Namma Metro| ತುಮಕೂರುವರೆಗೆ ಮೆಟ್ರೋ ; ವರದಿ ಕೊಟ್ಟ ಬಿಎಂಆರ್ಸಿಎಲ್, ಮೆಟ್ರೋ ವಿಸ್ತರಣೆಯಿಂದ ಲಾಭವೇನು?
ಬೆಂಗಳೂರಿನ ಮಾದಾವರದಿಂದ ತುಮಕೂರಿನ ಶಿರಾ ಗೇಟ್ವರೆಗಿನ ಒಟ್ಟು 56.6 ಕಿ.ಮೀ. ಉದ್ದದ ಮೆಟ್ರೋ ಮಾರ್ಗದ ಕುರಿತು ಖಾಸಗಿ ಸಂಸ್ಥೆ ಕಾರ್ಯಸಾಧ್ಯತಾ ವರದಿ ಸಲ್ಲಿಸಿದೆ. ಈ ಮಾರ್ಗದಲ್ಲಿ ಒಟ್ಟು 25 ಎತ್ತರಿಸಿದ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.;
ನಮ್ಮ ಮೆಟ್ರೋ
ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿರುವ ʼನಮ್ಮ ಮೆಟ್ರೋʼ ನೆರೆಯ ಜಿಲ್ಲೆಗೂ ಕಾಲಿಡಲು ಸಿದ್ಧವಾಗಿದೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಸ್ಮಾರ್ಟ್ ಸಿಟಿ ತುಮಕೂರಿಗೂ ʼನಮ್ಮ ಮೆಟ್ರೋʼ ಯೋಜನೆ ವಿಸ್ತರಿಸುವ ಕಾಲ ಸನ್ನಿಹಿತವಾಗುತ್ತಿದೆ.
ತುಮಕೂರು -ಬೆಂಗಳೂರು ನಡುವೆ ಮೆಟ್ರೋ ಯೋಜನೆ ಆರಂಭಿಸುವ ಕುರಿತು ಖಾಸಗಿ ಸಂಸ್ಥೆಯೊಂದು ಕಾರ್ಯಸಾಧ್ಯತಾ ಪರೀಕ್ಷಾ ವರದಿ ತಯಾರಿಸಿ ಬಿಎಂಆರ್ಸಿಎಲ್ಗೆ ಸಲ್ಲಿಸಿದೆ. ಆ ವರದಿಯನ್ನು ಇದೀಗ ಬಿಎಂಆರ್ಸಿಎಲ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಮೆಟ್ರೋ ವಿಸ್ತರಣೆ ಎಲ್ಲಿಂದ?
ಬೆಂಗಳೂರಿನ ಮಾದಾವರದವರೆಗೆ ಹಸಿರು ಮಾರ್ಗದಲ್ಲಿ ʼನಮ್ಮ ಮೆಟ್ರೋʼ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿಂದ ತುಮಕೂರಿನ ಶಿರಾ ಗೇಟ್ವರೆಗಿನ ಒಟ್ಟು 56.6 ಕಿ.ಮೀ. ಉದ್ದದ ಮೆಟ್ರೋ ಮಾರ್ಗದ ಕುರಿತು ಖಾಸಗಿ ಸಂಸ್ಥೆ ಕಾರ್ಯಸಾಧ್ಯತಾ ವರದಿ ಸಲ್ಲಿಸಿದೆ.
ಈ ಮಾರ್ಗದಲ್ಲಿ ಒಟ್ಟು 25 ಎತ್ತರಿಸಿದ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಕುರಿತು ಬಜೆಟ್ ಘೋಷಣೆ ಬಳಿಕ ಬಿಎಂಆರ್ಸಿಎಲ್ ಈ ಸಂಬಂಧ ಕಾರ್ಯಸಾಧ್ಯತಾ ಪರೀಕ್ಷಾ ವರದಿ ಸಲ್ಲಿಸಲು ಖಾಸಗಿ ಕಂಪೆನಿಗೆ ಟೆಂಡರ್ ನೀಡಿತ್ತು. ಈಗ ಖಾಸಗಿ ಸಂಸ್ಥೆ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಹೇಳಿದ್ದಾರೆ.
ಮೆಟ್ರೋ ಜಾಲ ಹೇಗಿದೆ?
ಬೆಂಗಳೂರಿನಲ್ಲಿ ʼನಮ್ಮ ಮೆಟ್ರೋʼ ಮಾರ್ಗ ದಕ್ಷಿಣದಿಂದ ಉತ್ತರಕ್ಕೆ 33 ಕಿ.ಮೀ ವಿಸ್ತರಿಸಿಕೊಂಡಿದೆ. ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಮಾದಾವರದವರೆಗೂ ರೈಲು ಸಂಚಾರ ನಡೆಸುತ್ತಿದೆ. ಈ ಹಸಿರು ಮಾರ್ಗವನ್ನೇ ತುಮಕೂರುವರೆಗೆ ವಿಸ್ತರಣೆ ಮಾಡಲು ನಿರ್ಧರಿಸಿ 2024 -25 ಬಜೆಟ್ನಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು.
ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಯೋಜನೆ ತಕ್ಷಣಕ್ಕೆ ಆರಂಭವಾಗುವುದಿಲ್ಲ. ಬದಲಿಗೆ ಬೆಂಗಳೂರಿನಲ್ಲಿ ಕಾಮಗಾರಿ ಹಂತದಲ್ಲಿರುವ ಹಳದಿ, ಗುಲಾಬಿ, ನೀಲಿ ಮಾರ್ಗ ಪೂರ್ಣಗೊಳ್ಳಬೇಕು. ಸಮೀಕ್ಷೆ ಹಂತದಲ್ಲಿರುವ ಪ್ರಸ್ತಾವಿತ ಕೆಂಪು, ಕಿತ್ತಳೆ ಮಾರ್ಗ ಮುಗಿದ ನಂತರ ತುಮಕೂರು-ಬೆಂಗಳೂರು ಮೆಟ್ರೋ ಮಾರ್ಗದ ಕಾಮಗಾರಿ ಆರಂಭವಾಗಲಿದೆ. ಅಂದಾಜಿನ ಪ್ರಕಾರ 2035 ವೇಳೆಗೆ ಯೋಜನೆ ಆರಂಭವಾಗು ಸಾಧ್ಯತೆ ಇದೆ ಎನ್ನಲಾಗಿದೆ.
ತುಮಕೂರುವರೆಗೆ ಎಲ್ಲೆಲ್ಲಿ ನಿಲ್ದಾಣ?
ಮಾದಾವರ ನಿಲ್ದಾಣದಿಂದ ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್ಗೇಟ್, ಬೂದಿಹಾಳ್, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್ಪೇಟೆ, ನಲ್ಲಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್ ಹಾಗೂ ನಾಗಣ್ಣನಪಾಳ್ಯ ಹಾಗೂ ಶಿರಾ ಗೇಟ್ ಬಳಿ ಮೆಟ್ರೋ ನಿಲ್ದಾಣಗಳು ಇರಲಿವೆ.
ಮಾದಾವರದಿಂದ ಮೊದಲು ನೆಲಮಂಗಲದವರೆಗೆ ಒಟ್ಟು 11ಕಿ.ಮೀ.ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಆ ನಂತರ ನೆಲಮಂಗಲದಿಂದ ತುಮಕೂರುವರೆಗೆ 40 ಕಿ.ಮೀ ಮಾರ್ಗ ನಿರ್ಮಿಸುವ ಯೋಜನೆ ಬಿಎಂಆರ್ಸಿಎಲ್ ಮುಂದಿದೆ ಎಂದು ತಿಳಿದು ಬಂದಿದೆ.
ಮೆಟ್ರೋ ವಿಸ್ತರಣೆಯಿಂದ ಅನುಕೂಲವೇನು?
ತುಮಕೂರುವರೆಗೆ ಮೆಟ್ರೋ ಯೋಜನೆ ವಿಸ್ತರಣೆಯಿಂದ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನೆಲಮಂಗಲ, ಸೋಂಪುರ, ದಾಬಸ್ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್ ಸೇರಿದಂತೆ ಹಲವು ಕೈಗಾರಿಕೆಗಳಿದ್ದು, ತುಮಕೂರಿನಿಂದ ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಮೆಟ್ರೋ ಸೇವೆ ಆರಂಭವಾದರೆ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಂದ ಬರುವವರು ತುಮಕೂರಿನಿಂದ ಬಸ್ ಮೂಲಕ ಬರಬೇಕಾಗಿದೆ. ಮೆಟ್ರೋ ಆರಂಭವಾದರೆ ಯಾವುದೇ ಸಂಚಾರ ದಟ್ಟಣೆಯ ಅಡೆತಡೆಯಿಲ್ಲದೇ ಬೆಂಗಳೂರು ನಗರ ಪ್ರವೇಶಿಸಬಹುದಾಗಿದೆ. ಬೆಂಗಳೂರಿಗೆ ಸಮಾನಾಂತರವಾಗಿ ತುಮಕೂರು ಕೂಡ ಅಭಿವೃದ್ಧಿಯಾಗಲಿದೆ.
ದಾಬಸ್ಪೇಟೆ ಸಮೀಪ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಕ್ವಿನ್ ಸಿಟಿ ತಲೆ ಎತ್ತಲಿದೆ. ಉದ್ದೇಶಿತ ಮೆಟ್ರೋ ಮಾರ್ಗ ಸೋಂಪುರ ಕೈಗಾರಿಕಾ ಪ್ರದೇಶದವರೆಗೂ ಬರಲಿದ್ದು, ಇದರಿಂದ ಕ್ವಿನ್ ಸಿಟಿಗೆ ಪೂರಕ ಸಾರಿಗೆಯಾಗಿ ಬದಲಾಗಲಿದೆ.
ಮೆಟ್ರೋ ಮಾರ್ಗ ಆರಂಭವಾದ ಬಳಿಕ ನೂರಾರು ಕಂಪನಿಗಳು ಕಾರ್ಯಾರಂಭಿಸಲಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ.
ತುಮಕೂರಿಗೆ ಲಾಭವೇನು?
ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆಯಾಗುವುದರಿಂದ ಬೆಂಗಳೂರಿಗೆ ಸರಿಸಮನಾಗಿ ಅಭಿವೃದ್ಧಿ ಕಾಣಲಿದೆ. ತುಮಕೂರು ಸುತ್ತಮುತ್ತ ಹೆಚ್ಚಿನ ಕೈಗಾರಿಕೆಗಳು ತಲೆ ಎತ್ತಲಿವೆ. ಈಗಾಗಲೇ ತುಮಕೂರಿನಲ್ಲಿ ಅಂತರಸನಹಳ್ಳಿ, ವಸಂತನರಸಾಪುರ ಕೈಗಾರಿಕಾ ಪ್ರದೇಶ ಸಾವಿರಾರು ಎಕರೆಯಲ್ಲಿ ತಲೆ ಎತ್ತಿದೆ. ಮೆಟ್ರೋ ಮಾರ್ಗ ಶಿರಾ ಗೇಟ್ ವರೆಗೆ ಬರುವುದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ನೆರವಾಗಲಿದೆ.
ಒಟ್ಟಾರೆ ಬೆಂಗಳೂರು -ತುಮಕೂರು ಮೆಟ್ರೋ ಮಾರ್ಗದ ಕಾರ್ಯಸಾಧ್ಯತಾ ಪರೀಕ್ಷೆಯ ವರದಿ ಸಿದ್ಧವಾಗಿದೆ. ಬಿಎಂಆರ್ಸಿಎಲ್ ಸಲ್ಲಿಸಿರುವ ವರದಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ, ಕೇಂದ್ರ ಸರ್ಕಾರದ ಒಪ್ಪಿಗೆ ಮಾತ್ರ ಬಾಕಿ ಇರಲಿದೆ.