ಪ್ರಜ್ವಲ್‌ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ? ಮೊದಲು ಜೈಲು ಸೇರಬೇಕು!!

ಈ ಪ್ರಶ್ನೆಗಳಿಗೆ ಉತ್ತರ- ಪ್ರಜ್ವಲ್ ರೇವಣ್ಣ ಗೆದ್ದಿದ್ದೇ ಆದಲ್ಲಿ, ಎಸ್‌ಐಟಿ ಮುಂದೆ ಶರಣಾಗಿ ಬಂಧಿತನಾದರೆ ಪ್ರಮಾಣವಚನ ಸ್ವೀಕರಿಸಲು ಅವಕಾಶವಿದೆ! ಒಂದು ವೇಳೆ ಅದನ್ನು ಬಯಸದೆ ಇನ್ನೂ ತಲೆಮರೆಸಿಕೊಳ್ಳುತ್ತಲೇ ಇದ್ದರೆ ಸಂಸದನಾಗಿ ಕಾರ್ಯ ಕಲಾಪದಲ್ಲಿ ಭಾಗವಹಿಸುವ ಅವಕಾಶ ಇರುವುದಿಲ್ಲ ಅಥವಾ ನ್ಯಾಯಾಲಯವೂ ಅದಕ್ಕೆ ಮಾನ್ಯತೆ ನೀಡುವುದಿಲ್ಲ. ಬಂಧಿತನಾದಲ್ಲಿ ಮಾತ್ತ್ರ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಬಹುದು.

Update: 2024-05-29 00:40 GMT

ಜೂನ್ 4 ರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಒಂದು ವೇಳೆ ಲೈಂಗಿಕ ಹಗರಣದ ಆರೋಪಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಗೆದ್ದರೆ ಏನಾಗುತ್ತದೆ? ಸೋತರೆ ಏನಾಗುತ್ತದೆ? ಭಾರತಕ್ಕೆ ಮರಳಿದರೆ ಪ್ರಮಾಣ ವಚನ ಸ್ವೀಕರಿಸಿ ಲೋಕಸಭೆ ಕಲಾಪದಲ್ಲಿ ಭಾಗವಹಿಸಬಹುದೇ?

ಈ ಪ್ರಶ್ನೆಗಳಿಗೆ ಉತ್ತರ- ಪ್ರಜ್ವಲ್ ರೇವಣ್ಣ ಗೆದ್ದಿದ್ದೇ ಆದಲ್ಲಿ, ಎಸ್‌ಐಟಿ ಮುಂದೆ ಶರಣಾಗಿ ಬಂಧಿತನಾದರೆ ಪ್ರಮಾಣವಚನ ಸ್ವೀಕರಿಸಲು ಅವಕಾಶವಿದೆ! ಒಂದು ವೇಳೆ ಅದನ್ನು ಬಯಸದೆ ಇನ್ನೂ ತಲೆಮರೆಸಿಕೊಳ್ಳುತ್ತಲೇ ಇದ್ದರೆ ಸಂಸದನಾಗಿ ಕಾರ್ಯ ಕಲಾಪದಲ್ಲಿ ಭಾಗವಹಿಸುವ ಅವಕಾಶ ಇರುವುದಿಲ್ಲ ಅಥವಾ ನ್ಯಾಯಾಲಯವೂ ಅದಕ್ಕೆ ಮಾನ್ಯತೆ ನೀಡುವುದಿಲ್ಲ. ಬಂಧಿತನಾದಲ್ಲಿ ಮಾತ್ತ್ರ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಬಹುದು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲು ಅವರು ನ್ಯಾಯಾಲಯದಿಂದ ಅನುಮತಿ ಪಡೆಯಬಹುದು ಅಥವಾ ತನ್ನ ವಕೀಲರ ಮೂಲಕ ಸ್ಪೀಕರ್‌ ಗೆ ವಿನಂತಿಯನ್ನು ಕಳುಹಿಸಿದರೆ ಅವರಿಗೆ ಪ್ರತ್ಯೇಕ ಸಮಯಾವಕಾಶ ಸಿಗಬಹುದು. ಅದು ಕೇವಲ ಸ್ಪೀಕರ್‌ ಅವರು ಒಪ್ಪಿಗೆ ನೀಡಿದರೆ ಮಾತ್ರ!

ಸಾರ್ವತ್ರಿಕ ಚುನಾವಣೆಯ ನಂತರ ಆಯಾ ಸದನದ ಮೊದಲ ಸಭೆಯ ನಂತರ ಸಂಸತ್ತಿನ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲು ಸಮಯ ಮಿತಿಯು ನಿರ್ಧರಿತವಾಗಿರುತ್ತದೆ. ಲೋಕಸಭಾ ನಿಯಮಗಳು ನಿಖರವಾರದ ದಿನದ ಬಗ್ಗೆ ಮಾಹಿತಿ ನೀಡುವುದಿಲ್ಲ. ಹೊಸದಾಗಿ ಆಯ್ಕೆಯಾದ ಸದಸ್ಯರು ಸಾಧ್ಯವಾದಷ್ಟು ಬೇಗ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಇದು ಸಾಮಾನ್ಯವಾಗಿ ಚುನಾವಣಾ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಿಂದ ಕೆಲವೇ ವಾರಗಳಲ್ಲಿ ಸಂಭವಿಸುತ್ತದೆ ಎಂದು ಹೈಕೋರ್ಟ್ ನ್ಯಾಯವಾದಿ ಕೆ ದೇವರಾಜ್ ಹೇಳಿದ್ದಾರೆ.

ನಿಯಮಗಳ ಪ್ರಕಾರ, ಭಾರತದ ರಾಷ್ಟ್ರಪತಿಗಳು ಹೊಸದಾಗಿ ಆಯ್ಕೆಯಾದ ಲೋಕಸಭೆ ಅಥವಾ ರಾಜ್ಯಸಭೆಯ ಮೊದಲ ಅಧಿವೇಶನವನ್ನು ಕರೆಯುತ್ತಾರೆ, ಈ ಸಮಯದಲ್ಲಿ ಪ್ರಮಾಣ ವಚನ ಸಮಾರಂಭವನ್ನು ನಿಗದಿಪಡಿಸಲಾಗುತ್ತದೆ. ಇದು ಸಾಮಾನ್ಯವಾಗಿ ಲೋಕಸಭಾ ಕಲಾಪಗಳ ಮೊದಲ ಪ್ರಕ್ರಿಯೆಯಾಗಿರುತ್ತದೆ. ಲೋಕಸಭೆಯ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರು ಸದಸ್ಯರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳಾಪಟ್ಟಿಯನ್ನು ನಿಗದಿಪಡಿಸುವ ವಿವೇಚನೆಯನ್ನು ಹೊಂದಿರುತ್ತಾರೆ.

ಭಾರತದ ಸಂವಿಧಾನದ 99 ನೇ ವಿಧಿಯು ಸಂಸತ್ತಿನ ಪ್ರತಿಯೊಬ್ಬ ಸದಸ್ಯರು ಸಂಸತ್ತಿನಲ್ಲಿ ತಮ್ಮ ಸ್ಥಾನವನ್ನು ಪಡೆಯುವ ಮೊದಲು ಪ್ರಮಾಣ ವಚನ ಅಥವಾ ದೃಢೀಕರಣವನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸುತ್ತದೆ. ಆದಾಗ್ಯೂ, ಇದು ಈ ಪ್ರಕ್ರಿಯೆಗೆ ಕಟ್ಟುನಿಟ್ಟಾದ ಗಡುವನ್ನು ನಿರ್ದಿಷ್ಟಪಡಿಸಿಲ್ಲ. ಚುನಾಯಿತ ಸದಸ್ಯರು ನಿಗದಿಯಾದ ಸಮಯದೊಳಗೆ ಪ್ರಮಾಣ ವಚನ ಸ್ವೀಕರಿಸದಿದ್ದರೆ, ಅವರು ಸದನದ ಕಲಾಪಗಳಲ್ಲಿ ಭಾಗವಹಿಸಲು ಅಥವಾ ಅವರ ಸಂಬಳ ಮತ್ತು ಭತ್ಯೆಗಳನ್ನು ಪಡೆಯಲು ಸಾಧ್ಯವಾಗದಂತಹ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ರಮಾಣವಚನ ಸ್ವೀಕರಿಸಲು ನಿರಂತರ ವಿಫಲತೆಯು ಅವರ ಸದಸ್ಯತ್ವದ ಅನರ್ಹತೆಗೂ ಕಾರಣವಾಗಬಹುದು, ಆದರೂ ಪ್ರಮಾಣವಚನಕ್ಕೆ ನಿರ್ದಿಷ್ಟ ಗಡುವನ್ನು ಸೂಚಿಸುವ ಯಾವುದೇ ಸ್ಪಷ್ಟ ಸಾಂವಿಧಾನಿಕ ಅಥವಾ ಶಾಸನಬದ್ಧ ನಿಬಂಧನೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲ ಪಿ ಉಸ್ಮಾನ್ "ದ ಫೆಡರಲ್‌ ಕರ್ನಾಟಕʼಕ್ಕೆ ಹೇಳಿದ್ದಾರೆ.

ಚುನಾಯಿತ ಸದಸ್ಯರು ಕಾನೂನು ಅಥವಾ ವೈಯಕ್ತಿಕ ಕಾರಣಗಳಿಂದ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗದಿದ್ದರೆ, ಅವರು ತಮ್ಮ ಸಂಸದೀಯ ಕರ್ತವ್ಯಗಳನ್ನು ಪೂರೈಸಲು ಸ್ಪೀಕರ್‌ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಪರಾರಿಯಾದ ವ್ಯಕ್ತಿ ಚುನಾಯಿತರಾದರೆ, ಅವರು ತಮ್ಮ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ತಮ್ಮ ಸಂಸದೀಯ ಪಾತ್ರಕ್ಕೆ ಸಂಬಂಧಿಸಿದ ತೊಡಕುಗಳನ್ನು ತಪ್ಪಿಸಲು ಸಾಧ್ಯವಾದಷ್ಟು ಬೇಗ ಪ್ರಯತ್ನಿಸಿ ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ ಎಂದು ಉಸ್ಮಾನ್ ಹೇಳಿದ್ದಾರೆ.

ಪರಾರಿಯಾಗಿರುವವರು ಸಂಸತ್ತಿಗೆ ಚುನಾಯಿತರಾದರೆ, ಅವರು ಅಧಿಕಾರಿಗಳಿಗೆ ಶರಣಾಗುವವರೆಗೆ ಅಥವಾ ಬಂಧನಕ್ಕೊಳಗಾಗುವವರೆಗೆ ಮತ್ತು ಕಾನೂನು ಪ್ರಕ್ರಿಯೆಗೆ ಒಳಗಾಗುವವರೆಗೆ ಅವರು ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಟಿ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ. ಪರಾರಿಯಾಗಿರುವುದು ಎಂದರೆ ವ್ಯಕ್ತಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಅಥವಾ ದ ಪಲಾಯನ ಮಾಡಿದ್ದಾರೆ ಎಂಬರ್ಥ ಬರುತ್ತದೆ. ಇದು ಚುನಾಯಿತನ ಅಧಿಕಾರದ ಪ್ರಮಾಣ ವಚನ ಸ್ವೀಕಾರ ಸೇರಿದಂತೆ ಸಂಸದೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಾನೂನುಬದ್ಧವಾಗಿ ತಡೆಯುತ್ತದೆ ಎನ್ನುತ್ತಾರೆ ಅವರು.

ಅಧಿಕಾರ ಇರುತ್ತದೆ

ಪ್ರಜ್ವಲ್ ಆಯ್ಕೆಯಾದರೆ ಸಂಸದನ ಅಧಿಕಾರವನ್ನು ಅನುಭವಿಸಲಿದ್ದಾರೆ .ಹಾಗಾಗಿ ಪ್ರಜ್ವಲ್‌ ಭಾರತಕ್ಕೆ ಹಿಂತಿರುಗಬಹುದು ಮತ್ತು ಪೊಲೀಸ್ ಪ್ರಕರಣಗಳನ್ನು ಎದುರಿಸಬಹುದು ಮತ್ತು ಬಂಧಿತನಾಗಬಹುದು. ಅವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಲೋಕಸಭೆಗೆ ಹಾಜರಾಗಲು ನ್ಯಾಯಾಲಯದಿಂದ ಅನುಮತಿಗಳನ್ನು ಪಡೆಯಬಹುದು. ಅವರು ನಿರ್ದಿಷ್ಟ ಕಾರಣಗಳನ್ನು ಸಹ ನೀಡಬಹುದು. ಸಭಾಧ್ಯಕ್ಷರು ಅನುಮತಿ ನೀಡಿದರೆ ಪ್ರಮಾಣ ವಚನವನ್ನು ಮುಂದೂಡುವಂತೆ ಮನವಿ ಮಾಡಬಹುದು," ಎಂದೂ ಕಾನೂನು ತಜ್ಞರು ಹೇಳುತ್ತಾರೆ.

ಪ್ರಜ್ವಲ್ ಆಯ್ಕೆಯಾದರೆ ಸಂಸದೀಯ ಕರ್ತವ್ಯ ನಿಭಾಯಿಸಬಹುದು ಎಂದು ವಕೀಲ ಕೆ.ದೇವರಾಜ್ ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಆರೋಪಿಗೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಯಾದರೆ ಮಾತ್ರ ಆತನ ಸದಸ್ಯತ್ವ ರದ್ದಾಗುತ್ತದೆ. ಆದರೆ ಸದ್ಯಕ್ಕೆ ಪ್ರಜ್ವಲ್‌ ಆರೋಪಿ ಮಾತ್ರ. ಆತ ಭಾರತಕ್ಕೆ ಮರಳಿದರೆ ಮತ್ತು ಬಂಧನಕ್ಕೊಳಗಾದರೆ, ಅವರು ಜೈಲಿನಿಂದ ಸಂಸದರಾಗಿ ತಮ್ಮ ಮೂಲಭೂತ ಕರ್ತವ್ಯಗಳನ್ನು ಪೂರೈಸಬಹುದು. ಅಗತ್ಯವಿದ್ದಾಗ, ಅವರು ಪ್ರಮಾಣ ವಚನದಲ್ಲಿ ಭಾಗವಹಿಸಲು ನ್ಯಾಯಾಲಯದ ಹಸ್ತಕ್ಷೇಪವನ್ನು ಯಾಚಿಸಬಹುದು ಎಂದು ಅವರು ಹೇಳುತ್ತಾರೆ.

ಹಾಗಾಗಿ ಪ್ರಜ್ವಲ್ ರೇವಣ್ಣ ತನ್ನ ಮೇಲಿರುವ ಪ್ರಕರಣದಲ್ಲಿ ಅಧಿಕಾರಿಗಳಿಗೆ ಶರಣಾಗಬೇಕು ಇಲ್ಲವೇ ಬಂಧಿಸಬೇಕು. ಅವರಿಗೆ ನ್ಯಾಯಾಲಯ ಜಾಮೀನು ನೀಡಿದರೆ, ನ್ಯಾಯಾಲಯ ನಿಗದಿಪಡಿಸಿದ ಕೆಲವು ಷರತ್ತುಗಳ ಅಡಿಯಲ್ಲಿ ಅವರು ಮುಕ್ತವಾಗಿ ಕಾರ್ಯಪಾಲನೆ ಮಾಡಲು ಅವಕಾಶ ಸಿಗುತ್ತದೆ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅವರು ಸಂಸತ್ತಿಗೆ ಹಾಜರಾಗಬಹುದು ಮತ್ತು ಪ್ರಮಾಣ ವಚನ ಸ್ವೀಕರಿಸಬಹುದು.

Tags:    

Similar News