ರಾಜಣ್ಣ ನಿವಾಸದಲ್ಲಿ ಔತಣಕೂಟ; ವಿಶೇಷ ಏನಿದೆ ಎಂದು ಪ್ರಶ್ನಿಸಿದ ಸತೀಶ್ ಜಾರಕಿಹೊಳಿ
ನಾವು ಸೇರಿದಾಗಲೆಲ್ಲ ರಾಜಕೀಯವನ್ನೇ ಮಾತಾಡಬೇಕು ಎಂದು ಏನೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ರಾಜಣ್ಣ ನಿವಾಸದಲ್ಲಿ ಔತಣಕೂಟ ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಮನೆಗೆ ಊಟಕ್ಕೆ ಹೋಗುವುದರಲ್ಲಿ ವಿಶೇಷ ಏನಿಲ್ಲ. ನಾವು ಭೇಟಿ ಆಗುವುದು, ಒಟ್ಟಿಗೆ ಸೇರಿ ಮಾತಾಡುವುದು ಹೊಸದಲ್ಲ. ನಾವು ಸೇರಿದಾಗಲೆಲ್ಲ ರಾಜಕೀಯವನ್ನೇ ಮಾತಾಡಬೇಕೆಂದೇನೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಜಣ್ಣ ನಿವಾಸದಲ್ಲಿ ಔತಣಕೂಟ ಆಯೋಜನೆ ಮಾಮೂಲಿಯಂತಿದೆ. ನಾಯಕತ್ವ ಬದಲಾವಣೆ ವಿಚಾರವನ್ನು ಪದೇ ಪದೇ ಕೇಳಿದರೆ ಏನು ಉತ್ತರ ಕೊಡೋದು?, ಯಾವುದನ್ನೂ ನಾವು ನಿರ್ಧಾರ ಮಾಡಲು ಆಗದು. ನೀವು ಬಂದು ಕೇಳಿದಾಗ ನಾವು ಓಡಿ ಹೋಗಲು ಆಗಲ್ಲ. ಕೇಳುವವರೂ ನೀವೇ, ಹೇಳುವವರು ನೀವೇ. ಒಂದು ಸುಳ್ಳು ಹೇಳಿದರೆ ಹತ್ತು ಸುಳ್ಳು ಹೇಳಬೇಕು," ಎಂದರು.
ಸಂಪುಟ ಪುನಾರಚನೆ ಕುರಿತು ಮಾತನಾಡಿದ ಅವರು, "ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ನಾನೂ ಒಬ್ಬ ಮಂತ್ರಿ, ಪಕ್ಷದ ಭಾಗ ಅಷ್ಟೇ. ಕಾಂಗ್ರೆಸ್ನಲ್ಲಿ ಏನು ನಡೆಯುತ್ತಿದೆ ಎಲ್ಲವೂ ನಿಮಗೇ ಗೊತ್ತು. ಅಲ್ಲದೆ ಜನರನ್ನು ಭೇಟಿ ಆಗುವುದರೊಳಗೇ ನಮಗೆ ಹತ್ತು ಗಂಟೆ ಆಗಿರುತ್ತದೆ" ಎಂದು ತಿಳಿಸಿದರು.