Bangalore stampede: ಪರಮೇಶ್ವರ್ ಅವರಿಗಿದೆಯೇ ಗೃಹ ಇಲಾಖೆಯ ಮೇಲೆ ಹಿಡಿತ?
ಕಾಲ್ತುಳಿತ ದುರಂತ ಅವಲೋಕಿಸಿದಾಗ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸದೆ, ಅವರ ಸಲಹೆಗಳನ್ನು ಸ್ವೀಕರಿಸಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.;
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ಪರಿಶೀಲಿಸಿದರು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಭದ್ರತೆಯ ವೈಫಲ್ಯತೆ ಎದ್ದುಕಾಣುತ್ತದೆ. ಇದಕ್ಕೆ ನೇರವಾಗಿ ಗೃಹ ಇಲಾಖೆ ಹೊಣೆಯಾಗಿದೆ. ಭದ್ರತೆ ಕೈಗೊಳ್ಳುವ ವಿಚಾರದಲ್ಲಿ ಗೃಹ ಇಲಾಖೆ ಹೊಣೆ ಹೊತ್ತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಪರಿಗಣಿಸಿರಲಿಲ್ಲ ಎಂಬ ಬಗ್ಗೆ ಎಲ್ಲೆ ಚರ್ಚೆಗಳು ನಡೆಯುತ್ತಿವೆ.
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆ. ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು, ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸುವುದು, ಅಪರಾಧ ತನಿಖೆಗಳು, ಸಂಚಾರವನ್ನು ನಿಯಂತ್ರಿಸುವುದು, ಜನಸಂದಣಿ ನಿಯಂತ್ರಣ, ಸಾರ್ವಜನಿಕ ಸುರಕ್ಷತೆ ಕರ್ತವ್ಯಗಳು, ನಾಗರಿಕ ರಕ್ಷಣೆ, ತುರ್ತು ನಿರ್ವಹಣೆ, ಕಾಣೆಯಾದ ವ್ಯಕ್ತಿಗಳ ಹುಡುಕಾಟ, ಕಳೆದುಹೋದ ಆಸ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಇತರ ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ.
ಇಂತಹ ಪ್ರಮುಖ ಇಲಾಖೆಯ ಜವಾಬ್ದಾರಿಯನ್ನು ಗೃಹ ಸಚಿವರು ಹೊತ್ತಿರುತ್ತಾರೆ. ಮಂತ್ರಿಮಂಡಲದಲ್ಲಿ ಮುಖ್ಯಮಂತ್ರಿ ನಂತರದ ಸ್ಥಾನ ಗೃಹ ಸಚಿವರದ್ದಾಗಿರುತ್ತದೆ. ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಗೃಹ ಸಚಿವರ ಜೊತೆಗೆ ಸಭೆ ನಡೆಸಿ ಅವರ ಸಲಹೆ, ಸೂಚನೆ ಬಳಿಕವೇ ತೆಗೆದುಕೊಳ್ಳಬೇಕಾಗುತ್ತದೆ. ಪೊಲೀಸ್ ಇಲಾಖೆಯ ಸಂಪೂರ್ಣ ಹಿಡಿತ ಗೃಹಸಚಿವರ ಮೇಲಿರುತ್ತದೆ. ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕುರಿತು ಪ್ರತಿಹಂತದಲ್ಲಿಯೂ ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದು, ಯಾವುದೇ ಅಶಾಂತಿ ತಲೆದೋರದಂತಹ ಪರಿಸ್ಥಿತಿ ಕಾಪಾಡುವ ಸಾಮರ್ಥ್ಯವನ್ನು ಹೊಂದಿರಬೇಕು.
ಆದರೆ, ಪ್ರಸ್ತುತ ರಾಜ್ಯದಲ್ಲಿ ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಮ್ಮ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅದರಲ್ಲಿಯೂ ಆರ್ಸಿಬಿ ತಂಡದ ಅಭಿನಂದನಾ ಸಮಾರಂಭ ಮತ್ತು ವಿಜಯೋತ್ಸವ ಕಾರ್ಯಕ್ರಮವು ಸಂಪೂರ್ಣವಾಗಿ ಉಪಮುಖ್ಯಮಂತ್ರಿಗಳೇ ನಿರ್ವಹಿಸಿದ್ದರು. ಇದಕ್ಕೆ ಬೇಕಾದ ಭದ್ರತೆಯ ಬಗ್ಗೆ ತೀರ್ಮಾನ ಕೈಗೊಳ್ಳುವಲ್ಲಿಯೂ ಉಪಮುಖ್ಯಮಂತ್ರಿಗಳ ತೀರ್ಮಾನವಾಗಿತ್ತೇ ಹೊರತು ಗೃಹಸಚಿವರದ್ದು ಯಾವುದೇ ನಿರ್ಧಾರವಾಗಿರಲಿಲ್ಲ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.
ಹಿರಿಯ ಅಧಿಕಾರಿಗಳ ಸಭೆಯೇ ನಡೆದಿಲ್ಲ?
ಐಪಿಎಲ್ ಪಂದ್ಯದಲ್ಲಿ ಚೊಚ್ಚಲ ಗೆಲುವು ಸಾಧಿಸಿ ಬೆಂಗಳೂರಿಗೆ ಕಪ್ನೊಂದಿಗೆ ಬಂದ ಆರ್ಸಿಬಿ ತಂಡಕ್ಕೆ ಆತುರಾತುರವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿತು. ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಸೂಕ್ತ ಭದ್ರತೆಯ ಅಗತ್ಯತೆ ಇತ್ತು. ಪೊಲೀಸ್ ಬಿಗಿ ಭದ್ರತೆ ಕಲ್ಪಿಸುವ ಸಂಬಂಧ ಮೊದಲು ಗೃಹ ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ನಿರ್ಣಯ ಕೈಗೊಳ್ಳಬೇಕಾಗಿತ್ತು. ಆರ್ಸಿಬಿ ವಿಜಯೋತ್ಸವಕ್ಕೆ ಸಹಜವಾಗಿ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ ಎಂಬುದರ ಬಗ್ಗೆ ಆಲೋಚನೆ ಮಾಡಬೇಕಿತ್ತು. ಆದರೆ, ಘಟನೆಯನ್ನು ಅವಲೋಕಿಸಿದಾಗ ಗೃಹಸಚಿವರು ಗಂಭೀರವಾಗಿ ಪರಿಗಣಿಸದೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸದೆ, ಅವರ ಸಲಹೆಗಳನ್ನು ಸ್ವೀಕರಿಸಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಒಂದು ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತವಾದ ನಿರ್ಣಯ ಕೈಗೊಂಡಿದ್ದರೆ ಇಂತಹದೊಂದು ದುರಂತ ನಡೆಯುತ್ತಿರಲಿಲ್ಲ. ಘಟನೆಯ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ಇಲ್ಲಿ ಕೇವಲ ಹಿರಿಯ ಅಧಿಕಾರಿಗಳ ಮಾತ್ರ ಲೋಪವಲ್ಲದೇ, ಇಡೀ ಗೃಹ ಇಲಾಖೆಯ ಲೋಪವೂ ಆಗಿದೆ.
ಗೃಹ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಇತರರ ಸಮನ್ವಯ ಕೊರತೆಯೂ ಇದೆ. ಗೃಹ ಸಚಿವರಾದರೂ ಬಿಗಿ ಭದ್ರತೆ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ಅಲ್ಲದೇ ಪೊಲೀಸ್ ಅಧಿಕಾರಿಗಳ ಸಲಹೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಬೇಕಾಗಿತ್ತು. ದಿಢೀರ್ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಇದರ ಜತೆಗೆ ದೃಢ ನಿರ್ಧಾರ ಕೈಗೊಂಡು ಪೊಲೀಸ್ ಅಧಿಕಾರಿಗಳ ಬೆನ್ನಿಗೆ ನಿಲ್ಲಬೇಕಿತ್ತು. ಘಟನೆಯಲ್ಲಿ ಇದಾವುದು ಕಂಡು ಬಂದಿಲ್ಲ ಎಂಬುದು ಉನ್ನತ ಮೂಲಗಳ ಅಭಿಪ್ರಾಯವಾಗಿದೆ.
ಗೃಹ ಸಚಿವರ ಕಾರ್ಯವೈಖರಿ ಕುರಿತು ದ ಫೆಡರಲ್ ಕರ್ನಾಟಕ ಜೊತೆಗೆ ಮಾತನಾಡಿದ ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ಗೃಹ ಇಲಾಖೆಯ ಹೊಣೆ ಹೊತ್ತ ಸಚಿವರು ಬೃಹತ್ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಬೇಕು. ಸಂಪೂರ್ಣ ಜವಾಬ್ದಾರಿ ಗೃಹ ಸಚಿವರದ್ದು ಆಗಿರುತ್ತದೆ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಗೃಹಸಚಿವರನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿಟ್ಟು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಗೃಹಸಚಿವರನ್ನು ಪರಿಗಣಿಸಿರುವುದೇ ಅನುಮಾನ ಎಂದು ಹೇಳಿದರು.
ಗೃಹ ಇಲಾಖೆ ಎಂಬುದು ಎಲ್ಲಾ ಇಲಾಖೆಗಳಿಗಿಂತ ಪ್ರಮುಖವಾದುದು. ರಾಜ್ಯದ ಕಾನೂನು ಸುವ್ಯವಸ್ಥೆ ನಿಂತಿರುವುದೇ ಇದೇ ಇಲಾಖೆಯ ಮೇಲೆ. ಗೃಹ ಇಲಾಖೆ ಸ್ವಲ್ಪ ಯಡವಟ್ಟು ಮಾಡಿಕೊಂಡರೂ ಜನರ ಜೀವದ ಜೊತೆಗೆ ಚೆಲ್ಲಾಟವಾಡುವಂತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗೃಹ ಸಚಿವರು ಎಷ್ಟರ ಮಟ್ಟಿಗೆ ದಕ್ಷರಾಗಿರಬೇಕೆಂದರೆ, ಕೆಲವು ಪರಿಸ್ಥಿತಿಯಲ್ಲಿ ಸಚಿವ ಸಂಪುಟದ ಯಾವೊಬ್ಬರ ಮಾತಿಗೂ ಕಿವಿಗೊಡದೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಗೃಹ ಸಚಿವರು ನಿರ್ಣಯ ಮೇಲೆ ಕಾನೂನು ಪರಿಸ್ಥಿತಿ ಹದಗೆಡುವುದು ಮತ್ತು ನಿಯಂತ್ರಣದಲ್ಲಿಡುವುದು ನಿಂತಿರುತ್ತದೆ. ಹೀಗಾಗಿ ಗೃಹ ಇಲಾಖೆ ನಿಭಾಯಿಸುವ ಸಚಿವರು ಗಟ್ಟಿ ತೀರ್ಮಾನ ಕೈಗೊಳ್ಳುವಂತಹವರಿರಬೇಕು ಎಂದು ಹೇಳಿದರು.
ಈ ಹಿಂದೆಯೂ ಇನ್ನೊಬ್ಬರ ಕೈಯಲ್ಲಿ ಆಡಳಿತ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಆಡಳಿತದ ಸಮಯದಲ್ಲಿಯೂ ಡಾ.ಜಿ.ಪರಮೇಶ್ವರ್ ಗೃಹ ಸಚಿವರಾಗಿದ್ದರು. ಆಗಲೂ ಸಹ ಅವರಿಗೆ ಇಲಾಖೆಯ ಮೇಲೆ ಸಂಪೂರ್ಣ ಆಡಳಿತ ಇರಲಿಲ್ಲ. ಗೃಹ ಇಲಾಖೆಗೆ ಸಲಹೆಗಾರರ ಎಂಬ ಹುದ್ದೆ ಸೃಷ್ಟಿಸಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ನಿಯೋಜನೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಅವರು ಗೃಹ ಇಲಾಖೆಯ ಮೇಲೆ ನಿಯಂತ್ರಣ ಸಾಧಿಸಿದ್ದರು. ಪರಮೇಶ್ವರ್ ಅವರು ಆಗಲೂ ಇಲಾಖೆಯ ಮೇಲೆ ಹಿಡಿತ ಇರಲಿಲ್ಲ ಎಂದು ಮೂಲಗಳು ಹೇಳಿವೆ.
ಖಾತೆ ಬದಲಾವಣೆಗೆ ಇಲ್ಲ: ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಮ್ಮ ಖಾತೆ ನಿರ್ವಹಿಸಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಬದಲಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಗೃಹ ಇಲಾಖೆಯನ್ನು ಹೆಸರಿಗೆ ಮಾತ್ರ ಡಾ.ಜಿ.ಪರಮೇಶ್ವರ್ ಬಳಿ ಇದ್ದು, ಅದರ ನಿರ್ವಹಣೆಯನ್ನು ಪ್ರಭಾವಿ ಸಚಿವರೊಬ್ಬರು ನಿರ್ವಹಿಸುತ್ತಿದ್ದಾರೆ. ಭದ್ರತೆ ವಿಚಾರದಲ್ಲಿಯೂ ಅವರು ಹೇಳಿದಂತೆ ನಡೆದಿದೆಯೇ ಹೊರತು ಪರಮೇಶ್ವರ್ ಅವರನ್ನು ಪರಿಗಣಿಸಿಲ್ಲ ಎಂದು ಮೂಲಗಳು ಹೇಳಿವೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಚಿವ ಡಾ.ಜಿ.ಪರಮೇಶ್ವರ್, ಎಂದಿಗೂ ನಾನು ಇಂತಹ ಖಾತೆ ಬೇಕು ಎಂಬುದಾಗಿ ಮುಖ್ಯಮಂತ್ರಿ ಅವರನ್ನು ಕೇಳಿಲ್ಲ. ಖಾತೆ ಬದಲಾವಣೆ ಮಾಡಲಾಗುತ್ತದೆ ಎಂಬುದು ಸುಳ್ಳು ಎಂದಿದ್ದಾರೆ.
ಬೆಂಗಳೂರಿನಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಇಂತಹ ಘಟನೆಗಳಾಗಬಾರದು. ಇಂತಹ ಸವಾಲುಗಳನ್ನು ಎದುರಿಸಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಯವರು ಸೇರಿದಂತೆ ಯಾರ ಬಳಿಯೂ ಮಾತನಾಡಿಲ್ಲ. ಇದೆಲ್ಲ ಸತ್ಯಕ್ಕೆ ದೂರವಾಗಿದ್ದು. ಈ ವಿಚಾರವನ್ನು ಯಾರು ಕೂಡ ಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.