Mysore MUDA Scam | ಪಾದಯಾತ್ರೆಗೆ ರಕ್ಷಣೆ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Update: 2024-08-03 06:03 GMT

ವಾಲ್ಮೀಕಿ ನಿಗಮದ ಅಕ್ರಮ ಮತ್ತು ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳು ನಡೆಸುತ್ತಿರುವ ಪಾದಯಾತ್ರೆಗೆ ಈಗಾಗಲೇ ಹೈಕೋರ್ಟ್ ಅನುಮತಿ ನೀಡಿದ್ದು, ಇದೀಗ ಕೆಂಗೇರಿಯಿಂದ ಮೈಸೂರುವರೆಗೆ ನಡೆಯುವ ಪಾದಯಾತ್ರೆಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಪಾದಯಾತ್ರೆಗೆ ಅನುಮತಿ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಆ.3 ರಿಂದ 10ರವರೆಗೆ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆಗೆ ಅನುಮತಿ ಕೇಳಿದರೂ ಸರ್ಕಾರ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಅನುಮತಿ ನೀಡಲು ನಿರ್ದೇಶಿಸುವಂತೆ ಹೈಕೋರ್ಟ್​​ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಮೊದಲೇ ಸರ್ಕಾರ ಪಾದಯಾತ್ರೆಗೆ ಅನುಮತಿ ನೀಡಿದೆ. ಇದೀಗ ಕೋರ್ಟ್, ಕಾನೂನು ಪ್ರಕಾರ ಪಾದಯಾತ್ರೆ ಭದ್ರತೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ರಾಮನಗರ, ಮಂಡ್ಯ ಎಸ್ಪಿ ಹಾಗೂ ಮೈಸೂರು ಪೊಲೀಸರಿಗೆ ಸೂಚಿಸಿದೆ.

ಶನಿವಾರದಿಂದ 8 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ಮುಂದಿನ ಶನಿವಾರ ಮೈಸೂರು ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಜೆಡಿಎಸ್​ ಪಕ್ಷದಿಂದ ಹಾಲಿ, ಮಾಜಿ ಶಾಸಕರು, ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಈ ಮೊದಲು ಪಾದಯಾತ್ರೆಗೆ ಬೆಂಬಲ ಕೊಡಲ್ಲ ಎಂದಿದ್ದ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮನವೊಲಿಸಲು ಯಶಸ್ವಿಯಾಗಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ʻʻಮೊದಲು ಪಾದಯಾತ್ರೆಗೆ ಅವಕಾಶ ಕೊಡಬಾರದು ಅಂದುಕೊಂಡಿದ್ವಿ, ಶಾಂತಿಯುತವಾಗಿ ಮಾಡ್ತೀವಿ ಅಂದಿದ್ದಕ್ಕೆ ಅವಕಾಶ ಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಆದರೆ ಇದಕ್ಕೂ ಮೊದಲು ಮಾತನಾಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಬೆಂಗಳೂರು ನಗರದಲ್ಲಿ ಪ್ರತಿಭಟನೆಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದರು.

Tags:    

Similar News