ಮುಖ್ಯ ಕಾರ್ಯದರ್ಶಿ ಅವಹೇಳನ ಪ್ರಕರಣ: ರವಿಕುಮಾರ್ ವಿರುದ್ಧ ಬಲವಂತದ ಕ್ರಮಕ್ಕೆ ಹೈಕೋರ್ಟ್ ತಡೆ
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ನಡೆಸಿತು.;
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಬಿಜೆಪಿ ಮುಖಂಡ ಎನ್ ರವಿಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಹತ್ವದ ರಿಲೀಫ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಕುಮಾರ್ ವಿರುದ್ಧ ಬಲವಂತದ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ನಿರ್ದೇಶಿಸಿದೆ. ಆದರೆ, ಅವರು ತನಿಖೆಗೆ ಸಹಕರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ನಡೆಸಿತು.
ವಾದ-ಪ್ರತಿವಾದ ಮತ್ತು ಹೈಕೋರ್ಟ್ನ ನಿರ್ದೇಶನ
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಪೀಠವು, ರವಿಕುಮಾರ್ ಅವರ ಹೇಳಿಕೆಯ ವಿಡಿಯೋವನ್ನು ಮೊಬೈಲ್ ಮತ್ತು ಟ್ಯಾಬ್ನಲ್ಲಿ ವೀಕ್ಷಿಸಿತು. ನಂತರ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು, ಆದರೆ ಅವರು ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿತು. ಅಲ್ಲದೆ, ಪ್ರತಿವಾದಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.
ರವಿಕುಮಾರ್ ಪರ ಹಾಜರಿದ್ದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಅವರು, "ರವಿಕುಮಾರ್ ಅವರು ಮುಖ್ಯ ಕಾರ್ಯದರ್ಶಿಗೆ ಮೆಚ್ಚುಗೆ ಸೂಚಿಸಿ ಮಾತನಾಡಿದ್ದಾರೆ ವಿನಾ ದೂರುದಾರರು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಅಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ, ಇದರ ಹಿಂದೆ ರಾಜಕೀಯ ಪಿತೂರಿ ಇದೆ" ಎಂದು ವಾದಿಸಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ಅವರು, "ರವಿಕುಮಾರ್ ಅವರಿಗೆ ಇಂತಹ ಹೇಳಿಕೆ ನೀಡುವ ಚಾಳಿಯಿದೆ. ಈ ಹಿಂದೆ ಕಲಬುರ್ಗಿಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ನಿಂದಿಸಿದ್ದರು. ಇದಕ್ಕೆ ಯಾವುದೇ ವಿಶೇಷ ವಿನಾಯಿತಿ ನೀಡದೇ ಇದೇ ನ್ಯಾಯಾಲಯ ಅವರ ಅರ್ಜಿ ವಜಾಗೊಳಿಸಿತ್ತು" ಎಂದು ಉಲ್ಲೇಖಿಸಿದರು. "ತಡರಾತ್ರಿಯಲ್ಲಿ ಮಹಿಳೆ ಮುಕ್ತವಾಗಿ ಓಡಾಡುವ ಸಂದರ್ಭ ನಿರ್ಮಾಣವಾದಾಗ ಮಾತ್ರ ಸ್ವಾತಂತ್ರ್ಯ ಜಾರಿಗೆ ಬಂದಂತೆ ಎಂದು ಹೇಳಿದ್ದ ಗಾಂಧಿ ಪ್ರತಿಮೆಯ ಕೆಳಗೆ ನಿಂತು ರಾಜ್ಯದ ಅತ್ಯುನ್ನತ ಅಧಿಕಾರಿಯ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ತೀವ್ರ ವಾಗ್ವಾದ
ವಿಡಿಯೋ ಪರಿಶೀಲಿಸಿದ ಪೀಠವು, "ಅಂತಹದ್ದೇನು ಕಾಣುತ್ತಿಲ್ಲ. ತಡೆ ನೀಡಲಾಗುವುದು. ದೂರುದಾರೆ ಸಂತ್ರಸ್ತೆಯಲ್ಲವಲ್ಲ" ಎಂದಿತು. ಇದರಿಂದ ಮತ್ತಷ್ಟು ಉದ್ರಿಕ್ತರಾದ ಬೆಳ್ಳಿಯಪ್ಪ ಅವರು, "ಎಲ್ಲಾ ಪ್ರಕರಣಗಳಲ್ಲೂ ಈ ರೀತಿ ತಡೆ ನೀಡುತ್ತಾ ಹೋದರೆ ಪೊಲೀಸರ ಮನೋಬಲ ಏನಾಗಬೇಕು? ಯಾರು ಬೇಕಾದರೂ ಕ್ರಿಮಿನಲ್ ಕಾನೂನು ಜಾರಿಗೊಳಿಸಬಹುದು. ರವಿಕುಮಾರ್ ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅಲ್ಲೇ ಹೋಗಲಿ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಹೈಕೋರ್ಟ್ ಮುಂದೆ ಬಂದಿದ್ದಾರೆ. ಇದು ಸಂಜ್ಞೆಯ ಅಪರಾಧವಾಗಿದೆ. ಸುದ್ದಿ ವಾಹಿನಿಯ ಸಂಪಾದಕರು, ಸ್ಥಳದಲ್ಲಿದ್ದ ಪೊಲೀಸರು, ಮುಖ್ಯ ಕಾರ್ಯದರ್ಶಿ ಹೇಳಿಕೆಯನ್ನೂ ದಾಖಲಿಸಿ, ರವಿಕುಮಾರ್ ಅವರ ಹೇಳಿಕೆಯ ಉದ್ದೇಶವನ್ನು ಪತ್ತೆ ಮಾಡಲಾಗುವುದು. ಹೀಗಾಗಿ, ತಡೆ ನೀಡಬಾರದು" ಎಂದು ಪ್ರತಿಪಾದಿಸಿದರು.
ಇದಕ್ಕೆ ಆಕ್ಷೇಪಿಸಿದ ಅರುಣ್ ಶ್ಯಾಮ್ ಅವರು, "ರವಿಕುಮಾರ್ ಅವರ ಮನೆಯ ಮುಂದೆ ಹತ್ತು ಮಂದಿ ಪೊಲೀಸರು ಬಂಧನಕ್ಕೆ ಕಾದು ಕೂತಿದ್ದಾರೆ. ಇದು ತಡೆಯಾಜ್ಞೆ ನೀಡಬೇಕಾದ ಮತ್ತು ಅರ್ಜಿದಾರರಿಗೆ ರಕ್ಷಣೆ ನೀಡಲೇಬೇಕಾದ ಪ್ರಕರಣವಾಗಿದೆ. ಇದಕ್ಕೆ ಸಂಬಂಧಿತ ತೀರ್ಪುಗಳನ್ನು ತೋರಿಸಲಾಗುವುದು. ತಡೆ ನೀಡಿದರೆ ಪೊಲೀಸರ ಮನೋಬಲ ಕುಂದುತ್ತದೆ ಎನ್ನುವುದಾದರೆ, ಮುಖ್ಯಮಂತ್ರಿ ಅವರು ಬೆಳಗಾವಿಯಲ್ಲಿ ಎಸಿಪಿಗೆ ಕೈ ಎತ್ತಿದಾಗ ಏನು ಆಗಲಿಲ್ಲವೇ?" ಎಂದು ಪ್ರಶ್ನಿಸಿದರು.
ವಾದ-ಪ್ರತಿವಾದ ಆಲಿಸಿದ ನಂತರ, ಪೀಠವು ರವಿಕುಮಾರ್ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.
ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ನೀಡಿದ ದೂರಿನ ಮೇರೆಗೆ ರವಿಕುಮಾರ್ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ಗಳಾದ 351 (3) (ಮಹಿಳೆಯರ ಘನತೆಗೆ ಧಕ್ಕೆ ತರುವ ಪದಗಳು), 75 (3) (ಎಲೆಕ್ಟ್ರಾನಿಕ್ ಸಂವಹನ ಮೂಲಕ ಅವಮಾನ) ಮತ್ತು 79 (3) (ಅಪರಾಧ ಮಾಡುವ ಉದ್ದೇಶದಿಂದ ದುರುಪಯೋಗ) ಅಡಿ ಪ್ರಕರಣ ದಾಖಲಾಗಿದೆ.