ಧರ್ಮಸ್ಥಳ ಪ್ರಕರಣ|ಮುಸುಕುಧಾರಿ ಚಿನ್ನಯ್ಯನಿಗೆ ಜಾಮೀನು ಮಂಜೂರು
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ್ ಅವರು ಅರ್ಜಿದಾರನಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಇದೇ ವೇಳೆ 1 ಲಕ್ಷ ರೂ. ಮೊತ್ತದ ಭದ್ರತಾ ಠೇವಣಿಯನ್ನು ನ್ಯಾಯಾಲಯದಲ್ಲಿ ಇಡಬೇಕೆಂದು ಸೂಚಿಸಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಲಾಗಿದೆ.
ಈ ಹಿಂದೆ ಸಾಕ್ಷಿದಾರನ ಪರವಾಗಿದ್ದ ವಕೀಲರು ಪ್ರಕರಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಒದಗಿಸಿದ ವಕೀಲರ ಮೂಲಕ ಜಾಮೀನಿಗಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ್ ಅವರು ಅರ್ಜಿದಾರನಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಇದೇ ವೇಳೆ 1 ಲಕ್ಷ ರೂ. ಮೊತ್ತದ ಭದ್ರತಾ ಠೇವಣಿಯನ್ನು ನ್ಯಾಯಾಲಯದಲ್ಲಿ ಇಡಬೇಕೆಂದು ಸೂಚಿಸಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಅಥವಾ ಸಂದರ್ಶನ ನೀಡುವಂತಿಲ್ಲ, ನ್ಯಾಯಾಲಯದ ಅನುಮತಿ ಪಡೆಯದೆ ನಿಗದಿತ ವ್ಯಾಪ್ತಿಯಿಂದ ಹೊರಗೆ ಹೋಗಬಾರದು, ಸಾಕ್ಷ್ಯ ನಾಶಪಡಿಸಲು ಯತ್ನಿಸಬಾರದು ಮತ್ತು ತಲೆಮರೆಸಿಕೊಳ್ಳಬಾರದು ಎಂಬ ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ.
ಪ್ರಕರಣದ ಸಂಬಂಧ ಎಸ್ಐಟಿ ಅಧಿಕಾರಿಗಳು ಈತನನ್ನು ಬಂಧಿಸಿ, ಆಗಸ್ಟ್ 23ರಂದು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದ ಬಳಿಕ, ಸಾರ್ವಜನಿಕರ ಮತ್ತು ಸಂಘಟನೆಗಳ ಒತ್ತಾಯದ ಮೇರೆಗೆ ಸರ್ಕಾರವು ವಿಶೇಷ ತನಿಖಾ ತಂಡವನ್ನುರಚಿಸಿತ್ತು. ಎಸ್ಐಟಿ ತಂಡವು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾನವ ಕಳೇಬರಗಳಿರಬಹುದು ಎಂಬ ಶಂಕೆಯ ಮೇರೆಗೆ ಜೆಸಿಬಿ ಯಂತ್ರಗಳು ಮತ್ತು ಸಿಬ್ಬಂದಿಗಳ ಸಹಾಯದೊಂದಿಗೆ ಉತ್ಖನನ ನಡೆಸಲಾಗಿತ್ತು. ಶೋಧ ಕಾರ್ಯ ಮತ್ತು ವಿಚಾರಣೆ ಮುಂದುವರಿಯುತ್ತಿದ್ದಂತೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿತ್ತು. ಆರಂಭದಲ್ಲಿಕೊಲೆಗಳನ್ನು ಮಾಡಿ ಧರ್ಮಸ್ಥಳ ಸುತ್ತುಮುತ್ತ ಹೂತುಹಾಕಲಾಗಿದೆ ಎಂಬ ಆರೋಪ ಹೊರಿಸಿ ದೂರು ನೀಡಿದ್ದ ಚಿನ್ನಯ್ಯ ಅವರನ್ನೇ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಎಸ್ಐಟಿಯು ಬೆಳ್ತಂಗಡಿ ಕೋರ್ಟ್ಗೆ ತನ್ನ 3,923 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿತ್ತು. ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಒಟ್ಟು 3,923 ಪುಟಗಳ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತಾ ಭಟ್, ಜಯಂತ್ ಟಿ, ವಿಠಲ್ ಗೌಡ ಸೇರಿ ಒಟ್ಟು 6 ಮಂದಿ ವಿರುದ್ಧ ತನಿಖಾ ವರದಿಯನ್ನು ಬೆಳ್ತಂಗಡಿಯ ಜೆಎಂಎಫ್ ನ್ಯಾಯಾಲಯಕ್ಕೆ ಕಳೆದ ಗುರುವಾರ ಸಲ್ಲಿಸಲಾಗಿದೆ.