The Federal Debate | ಕಮಲ್ ಹಾಸನ್ ಹೇಳಿಕೆ; ಸಾ.ರಾ. ಗೋವಿಂದು, ಸಚಿವ ತಂಗಡಗಿ, ಶಿವರಾಮೇಗೌಡ, ನರಸಿಂಹಲು; ಯಾರು ಏನಂದರು?
'ದ ಫೆಡರಲ್' ಕರ್ನಾಟಕ್ಕೆ ವಿಶೇಷ ಸಂದರ್ಶನ ನೀಡಿದ ಕನ್ನಡಪರ ಸಂಘಟನೆಗಳ ಮುಖಂಡರು ಕಮಲ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಅದರ ವಿವರ ಈ ಕೆಳಗೆ ನೀಡಲಾಗಿದೆ.;
ಬಹುಭಾಷಾ ನಟ ಕಮಲ್ ಹಾಸನ್ ನೀಡಿರುವ "ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂಬ ವಿವಾದಾತ್ಮಕ ಹೇಳಿಕೆ ಕರ್ನಾಟಕದಲ್ಲಿ ತೀವ್ರ ಸ್ವರೂಪದ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡಿಗರ ಸಾವಿರಾರು ವರ್ಷಗಳ ಭಾಷಾ ಪರಂಪರೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಈ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದು ಮತ್ತು ಶಿವರಾಮೇಗೌಡ ಸೇರಿದಂತೆ ಅನೇಕ ಗಣ್ಯರು 'ದ ಫೆಡರಲ್ ಕರ್ನಾಟಕ'ಕ್ಕೆ ವಿಶೇಷ ಸಂದರ್ಶನ ನೀಡಿ ಮಾತನಾಡಿ ಕಮಲ್ ಕ್ಷಮೆಗೆ ಆಗ್ರಹಿಸಿದ್ದಾರೆ.
ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಮಲ್ ಹಾಸನ್ಗೆ ಅರಿವಿನ ಕೊರತೆ ಎಂದು ಹೇಳಿದ್ದಾರೆ. ಅದೇ ರೀತಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಕಮಲ್ ಹಾಸನ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು, ಇಲ್ಲವಾದರೆ ಅವರ ಬಹು ನಿರೀಕ್ಷಿತ 'ಥಗ್ ಲೈಫ್' ಚಿತ್ರದ ಕರ್ನಾಟಕದಲ್ಲಿ ಬಿಡುಗಡೆಗೆ ಸಂಪೂರ್ಣ ನಿಷೇಧ ಹೇರಬೇಕೆಂದು ಸರ್ಕಾರ ಮತ್ತು ಕನ್ನಡ ಸಂಘಟನೆಗಳು ಒಕ್ಕೊರಲಿನಿಂದ ಒತ್ತಾಯಿಸಿವೆ. ಈ ಸಂಬಂಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಾಳೆ (ಮೇ 29ತುರ್ತು ಸಭೆ ಕರೆದಿದೆ.
ತಂಗಡಗಿ ಏನಂದರು?
ಮಾಧ್ಯಮಗಳ ಜತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೂಡ ಕಮಲ್ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ಕನ್ನಡಕ್ಕೆ ಅವಮಾನ ಮಾಡುವವರಿಗೆ ನಮ್ಮ ರಾಜ್ಯದಲ್ಲಿ ಯಾವುದೇ ಸ್ಥಾನವಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳಲು ವಿಫಲರಾದರೆ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಅವರ ಚಿತ್ರ 'ಥಗ್ ಲೈಫ್' ಅನ್ನು ರಾಜ್ಯದಲ್ಲಿ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ಘೋಷಿಸಿದ್ದಾರೆ.
ಸಾ.ರಾ.ಗೋವಿಂದು ಮತ್ತು ಶಿವರಾಮೇಗೌಡರ ಆಕ್ರೋಶದ ನುಡಿ
'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ಕನ್ನಡಪರ ಹೋರಾಟಗಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕಮಲ್ರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕನ್ನಡ ಭಾಷೆಗೆ 2,000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕಮಲ್ ಹಾಸನ್ಗೆ ಇದರ ಬಗ್ಗೆ ಯಾವುದೇ ಜ್ಞಾನವಿಲ್ಲ. ತಮಿಳುನಾಡಿನವರನ್ನು ಮೆಚ್ಚಿಸಲು ಮೂಲತಃ ಮಲಯಾಳಿಯಾಗಿರುವ ಕಮಲ್ ಈ ರೀತಿ ಹಗುರವಾಗಿ ಮಾತನಾಡಿರುವುದು ಕನ್ನಡಿಗರಿಗೆ ಅವಮಾನ" ಎಂದು ಅವರು ಖಂಡಿಸಿದ್ದಾರೆ. ಕಮಲ್ ಹಾಸನ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಗೋವಿಂದು, "ಕ್ಷಮೆಯಾಚಿಸದಿದ್ದರೆ ಅವರ ಚಿತ್ರ ‘ಥಗ್ ಲೈಫ್’ ಸೇರಿದಂತೆ ಇತರ ಚಿತ್ರಗಳ ಕರ್ನಾಟಕದಲ್ಲಿ ಬಿಡುಗಡೆ ಕಷ್ಟಕರವಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ. "ಕನ್ನಡಕ್ಕೆ ಅವಮಾನ ಮಾಡುವ ಯಾವುದೇ ಹೇಳಿಕೆಯನ್ನು ಕನ್ನಡಿಗರು ಸಹಿಸುವುದಿಲ್ಲ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಟರು ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಬೇಕು" ಎಂದು ಆಗ್ರಹಿಸಿದ್ದಾರೆ.
ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಮತ್ತೊಬ್ಬ ಕನ್ನಡಪರ ಹೋರಾಟಗಾರ ಶಿವರಾಮೇಗೌಡ, ಕಮಲ್ ಹಾಸನ್ ರಾಜಕೀಯ ಅಸ್ತಿತ್ವಕ್ಕೋಸ್ಕರ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. "ಕಮಲಹಾಸನ್ ಹೇಳಿಕೆ ಕನ್ನಡಿಗರಿಗೆ ಅವಮಾನ ಆಗಿದ್ದು, ಅವರ ಚಿತ್ರ ಬಿಡುಗಡೆಗೆ ಬಿಡಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ತುರ್ತು ಸಭೆ
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ. ನರಸಿಂಹಲು ಅವರು ಕಮಲ್ರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, "ಕಮಲ್ ತಿಳಿದುಕೊಂಡು ಮಾತನಾಡಬೇಕಿತ್ತು. ಈ ಹೇಳಿಕೆ ಕನ್ನಡ ಜನತೆಗೆ ಬೇಸರವಾಗಿದೆ" ಎಂದು ತಿಳಿಸಿದ್ದಾರೆ. ಕಮಲ್ರ ಚಿತ್ರ 'ಥಗ್ ಲೈಫ್'ನ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ನಿಷೇಧ ಹೇರಬೇಕೆಂದು 10 ಕನ್ನಡ ಸಂಘಟನೆಗಳು ಮಂಡಳಿಗೆ ಮನವಿ ಪತ್ರ ಸಲ್ಲಿಸಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿಯು, ನಾಳೆ (ಮೇ 29) ವಿಶೇಷ ಸಭೆ ಕರೆದಿದ್ದು, ಮುಂದಿನ ಕ್ರಮಗಳ ಬಗ್ಗೆ, ವಿಶೇಷವಾಗಿ ಚಿತ್ರದ ನಿಷೇಧದ ಬಗ್ಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ನರಸಿಂಹಲು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಸಚಿವರ ಕಠಿಣ ಎಚ್ಚರಿಕೆ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕನ್ನಡ ಭಾಷೆಗೆ 2,000 ವರ್ಷಗಳ ಸುದೀರ್ಘ ಮತ್ತು ಐತಿಹಾಸಿಕ ಸಂಪತ್ತಿದೆ. ಕಮಲ್ ಹಾಸನ್ರ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದ್ದು, ಇದು ಕನ್ನಡಿಗರ ಭಾವನೆಗೆ ತೀವ್ರ ಧಕ್ಕೆ ತಂದಿದೆ" ಎಂದು ಹೇಳಿದ್ದಾರೆ.
ಶಿವರಾಜ್ಕುಮಾರ್ ಮೌನಕ್ಕೂ ಟೀಕೆ
'ಥಗ್ ಲೈಫ್' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜ್ಕುಮಾರ್ ಉಪಸ್ಥಿತರಿದ್ದರೂ ಈ ವಿಷಯದಲ್ಲಿ ಅವರು ತಟಸ್ಥರಾಗಿರುವುದು ಕೆಲವರ ಟೀಕೆಗೆ ಗುರಿಯಾಗಿದೆ. ಶಿವರಾಮೇಗೌಡ ಅವರು, "ಶಿವರಾಜ್ ಕುಮಾರ್ ಅದೇ ವೇದಿಕೆಯಲ್ಲಿದ್ದರೂ ಕಮಲಹಾಸನ್ ಹೇಳಿಕೆಯನ್ನು ಖಂಡಿಸದೇ ಇರುವುದು ಸರಿಯಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ, ಕನ್ನಡ ಭಾಷೆಯ ಗೌರವಕ್ಕಾಗಿ ರಾಜ್ಯವ್ಯಾಪಿ ಪ್ರತಿಭಟನೆಗಳಿಗೆ ಸಂಘಟನೆಗಳು ಸಜ್ಜಾಗಿವೆ.