Bengaluru Stampede| ಕೆಆರ್ಸಿಬಿ ಕಾಲ್ತುಳಿತ: ಕೆಎಸ್ಸಿಎ ಅಧಿಕಾರಿಗಳು ಹೈಕೋರ್ಟ್ ಆದೇಶದಿಂದ ನಿರಾಳ, ಬಂಧನಕ್ಕೆ ತಡೆ
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕೆಎಸ್ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ. ಆದರೆ, ವಿಚಾರಣೆಗೆ ಸಹಕರಿಸುವಂತೆ ಅರ್ಜಿದಾರರಿಗೆ ಷರತ್ತು ವಿಧಿಸಿದೆ.;
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಅಲ್ಲಿನ ಅಧಿಕಾರಿಗಳ ಮೇಲೆ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರ ವಿರುದ್ಧ ಬಲವಂತದ ಕ್ರಮ (coercive action) ತೆಗೆದುಕೊಳ್ಳದಂತೆ ಆದೇಶಿಸಿದೆ. ಆದರೆ, ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ಅರ್ಜಿದಾರರಿಗೆ ಷರತ್ತು ವಿಧಿಸಲಾಗಿದೆ. ಈ ಆದೇಶದಿಂದಾಗಿ ಮೂವರು ಅಧಿಕಾರಿಗಳು ಸದ್ಯಕ್ಕೆ ಬಂಧನ ಭೀತಿಯಿಂದ ಹೊರಬಂದಂತಾಗಿದೆ.
ಕೆಎಸ್ಸಿಎ ತನ್ನ ಅರ್ಜಿಯಲ್ಲಿ, ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಬೇಕೆಂದು ಕೋರಿತ್ತು. ಆರ್ಸಿಬಿ ಆಟಗಾರರು ವಿಧಾನಸೌಧದಿಂದ ಕ್ರೀಡಾಂಗಣಕ್ಕೆ ತೆರಳಿದ ಪರಿಣಾಮ ಏಕಾಏಕಿ ನೂಕು ನುಗ್ಗಲು ಉಂಟಾಗಿದ್ದು, ಇದು ಸರ್ಕಾರ ಆಯೋಜಿಸಿದ ಕಾರ್ಯಕ್ರಮದ ಪರಿಣಾಮ ಎಂದು ಕೆಎಸ್ಸಿಎ ವಾದಿಸಿತ್ತು. ಕ್ರೀಡಾಂಗಣದ ದ್ವಾರಗಳ ನಿರ್ವಹಣೆ ಆರ್ಸಿಬಿ ಫ್ರಾಂಚೈಸಿ ಮತ್ತು ಪೊಲೀಸ್ ಅಧಿಕಾರಿಗಳದ್ದಾಗಿತ್ತು, ಕೆಎಸ್ಸಿಎ ಕ್ರೀಡಾಂಗಣವನ್ನು ಕೇವಲ ಬಾಡಿಗೆಗೆ ಮಾತ್ರ ನೀಡುತ್ತದೆ ಮತ್ತು ಪ್ರೇಕ್ಷಕರನ್ನು ನಿಯಂತ್ರಿಸುವ ಜವಾಬ್ದಾರಿ ತಮ್ಮದಲ್ಲ ಎಂದು ಅದು ಸ್ಪಷ್ಟಪಡಿಸಿತ್ತು.
ಸಾಕ್ಷಿಗಳ ಕೊರತೆ
ಅರ್ಜಿದಾರರು ಘಟನೆಗೆ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಕೆಎಸ್ಸಿಎ ವಿವರಿಸಿತ್ತು. ಅಲ್ಲದೆ, ಘಟನೆ ಸಂಬಂಧ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿ, ಈ ರೀತಿಯ ಸೂಚನೆ ನೀಡಲು ಮುಖ್ಯಮಂತ್ರಿಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ತಿಳಿಸಿತ್ತು. ಮುಖ್ಯಮಂತ್ರಿಗಳ ಸೂಚನೆಯಿಂದಾಗಿ ಘನತೆಯುಳ್ಳವರಾದ ಅರ್ಜಿದಾರರು ಸಮಾಜದಲ್ಲಿ ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿ, ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಮುಂದಿನ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ಮತ್ತು ವಿಚಾರಣೆಗೆ ತಡೆ ನೀಡಲು ಮನವಿ ಮಾಡಲಾಗಿತ್ತು.
ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ನಂತರ, ಆರಂಭದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. ಆದರೆ, ಜನರ ಆಕ್ರೋಶ ಮತ್ತು ವಿರೋಧ ಪಕ್ಷಗಳ ಒತ್ತಡ ಹೆಚ್ಚಾದ ನಂತರ, ಆರ್ಸಿಬಿ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಿ, ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಕಾನೂನು ಹೋರಾಟ ಇದೀಗ ಹೈಕೋರ್ಟ್ನ ಮೆಟ್ಟಿಲೇರಿದ್ದು, ಹೈಕೋರ್ಟ್ನ ಇಂದಿನ ಆದೇಶವು ಕೆಎಸ್ಸಿಎಗೆ ತಾತ್ಕಾಲಿಕ ರಿಲೀಫ್ ನೀಡಿದೆ.