝಕಸ್ತಾನದ ನೂರುಲಾನ್ ಝಲ್ಗಸ್ಬಯೇವ್, ಮೊರಾಕ್ಕೋದ ಮಹಮದ್ ಮಾಲೀಕಿ, ಸೀಷೆಲ್ಸ್ ನ ಲಲಟಿಯಾನಾ ಅಕೌಷೆ, ತಝಕಿಸ್ತಾನದ ಲೂಕ್ಮನ್ ಬೊಬಕಾಲೊಜೋಡ, ಟೋಗೋದ ಯಾವೋ ಇಡೆಂ ಮತ್ತು ಜಿಂಬಾಬ್ವೆಯ ಸ್ಟೆಲ್ಲಾ ನೋಮೋ ಸೇರಿದಂತೆ ಒಟ್ಟು 16 ದೇಶಗಳ ರಾಯಭಾರಿಗಳು ಭಾಗವಹಿಸಿದ್ದಾರೆ.