ಉದ್ಯಮಿ ವಿಜಯ್ ತಾತಾ ವಿರುದ್ಧ ತನಿಖೆಗೆ ಎಸ್ ಐಟಿ ರಚಿಸಲು ಆಗ್ರಹ

ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇನೆ. ಈ ಬಗ್ಗೆಯೂ ತನಿಖೆ ನಡೆಸಬೇಕು

Update: 2024-10-05 05:33 GMT
ವಿಜಯ್ ತಾತಾ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಅಮೃತಹಳ್ಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಉದ್ಯಮಿ ವಿಜಯ್ ತಾತಾನಿಂದ ಅನೇಕರಿಗೆ ಮೋಸವಾಗಿದ್ದು, ಮೋಸ ಹೋದವರಿಗೆ ನ್ಯಾಯ ಕೊಡಿಸಲು ವಿಶೇಷ ತನಿಖಾ ತಂಡ (ಎಸ್ ಐಟಿ) ರಚನೆ ಮಾಡಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಶಾಸಕ ಹೆಚ್.ಎಂ.ರಮೇಶ್ ಗೌಡ ಒತ್ತಾಯಿಸಿದರು.

ಪಕ್ಷದ ಕಚೇರಿಯಲ್ಲಿ ಸಂಸದ ಮಲ್ಲೇಶ್ ಬಾಬು, ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ ಶರವಣ, ಜವರಾಯಿಗೌಡ ಸೇರಿ ಪಕ್ಷದ ವಿವಿಧ ಮುಖಂಡರ ಜತೆ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಅವರು, ವಿಜಯ್ ತಾತಾ ಅನೇಕರಿಗೆ ಮೋಸ ಮಾಡಿದ್ದಾರೆ. ಆತನ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ಇದರ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇನೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಠಾಣೆಯಲ್ಲಿ ಸ್ವತಃ ವಿಜಯ್ ತಾತಾನೇ ನನಗೆ ಹೇಳಿದ್ದಾರೆ. ಕುಮಾರಸ್ವಾಮಿ ಮತ್ತು ನಿಮ್ಮ ಮೇಲೆ ಕೇಸು ದಾಖಲಿಸಲು ನನ್ನ ಮೇಲೆ ಸಿಎಂ ಕಚೇರಿ ಹಾಗೂ ಕೆಲ ಸಚಿವರ ಒತ್ತಡ ಇದೆ ಎಂದು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಿ ಎಂದು ಹೇಳಿದರು.

ವಿಜಯ್ ತಾತಾ ಮೇಲೆ ಕರ್ನಾಟಕದಲ್ಲಿ ಮಾತ್ರವಲ್ಲ, ನಾಗಪುರ, ಪುಣೆ ಮುಂಬೈನಲ್ಲೂ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ನೂರಾರು ಎಫ್ಐಆರ್ ಗಳು ಆಗಿವೆ ಎಂದರು.

ನಾನು ಮನೆಗೆ ಹೋಗಿ ದೂರವಾಣಿ ಕರೆ ಮಾಡಿಕೊಟ್ಡಿದ್ದರೆ ಸಿಸಿ ಟಿವಿ ಇದೆಯಲ್ಲ ಅದನ್ನು ತೋರಿಸಲಿ ಎಂದು ಸವಾಲು ಹಾಕಿದ ರಮೇಶ್ ಗೌಡ, ದೂರವಾಣಿಯ ವಾಯ್ಸ್ ರೆಕಾರ್ಡ್ ತೆಗಿಸಲಿ. ವಿಜಯ್ ತಾತಾ ಹಲವು ಬಾರಿ ನನಗೆ ಕರೆ ಮಾಡಿದ್ದ, ಮೆಸೆಜ್ ಕಳಿಸಿದ್ದ ಎಂದು ಹೇಳಿದರು.

ವಿಜಯ್ ತಾತಾ 2006-07 ಹಾಗೂ 2008ರಲ್ಲಿ ಯೂರೋಪಿಯನ್ ಟೌನ್ ಶಿಪ್ ಮಾಡಿ ಲೇಔಟ್ ಮಾಡುತ್ತೇನೆ ಅಂತಾ ಹೇಳಿದ್ದರು. ಎರಡು ಹೆಲಿಕಾಪ್ಟರ್ ತರಿಸಿ ಪೂಜೆ ಮಾಡಿದ್ದರು. ಯಾವುದೇ ಲೇಔಟ್ ಗೆ ಜಮೀನು ಇಲ್ಲ ಎಂದು ಹೇಳುವ ಮೂಲಕ ಬಿಡಿಎ ಇವನ ಬಣ್ಣ ಬಯಲು ಮಾಡಿತ್ತು. ದೇವನಹಳ್ಳಿ ಬಳಿ ಅಪಾರ್ಟ್ ಮೆಂಟ್ ಕಟ್ಟುತ್ತೇನೆ, ಮನೆ ತೆಗೆದುಕೊಂಡರೆ ಬೆನ್ಜ್ ಕಾರು ಕೊಡುತ್ತೇನೆ ಎಂದು ಜಾಹೀರಾತು ನೀಡಿದ್ದ. ಒಂದು ಜಮೀನನ್ನು ಮೂವರಿಗೆ ಮಾರಾಟ ಮಾಡಿದ್ದಾನೆ. ಸೋಫಾ ಶೋರೂಮ್ ತೆಗೆದು ಹಲವು ಜನರಿಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದರು.

ನಾನು ದೂರು ಕೊಟ್ಟರೆ ಎಫ್ಐಆರ್ ಆಗಲ್ಲ. ಆತ ದೂರು ಕೊಟ್ಟರೆ ಆಗುತ್ತದೆ. ಪೊಲೀಸ್ ಠಾಣೆ ಮುಂದೆ ಧರಣಿ ಕೂರುತ್ತೇನೆ. ನಾಳೆಯಿಂದ ಎಲ್ಲಾ ಸಚಿವರ ಮೇಲೆ ದೂರು ಕೊಟ್ಟರೆ ಎಫ್ಐಆರ್ ಸಚಿವರುಗಳ ಹಾಕುತ್ತಾರಾ? ಧರ್ಮಸ್ಥಳದ ಮಂಜುನಾಥ ಸ್ವಾಮಿ, ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ವಿಜಯ್ ತಾತಾ ಬಳಿ ಯಾವುದೇ ಹಣ ಕೇಳಿಲ್ಲ. ನವರಾತ್ರಿ ನಡೆಯುತ್ತಿದೆ. ಪ್ರಮಾಣ ಮಾಡುತ್ತೇನೆ. ಯಾವುದೇ ಮನೆ ಹಾಳು ಕೆಲಸ ಮಾಡಿಲ್ಲ. ಇದೇ ವಿಜಯ್ ತಾತಾ ಹಲವು ಬಾರಿ ನನಗೆ ಕರೆ ಮಾಡಿದ್ದಾರೆ. ನನ್ನ ಪೋನ್, ಆತನ ಅವರ ಪೋನ್ ಸೀಜ್ ಮಾಡಲಿ ಎಂದು ಹೇಳಿದರು.

ಪೊಲೀಸ್ ಠಾಣೆ ಎದುರು ಧರಣಿ

ವಿಜಯ್ ತಾತಾ ವಿರುದ್ಧ ನಾನು ದೂರು ಕೊಟ್ಟಿದ್ದರೂ ಎಫ್ಐಆರ್ ಮಾಡದಿರುವ ಪೊಲೀಸರ ಕ್ರಮ ಖಂಡಿಸಿ ರಮೇಶ್ ಗೌಡ ಮತ್ತಿತರೆ ಮುಖಂಡರು ಪೊಲೀಸ್‌ ಠಾಣೆ ಎದುರು ಧರಣಿ ನಡೆಸಿದರು.

ಪೊಲೀಸ್ ಇಲಾಖೆ ಸಹಜ ನ್ಯಾಯ ಪಾಲನೆ ಮಾಡುತ್ತಿಲ್ಲ. ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.

Tags:    

Similar News