Gold Smuggling Case | ರನ್ಯಾ ರಾವ್ ಜೊತೆ ಅಕ್ರಮದಲ್ಲಿ ಭಾಗಿ; ಬಳ್ಳಾರಿಯಲ್ಲಿ ಚಿನ್ನದ ವ್ಯಾಪಾರಿ ಬಂಧನ
ಚಿನ್ನದ ಅಂಗಡಿ ಮಾಲೀಕ ಸಾಹಿಲ್ ಜೈನ್ ಬೆಂಗಳೂರಿನಲ್ಲೂ ಶಾಖೆ ಹೊಂದಿದ್ದು, ರನ್ಯಾರಾವ್ ಹಾಗೂ ತರುಣ್ ರಾಜ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಂಗತಿ ವಿಚಾರಣೆಯಿಂದ ಬಯಲಾಗಿದೆ.;
ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣದ ಬೆನ್ನತ್ತಿರುವ ಡಿಆರ್ಐ ಅಧಿಕಾರಿಗಳು ಬಳ್ಳಾರಿಯಲ್ಲಿ ಚಿನ್ನದಂಗಡಿ ಮಾಲೀಕ ಸಾಹಿಲ್ ಜೈನ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ರನ್ಯಾ ರಾವ್ ಹಾಗೂ ಆಕೆಯ ಮಾಜಿ ಪ್ರಿಯಕರ ತರುಣ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಸಾಹಿಲ್ ಜೈನ್ ಸಂಪರ್ಕವಿರುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು, ಸಾಹಿಲ್ ಜೈನ್ನನ್ನು ಬಂಧಿಸಿ, 4 ದಿನಗಳ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಚಿನ್ನ ಕರಗಿಸುತ್ತಿದ್ದ ಸಾಹಿಲ್
ಚಿನ್ನದ ಅಂಗಡಿ ಮಾಲೀಕ ಸಾಹಿಲ್ ಜೈನ್ ಬೆಂಗಳೂರಿನಲ್ಲೂ ಶಾಖೆ ಹೊಂದಿದ್ದು, ರನ್ಯಾರಾವ್ ಹಾಗೂ ತರುಣ್ ರಾಜ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಂಗತಿ ವಿಚಾರಣೆಯಿಂದ ಬಯಲಾಗಿದೆ.
ರನ್ಯಾ ರಾವ್ ಅಕ್ರಮವಾಗಿ ತರುತ್ತಿದ್ದ ಚಿನ್ನ ಬಿಸ್ಕತ್ಗಳನ್ನು ಸಾಹಿಲ್ ಕರಗಿಸುತ್ತಿದ್ದ. ಬಳಿಕ ಅದರ ಮಾರಾಟದಿಂದ ಬಂದ ಹಣವನ್ನು ರನ್ಯಾರಾವ್ಗೆ ಕೊಡುತ್ತಿದ್ದ. ಚಿನ್ನ ಕರಗಿಸಿಕೊಡಲು ಶೇ 10ರಿಂದ 15 ರಷ್ಟು ಕಮಿಷನ್ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ಮೂಲತಃ ಬಟ್ಟೆವ್ಯಾಪಾರ ನಡೆಸುತ್ತಿದ್ದ ಸಾಹಿಲ್ ಜೈನ್ ಕುಟುಂಬ ಹಲವು ವರ್ಷಗಳಿಂದ ಬಳ್ಳಾರಿಯಲ್ಲೇ ವಾಸವಿತ್ತು. ಈಚೆಗೆ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾಗಿತ್ತು. ಆದರೆ, ಸಾಹಿಲ್ ಜೈನ್ ಮಾತ್ರ ತನ್ನ ಸೋದರ ಮಾವನೊಂದಿಗೆ ಮುಂಬೈನಲ್ಲಿ ವಾಸವಿದ್ದ. ಈ ಹಿಂದೆ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಾಹಿಲ್ ಜೈನ್ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು.