The Federal Interview | ಬೂಕರ್‌ ಪ್ರಶಸ್ತಿ ನಿರೀಕ್ಷೆಯಲ್ಲಿ 'ಹಾರ್ಟ್‌ ಲ್ಯಾಂಪ್‌': ವ್ಯಕ್ತಪಡಿಸಲಾಗದ ಭಾವನೆ ಎಂದ ಬಾನು ಮುಷ್ತಾಕ್

“ಸದ್ಯಕ್ಕೆ ನಾನು ಏಪ್ರಿಲ್‌ 8 ರಂದು ಆಯ್ಕೆಯಾಗುವ ಆರು ಕೃತಿಗಳಲ್ಲಿ ನನ್ನ ಕೃತಿ ಇರುತ್ತದೆಯೇ? ಹಾಗೆ ಆಯ್ಕೆ ಆದರೂ ಅಂತಿಮವಾಗಿ ಮೇ 20 ರಂದು ಆಯ್ಕೆಯಾಗುವ ಕೃತಿ ನನ್ನದಾಗಿರುತ್ತದೆಯೇ? ಎಂದು ಯೋಚಿಸುತ್ತಿದ್ದೇನೆ. ಆಗಲಿ ಎಂದು ಮನಸ್ಸು ಹಂಬಲಿಸುತ್ತಿದೆ.” ಎಂದು ಬಾನು ಮುಷ್ತಾಕ್ ಹೇಳಿದರು.;

Update: 2025-02-26 11:10 GMT
ಲೇಖಕಿ ಬಾನು ಮುಷ್ತಾಕ್

ಬಾನು ಮುಷ್ತಾಕ್‌ ಅವರ ಸಣ್ಣಕತೆಗಳ ಅನುವಾದಿತ ಸಂಕಲನ Heart Lamp ಕೃತಿ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿಗೆ ಪರಿಗಣಿಸಲು ಮಂಗಳವಾರ ಸಿದ್ಧವಾದ ದೀರ್ಘ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕನ್ನಡದ ಖ್ಯಾತ ಬರಹಗಾರ್ತಿ ಬಾನು ಮುಷ್ತಾಕ್‌ ಅವರು, ಹಿಂದೊಮ್ಮೆ ಮುಸ್ಲಿಂ ಸಮುದಾಯದ ಕುರಿತು ಬರೆದಿದ್ದ ಬರವಣಿಗೆ ವಿವಾದಾತ್ಮಕವಾಗಿ ಅವರನ್ನು ಮುಸ್ಲಿಂ ಸುಮುದಾಯ ಬಹಿಷ್ಕರಿಸಿದ್ದ ಘಟನೆಯೂ 2004ರಲ್ಲಿ ನಡೆದಿತ್ತು. ಇತ್ತೀಚಿನ ಕೆಲವು ದಶಕಗಳಲ್ಲಿ ಕೋಮು ಸೌಹಾರ್ದಕ್ಕೆ ಬಂದಿರುವ ಧಕ್ಕೆಯನ್ನು ಕುರಿತು ನೇರವಾಗಿ ದಿಟ್ಟವಾಗಿ ಮಾತನಾಡುತ್ತಿರುವ ಕೆಲವೇ ಕೆಲವರಲ್ಲಿ ಬಾನು ಮುಷ್ತಾಕ್‌ ಕೂಡ ಒಬ್ಬರು.

ಬೂಕರ್‌ ಪ್ರಶಸ್ತಿಯ ಹೊಸ್ತಿಲಲ್ಲಿ ನಿಂತಿರುವ ಬಾನು ಮುಷ್ತಾಕ್‌ ಅವರು  ತಮ್ಮ ಅನಿಸಿಕೆಗಳನ್ನು ದ ಫೆಡರಲ್‌ ಕರ್ನಾಟಕದ ಸಂದರ್ಶನದಲ್ಲಿ  ಹಂಚಿಕೊಂಡಿದ್ದಾರೆ.  ಹಾರ್ಟ್‌ ಲ್ಯಾಂಪ್‌ ಕೃತಿಯ ಬಗ್ಗೆ ಅವರಿಗೆ ಪ್ರಕಾಶಕರು ಕಳುಹಿಸಿದ ಸಂದೇಶದ ಬಳಿಕ ಅವರ ಮನಸ್ಸಲ್ಲಿ ಬಂದ ಸಂತೋಷವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

“ಸುಳ್ಳು ಹೇಳಲ್ಲ. ಬೂಕರ್‌ ಆಯ್ಕೆಗೆ ಪ್ರಕಾಶಕರು ಕಳುಹಿಸಿದ್ದ ಕಾರಣ, ಮನಸ್ಸಿನ ಒಂದು ಮೂಲೆಯಲ್ಲಿ, ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ನಿರೀಕ್ಷೆ ಇತ್ತು. ನಿನ್ನೆ (ಮಂಗಳವಾರ) ಸಂಜೆ 07.30 ಕ್ಕೆ ನಮ್ಮ ಪ್ರಕಾಶಕರಾದ ತಾರಾ (ಇವರು ಮೆಕ್ಸಿಕನ್)‌ ʻಇನ್ನು ಒಂದೆರಡು ಕ್ಷಣದಲ್ಲಿ ಆಯ್ಕೆ ಪ್ರಕಟವಾಗುತ್ತೆ. ನಿಮಗೆ link ಕಳುಹಿಸುತ್ತೇವೆʼ ಎಂದಾಗ ನಮ್ಮ Heart Lamp ದೀರ್ಘಪಟ್ಟಿಗೆ ಸೇರುವ ಬಗ್ಗೆ ಖಚಿತತೆ ಸಿಕ್ಕಿತು. ನಮ್ಮ Literary Agent ಕನಿಷ್ಕ ಅಂತೂ ಸಂತೋಷದಿಂದ ಕುಣಿದಾಡುತ್ತಿದ್ದ. ಅಂತಿಮವಾಗಿ ಪಟ್ಟಿಯಲ್ಲಿ ನಮ್ಮ ಕೃತಿ ಸೇರಿಕೊಂಡಿರುವುದು ಪ್ರಕಟವಾದಾಗ ನಾನು ನನ್ನ ಕಛೇರಿಯಲ್ಲಿದ್ದೆ. (ಬಾನು ಮುಷ್ತಾಕ್‌ ಹಾಸನದಲ್ಲಿ ವಕೀಲರಾಗಿದ್ದಾರೆ). ಎಲ್ಲರಲ್ಲೂ ಸಂಭ್ರಮ. ನನಗೆ ವ್ಯಕ್ತಪಡಿಸಲಾಗದ ಭಾವನೆ” ಎಂದರು.

Heart Lamp ಕೃತಿಯ ಯಶಸ್ಸಿನ ಹಾದಿ

ಬಾನು ಮುಷ್ತಾಕ್‌ ಅವರ ಸಣ್ಣಕತೆಗಳ ಅನುವಾದಿತ ಸಂಕಲನ Heart Lamp ಕೃತಿ ಅನುವಾದಕ್ಕೆ ಅನುವಾದ ಕ್ರಿಯೆಯನ್ನು ಕುರಿತು ಪ್ರಶ್ನಿಸಿದರೆ, “ನನ್ನ ಕಥೆಗಳ ಅನುವಾದಕ್ಕೆ ಕಾಲ ಪಕ್ವವಾಗಿದೆ ಅನ್ನಿಸಿದಾಗ ನನ್ನ ಗೆಳೆಯರಾದ ಬಸವ ಬಿರಾದಾರ್‌ ಅವರ ಸಲಹೆ ಕೇಳಿದ್ದೆ. ಅವರು ದೀಪಾ ಬಸ್ತಿ ಅವರ ಹೆಸರನ್ನು ಸೂಚಿಸಿ, ಅವರಿಂದ ಅನುವಾದ ಮಾಡಿಸಬಹುದೆಂದರು. ದೀಪಾ ಬಸ್ತಿ ಗೆ ನನ್ನ ʻಹಸೀನಾʼ ಕಥೆಯನ್ನು ಕಳುಹಿಸಿ ಇಷ್ಟವಾದರೆ Englishಗೆ ಅನುವಾದ ಮಾಡಿ ಎಂದು ಮನವಿ ಮಾಡಿದೆ. ಅದರ ಅನುವಾದವಾದ ನಂತರ ಆ ಕಥೆಯನ್ನು PEN Printer Prize ಪ್ರಶಸ್ತಿಗೆ ಅವರು ಕಳುಹಿಸಿದರು. ನಮ್ಮ ಕಥೆ ಅವರ ಆಯ್ಕೆಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದೇ ಅಲ್ಲದೆ, ಪ್ರಶಸ್ತಿಯನ್ನೂ ಗಳಿಸಿಕೊಂಡಿತು. ಈ ಪ್ರಶಸ್ತಿಯ ಒಂದು ಮುಖ್ಯ ಸಂಗತಿಯೆಂದರೆ, ಈ ರೀತಿ ಆಯ್ಕೆಯಾದ ಕಥೆಯೂ ಸೇರಿದಂತೆ ಹನ್ನೆರಡು ಕಥೆಗಳನ್ನು ಆಯ್ಕೆಮಾಡಿದರೆ ಅದನ್ನು ಪ್ರಕಟಿಸಲಾಗುತ್ತದೆ. ಅದಕ್ಕೆ ಅವರ literary Agent ನಮ್ಮನ್ನು ಸಂಪರ್ಕಿಸಿದರು. ಅದರಲ್ಲಿನ Red Lungi ಎನ್ನುವ ಕಥೆಗೆ Paris Review ನಲ್ಲಿ ಉತ್ತಮ ಪ್ರತಿಕ್ರಿಯೆ ಬಂದು ಅದರಲ್ಲಿ ಪ್ರಕಟವೂ ಆಯಿತು. ಅದೇ ರೀತಿ ನನ್ನ ಇನ್ನೊಂದು ಕಥೆ “ಒಮ್ಮೆ ಹೆಣ್ಣಾಗು ಪ್ರಭುವೇ” ಕಥೆ The Bffler literary magazine (This is a Americás leading voice of interesting and unexpected left wing political criticism cultural analysis short stories poems and art) ನಲ್ಲಿ ಪ್ರಕಟವಾಯಿತು. ಇದೀಗ Heart Lamp ಕೃತಿ ಪ್ರಕಟಣೆಗೆ ಸಿದ್ಧವಾಗಿದೆ. ಏಪ್ರಿಲ್‌ ಮೊದಲವಾರದಲ್ಲಿ ಓದುಗರಿಗೆ ಲಭ್ಯವಾಗಲಿದೆ” ಎಂದು ಮುಗುಳ್ನಕ್ಕರು.

ಕಾಗದದ ಒಂದೇ ಮಗ್ಗಲಿಗೆ ಬರೆಯುವುದು ಹೇಗೆ?

ಸಾಹಿತ್ಯ ಲೋಕಕ್ಕೆ ನೀವು ನಡೆದು ಬಂದ ದಾರಿಯನ್ನು ನೆನಪಿಸಕೊಂಡರೆ ಕಾಣಿಸುವ ಚಿತ್ರ ಯಾವುದು? ಎಂದು ಕೇಳಿದರೆ, ದೀರ್ಘ ನಿಟ್ಟುಸಿರು ಎಳೆದುಕೊಂಡು. “ನನಗೆ ಅಕ್ಷರ ಜ್ಞಾನ ಬರುತ್ತಿದ್ದಂತೆ ನಾನು ಬರೆಯಲು ಆರಂಭಿಸಿದೆ. ನನ್ನ ತಂದೆಗೆ ಸಾಮಾಜಿಕ ಪ್ರಜ್ಞೆ ಇತ್ತು. ಆದರೆ ತಾಯಿಗೆ ಅಷ್ಟಿರಲಿಲ್ಲ. ಆ ಕಾಲಕ್ಕೆ ಇಂದಿನಂತೆ ನಮಗೆ ದಾರಿ ತೋರಿಸುವವರೂ ಇರಲಿಲ್ಲ. ನಾನು ಏಳನೇಯ ತರಗತಿಯಲ್ಲಿ ಓದುತ್ತಿದ್ದಾಗಲೇ ಕಾದಂಬರಿಯೊಂದನ್ನು ಬರೆಯುವ ಸಾಹಸ ಮಾಡಿದ್ದೆ. ನಾನು ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಗೆ ಕಥೆಯೊಂದನ್ನು ಕಳುಹಿಸಿದೆ. ಆಗ ಸಂಪಾದಕರಿಂದ ʼಕಾಗದದ ಒಂದೇ ಮಗ್ಗಲಿಗೆ ಬರೆದು ಕಳುಹಿಸಿʼ ಎಂಬ ಪತ್ರ ಬಂತು. ಕಾಗದದ ಒಂದೇ ಮಗ್ಗಲಿಗೆ ಬರೆಯುವುದು ಹೇಗೆ? ಎಂಬ ಜಿಜ್ಞಾಸೆ. ನನಗೆ ಗೊತ್ತಿಲ್ಲ. ಕೇಳಲು ಯಾರೂ ಇಲ್ಲ. ಅನೇಕ ಕಥೆಗಳನ್ನು ಬರೆದರೂ, ಅದನ್ನು ಪ್ರಕಟಣೆಗೆ ಕಳುಹಿಸುವುದು ಹೇಗೆಂದು ನನಗೆ ಗೊತ್ತಿರಲಿಲ್ಲ.

ಪ್ರಜಾಮತದ ಮ.ನ. ಮೂರ್ತಿ

ಒಮ್ಮೆ ಬೆಂಗಳೂರಿಗೆ ಹೋದಾಗ ಜಯನಗರದಲ್ಲಿ ತಿರುಗಾಡುತ್ತಿದ್ದೆ. ಆಗ ಮನೆಯೊಂದರ ಮುಂದು ಮ.ನ. ಮೂರ್ತಿ ಎಂಬ ಫಲಕ ಕಾಣಿಸಿತು. ಅವರು ಬರಹಗಾರರು ಮತ್ತು ಪ್ರಜಾಮತ ಪತ್ರಿಕೆಯ ಸಂಪಾದಕರೆಂದು ಆ ವೇಳೆಗೆ ಗೊತ್ತಾಗಿತ್ತು. ಧೈರ್ಯ ಮಾಡಿ ಬಾಗಿಲು ತಟ್ಟಿದೆ, ಬಾಗಿಲು ತೆರೆಯಿತು. ಮ.ನ. ಮೂರ್ತಿ ಮನೆಯಲ್ಲಿಯೇ ಇದ್ದು ಒಳಕ್ಕೆ ಕರೆದು ಆತ್ಮೀಯವಾಗಿ ಮಾತನಾಡಿಸಿದರು. ಅವರ ಮುಂದೆ ಇದೇ ಪ್ರಶ್ನೆ ಇಟ್ಟೆ. ʼಕಾಗದದ ಒಂದೇ ಮಗ್ಗಲಿಗೆ ಬರೆಯುವುದೆಂದರೆ ಹೇಗೆ?ʼ ಅವರು ನಕ್ಕು ವಿವರಿಸಿದರು. ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿದರು. ಹಾಗೆ ಕಾಗದದ ಒಂದೇ ಮಗ್ಗಲಿಗೆ ಕಥೆಯನ್ನು ಬರೆದು ಕಳುಹಿಸುತ್ತಿದ್ದೆ. ಯಾವುದೂ ಪ್ರಕಟವಾಗಲಿಲ್ಲ. ಕೊನೆಗೆ ನನಗೆ ಉತ್ತಮವೆನ್ನಿಸಿದ ಕಥೆಯೊಂದನ್ನು ಬರೆದು ಮ. ನ. ಮೂರ್ತಿ ಅವರಿಗೆ ಕಳುಹಿಸಿದೆ.. ಪ್ರತಿವಾರವೂ, ನನ್ನ ಕಥೆ ಪ್ರಕಟವಾಗುವುದೆಂದು ಕಾಯುವುದೇ ಕೆಲಸವಾಗಿತ್ತು. 1974ರಲ್ಲಿ ನನ್ನ ಮದುವೆಯಾಯಿತು, ನಾನು ನನ್ನ ತವರಿಗೆ ಹೋದಾಗ ಅಂಗಡಿಯಲ್ಲಿ ಪ್ರಜಾಮತ ಕೊಂಡ ನನ್ನ ಪತಿ ಸಂಭ್ರಮದಿಂದ ಮನೆಗೆ ಬಂದರು. ನನ್ನ ಕಥೆ ಪ್ರಕಟವಾಗಿತ್ತು. ನಾನು ಬರಹಗಾರಳಾದೆ. ಆಮೆಲಿನದು ಎಲ್ಲರಿಗೂ ಗೊತ್ತಿರುವ ಕಥೆ. ಪ್ರಜಾವಣಿಯಿಂದ ಲಂಕೇಶ್‌ ಪತ್ರಿಕೆಯ ವರೆಗೆ ಎಲ್ಲ ಸಾಪ್ತಾಹಿಕ, ಮಾಸಿಕಗಳಿಗೆ ಕಥೆಯನ್ನು ಬರೆಯುತ್ತಿದ್ದೆ… “ ಎಂದರು.

“ಸದ್ಯಕ್ಕೆ ನಾನು ಏಪ್ರಿಲ್‌ 8 ರಂದು ಆಯ್ಕೆಯಾಗುವ ಆರು ಕೃತಿಗಳಲ್ಲಿ ನನ್ನ ಕೃತಿ ಇರುತ್ತದೆಯೇ? ಹಾಗೆ ಆಯ್ಕೆ ಆದರೂ ಅಂತಿಮವಾಗಿ ಮೇ 20 ರಂದು ಆಯ್ಕೆಯಾಗುವ ಕೃತಿ ನನ್ನದಾಗಿರುತ್ತದೆಯೇ? ಎಂದು ಯೋಚಿಸುತ್ತಿದ್ದೇನೆ. ಆಗಲಿ ಎಂದು ಮನಸ್ಸು ಹಂಬಲಿಸುತ್ತಿದೆ.” ಎಂದು ಹೇಳಿದರು.

ಹೊಸ ಉತ್ಸಾಹ

ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ರೀತಿಯ ಹೊಸ ಉತ್ಸಾಹ ಮೂಡುತ್ತಿರುವಂತೆ ಕಾಣುತ್ತಿದೆ. ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಗೊಂಡ ಕೃತಿಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತಿವೆ. ಹಾಗಾಗಿ ಹೆಚ್ಚು ಹೆಚ್ಚು ಕನ್ನಡದ ಕೃತಿಗಳು ಇಂಗ್ಲಿಷ್ ಗೆ ಅನುವಾದಗೊಂಡು, ಕನ್ನಡದ ಮಣ್ಣಿನ ವಾಸನೆಯನ್ನು ಭೂಗೋಳದ ಸುತ್ತ ಹಬ್ಬಿಸುತ್ತಿವೆ.

ಜಯಂತ ಕಾಯ್ಕಿಣಿ ಮತ್ತು ವಿವೇಕ್‌ ಶಾನುಭಾಗ್‌ ಅವರ ಕೃತಿಗಳು ಪ್ರಶಸ್ತಿಗಳನ್ನೂ ಪಡೆದುಕೊಂಡಿವೆ. ಜಯಂತ ಕಾಯ್ಕಿಣಿ ಅವರ ಕಥೆಗಳ ಅನುವಾದ No Presents Please: Mumbai Stories (ಅನುವಾದ; ತೇಜಸ್ವಿನಿ ನಿರಂಜನ) ಅವರ ಕೃತಿಗೆ DSC Prize for South Asian Literature ದಕ್ಕಿದೆ.

ವಿವೇಕ್‌ ಶಾನುಭಾಗ್‌ ಅವರ ಕೃತಿ ಘಾಚರ್‌ ಘೋಚರ್‌ ಕೃತಿ (ಅನುವಾದ; ಶ್ರೀನಾಥ್‌ ಪೆರೂರ್)‌ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಕನ್ನಡದ classic ಗಳನ್ನು ಅನುವಾದಿಸಿರುವ ವನಮಾಲಾ ವಿಶ್ವನಾಥ್‌ ಇತ್ತೀಚೆಗೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು Bride in the Hills ಎಂದು ಅನುವಾದಿಸಿದ್ದಾರೆ. ಖ್ಯಾತ ಕನ್ನಡದ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಆಯ್ದ ವಿಮರ್ಶಾ ಲೇಖನಗಳ ಸಂಕಲನ Courtesy of Criticisim ಎಂದು ಕಮಲಾಕರ ಭಟ್‌ ಅನುವಾದಿಸಿದ್ದಾರೆ. ಬಾನು ಮುಷ್ತಾಕ್‌ ಈಗ ಈ ಸಾಹಿತಿಗಳ ಸಾಲಿಗೆ ಸೇರಿರುವುದು, ಕನ್ನಡಕ್ಕೆ ಸಂದ ಗೌರವ.

ಹದಿಮೂರರಲ್ಲಿ ಒಂದು; ಆರರಲ್ಲಿ ಒಂದಾಗಬೇಕು ಅಷ್ಟೆ

ಈಗ ಒಟ್ಟು ಹದಿಮೂರು ಕೃತಿಗಳು ಬೂಕರ್‌ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿದೆ. ಈ ಪ್ರಶಸ್ತಿಯ ದೀರ್ಘ ಪಟ್ಟಿಗೆ ಇದೇ ಮೊದಲ ಬಾರಿಗೆ ಕನ್ನಡದಿಂದ English ಗೆ ಅನುವಾದಗೊಂಡ ಕೃತಿಯೊಂದು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಈ ಪಟ್ಟಿಯಲ್ಲಿನ ಹದಿಮೂರು ಕೃತಿಗಳಲ್ಲಿ ಆರು ಕೃತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಲಿವೆ. ಈ ಆರು ಕೃತಿಗಳ ಆಯ್ಕೆಯನ್ನು ಏಪ್ರಿಲ್‌ 8 ರಂದು ಪ್ರಕಟಿಸಲಾಗುತ್ತದೆ. ಅಂತಿಮವಾಗಿ ಆಯ್ಕೆಯಾಗುವ ಕೃತಿಯನ್ನು ಮೇ 20 ರಂದು ಪ್ರಕಟಿಸಲಾಗುತ್ತದೆ. ಈ ಪ್ರಶಸ್ತಿ ದಕ್ಕಿದಲ್ಲಿ ಅದರಿಂದ ಬರುವ ಹಣವನ್ನು ಮೂಲ ಲೇಖಕಿ ಮತ್ತು ಅನುವಾದಕಿಯ ನಡುವೆ ಹಂಚಲಾಗುತ್ತದೆ.

2013ರಲ್ಲಿ ಯು. ಆರ್‌. ಅನಂತಮೂರ್ತಿ ಅವರ ಕೃತಿಯೊಂದು Man Booker International Prize ಗೆ ನಾಮಕರಣಗೊಂಡಿತ್ತು. ಆದರೆ ಪ್ರಶಸ್ತಿ ಅವರಿಗೆ ದಕ್ಕಲಿಲ್ಲ. 2022ರಲ್ಲಿ ಗೀತಾಂಜಲಿ ಶ್ರೀ ಅವರಿಗೆ ʻರೇತ್‌ ಸಮಾಧಿʼ (2018) English ಅನುವಾದ Tomb of Sand ಅನುವಾದಿಸಿದವರು ಡೈಸಿ ರಾಕ್ವೆಲ್‌)ಗೆ ಈ Booker ಪ್ರಶಸ್ತಿ ಲಭ್ಯವಾಗಿತ್ತು. ಇದೇ ರೀತಿ. 2023ರಲ್ಲಿ ಪೆರುಮಾಳ್‌ ಮುರುಗನ್‌ ಅವರ ʻಪೂಕಳ್‌ʼ ಕೃತಿಯ ಇಂಗ್ಲಿಷ್‌ ಅನುವಾದ Pyre (ಅನುವಾದ ಅನಿರುದ್ಧ್‌ ವಾಸುದೇವನ್)‌ ಅವರ ಕೃತಿಯೂ ದೀರ್ಘ ಪಟ್ಟಿಯಲ್ಲಿ ಸೇರಿದ್ದನ್ನು ನೆನಪಿಸಿಕೊಳ್ಳಬಹುದು. ಪೆರುಮಾಳ್‌ ಮುರುಗನ್‌ ಈ ಕೃತಿಯನ್ನು ಬರೆದಿದ್ದು 2013ರಲ್ಲಿ.

ಮುಸ್ಲಿಂ ಸಮುದಾಯದ ಸಂವೇದನೆ

“ಕೌಟುಂಬಿಕ ಹಾಗೂ ಸಮುದಾಯದ ತುಮುಲಗಳನ್ನು ಪ್ರಾದೇಶಿಕ ಸೊಗಡಿನೊಂದಿಗೆ ತಮ್ಮದೇ ಆದ ವ್ಯಂಗ್ಯದ ಶೈಲಿಯಲ್ಲಿ ಇಲ್ಲಿನ ಕಥೆಗಳು ಕಟ್ಟಿಕೊಟ್ಟಿವೆ” ಎಂದು Heart Lamp ಕೃತಿ ಕುರಿತು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. “ಸಮಾಜದ ಅಂಚಿನಲ್ಲಿರುವ ಸಮುದಾಯದ ಬದುಕಿನ ಅನ್ವೇಷಣೆಯ ಈ ಕೃತಿ ತೀರಾ ಸಾಂದ್ರವಾದ ಭಾವುಕ ಮತ್ತು ನೈತಿಕ ನೆಲೆಗಟ್ಟನ್ನು ಹೊಂದಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ತಳಮಳಗಳನ್ನು ಭಾನು ಮುಷ್ತಾಕ್‌ ತಮ್ಮ 1990 ರಿಂದ 2023ರ ವರೆಗಿನ ತಮ್ಮ ಸಣ್ಣ ಕಥೆಗಳಲ್ಲಿ ಗಾಢವಾಗಿ ಕಟ್ಟಿಕೊಟ್ಟಿದ್ದಾರೆ.

ಈ ರೀತಿ ಮುಸ್ಲಿಂ ಸಮುದಾಯದ ಸಂವೇದನೆಗಳನ್ನು ಗಾಢವಾಗಿ ತಮ್ಮ ಚಿತ್ರಕ ಶೈಲಿಯಲ್ಲಿ ಕಟ್ಟಿಕೊಟ್ಟವರೆಂದರೆ ಸಾರಾ ಅಬೂಬಕರ್.‌ ಸಾರಾ ಅಬೂಬಕರ್‌ ಅವರ ಬಹುಶೃತ ಕೃತಿ ʻಚಂದ್ರಗಿರಿ ತೀರದಲ್ಲಿʼ ಅನ್ನು ವನಮಾಲಾ ವಿಶ್ವನಾಥ ಅವರು Breaking Ties ಎಂಬ ಹೆಸರಿನಲ್ಲಿ English ಗೆ ಅನುವಾದಿಸಿದ್ದಾರೆ.

“ಕಥೆಯೊಂದನ್ನು Englishಗೆ ಅನುವಾದಿಸುವುದು ಒಂದು ಮೇಲ್ವರ್ಗದ ಅಪರೂಪದ ಸಂಗತಿ ಏನಲ್ಲ. ಪ್ರತಿಯೊಬ್ಬರೂ, ಕಲ್ಪಿಸಿಕೊಳ್ಳುವ , ಕಲ್ಪಿಸಿಕೊಳ್ಳಬಹುದಾದ ಕಥಾನಕಗಳು ಅವು. ಇದೊಂದು ರೀತಿಯಲ್ಲಿ ಆಶ್ಚರ್ಯಕರವಾಗಿ ಅನಾಮಿಕರೊಬ್ಬರನ್ನು ಅವರ ಎಲ್ಲ ಅನುಭವಗಳೊಂದಿಗೆ ಭೇಟಿ ಮಾಡಿದಂತೆ” ಎನ್ನುತ್ತಾರೆ ತೀರ್ಪುಗಾರರ ಪೈಕಿ ಒಬ್ಬರಾದ ಮ್ಯಾಕ್ಸ್‌ ಪೋರ್ಟರ್.‌

Pen Translation ಪ್ರಶಸ್ತಿ

ಬಾನು ಮುಷ್ತಾಕ್‌ ಅವರ ʻಹಸೀನಾ ಮತ್ತು ಇತರ ಕಥೆಗಳುʼ Haseena and Other Stories ಎಂದು English ಗೆ ಅನುವಾದಗೊಂಡಿದೆ. ಈ ಕೃತಿ 2024ರ ʻPen Translation ʼ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಕೃತಿಯನ್ನು ಕೂಡ ದೀಪಾ ಬಸ್ತಿ ಅನುವಾದಿಸಿದ್ದಾರೆ. ಬಾನು ಮುಷ್ತಾಕ್‌ ಅವರ ಇತರ ಕೃತಿಗಳೆಂದರೆ, ʻಹೆಜ್ಜೆ ಮೂಡದ ಹಾದಿʼ, ʻಬೆಂಕಿ ಮಳೆʼ, ʻಎದೆಯ ಹಣತೆʼ, ʼಬಡವರ ಮಗಳು ಹೆಣ್ಣಲ್ಲʼ (ಸಣ್ಣ ಕತೆಗಳು), ʻಕುಬ್ರʼ (ಕಾದಂಬರಿ), ʻಒದ್ದೆ ಕಣ್ಣಿನ ಬಾಗಿನʼ (ಕವನ ಸಂಕಲನ), ʻಇಬ್ಬನಿಯ ಕಾವುʼ (ಪ್ರಬಂಧಗಳು), ಕೌಟುಂಬಿಕ ದೌರ್ಜನ್ಯ ಕಾಯ್ದೆ (On Domestic Violence Act) ̤̤ ಇದು ಬಾನು ಮುಷ್ತಾಕ್‌ ಅವರ ಬರಹದ ಹರಿವು.

ಸಿನಿಮಾ ಆದ ಹಸೀನಾ

ಬಾನು ಮುಷ್ತಾಕ್‌ ಅವರ ʻಹಸಿನಾʼ ಕೃತಿಯನ್ನು ಆಧರಿಸಿ, ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅದೇ ಹೆಸರಿನಲ್ಲಿ ಸಿನಿಮಾವೊಂದನ್ನು ನಿರ್ದೇಶಿಸಿದ್ದರು. 2004ರಲ್ಲಿ ಬಿಡುಗಡೆಯಾದ ಈ ಚಿತ್ರದ ನಾಯಕಿ ಪಾತ್ರಕ್ಕೆ ತಾರಾ ಅನುರಾಧ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಶ್ರೇಷ್ಠ ಕೌಟುಂಬಿಕ ಚಿತ್ರ ಶೀರ್ಷೀಕೆಯಡಿಯಲ್ಲಿ ರಜತ ಕಮಲ ಪ್ರಶಸ್ತಿಯನ್ನು ʻಹಸೀನಾʼ ತನ್ನದಾಗಿಸಿಕೊಂಡಿತ್ತು. ಬಾನು ಮುಷ್ತಾಕ್‌ ಅವರು ಕೆಲವು ಕಾಲ ಪತ್ರಕರ್ತರಾಗಿ ಕೂಡ ಕೆಲಸ ಮಾಡಿದ್ದರು. ಲಂಕೇಶ್‌ ಗರಡಿಯಲ್ಲಿ ಪಳಗಿದ ಬಾನು ಮುಷ್ತಾಕ್‌ ʻಲಂಕೇಶ್‌ ಪತ್ರಿಕೆʼಗೆ ಅತ್ಯುತ್ತಮ ವರದಿಗಳನ್ನು ಕೂಡ ಬರೆದಿದ್ದಾರೆ.

Tags:    

Similar News