ನವೆಂಬರ್ ನಂತರ ಡಿ ಕೆ ಶಿವಕುಮಾರ್ ಸಿಎಂ: ಹೆಚ್. ವಿಶ್ವನಾಥ್
1.5 ಲಕ್ಷ ಶಿಕ್ಷಕರು ಎರಡು ವರ್ಷಗಳ ಕಾಲ ಗಣತಿ ಮಾಡಿದ್ದರು. ಸಮೀಕ್ಷೆಗೆ 170 ಕೋಟಿ ರೂ. ಗೂ ಅಧಿಕ ಹಣ ಖರ್ಚಾಗಿತ್ತು ಆದರೆ ಸಿಎಂ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ;
ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್
ನವಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗಲಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅಥವಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಹುದು ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ(ಜೂ.14) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ತು ವರ್ಷಗಳ ಹಿಂದೆಯೇ ಜಾತಿಗಣತಿ ಮಾಡಿಸಿದ್ದರು. 1.5 ಲಕ್ಷ ಶಿಕ್ಷಕರು ಎರಡು ವರ್ಷಗಳ ಕಾಲ ಗಣತಿ ಮಾಡಿದ್ದರು. ಸಮೀಕ್ಷೆಗೆ 170 ಕೋಟಿ ರೂ. ಗೂ ಅಧಿಕ ಹಣ ಖರ್ಚಾಗಿತ್ತು. ಆದರೆ ಸಿಎಂ ವರದಿ ಬಹಿರಂಗ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು. ಇದೀಗ ಹೈಕಮಾಂಡ್ಗೆ ಹೆದರಿ ಮತ್ತೆ ಜಾತಿಗಣತಿ ಮಾಡಿರುವುದಾಗಿ ಹೇಳಿದ್ದಾರೆ. ಇದು ಹೇಗೆ ಸಾಧ್ಯ? ಮುಂದಿನ ನವೆಂಬರ್ ಅಥವಾ ಡಿಸೆಂಬರ್ ವೇಳಗೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದರು.
ಹಿಂದುಳಿದ ವರ್ಗಗಳಿಗೆ ಅನ್ಯಾಯ
ಜಾತಿಗಣತಿ ಮಾಡಲು ಶಿಕ್ಷಕರು ಬೇಕು. ಈಗ ತಾನೇ ಶಾಲೆಗಳು ಆರಂಭವಾಗಿರುವುದರಿಂದ ಶಿಕ್ಷಕರು ಲಭ್ಯವಿರುವುದಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತೆ ಜಾತಿಗಣತಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಮರು ಜಾತಿಗಣತಿ ಮಾಡಿಸುವುದಿಲ್ಲ ಎಂದು ಹೈಕಮಾಂಡ್ಗೆ ಹೇಳಿದ್ದರೇ ಸಿದ್ದರಾಮಯ್ಯ ಹೀರೋ ಆಗುತ್ತಿದ್ದರು. ಹೈಕಮಾಂಡ್ ಮಾತು ಕೇಳಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದರು. ಮೂರು ತಿಂಗಳೊಳಗೆ ಜಾತಿಗಣತಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಾಮಾಣಿಕತೆ ಇಲ್ಲದ ಸಿಎಂ
ಸಿದ್ದರಾಮಯ್ಯ ಸುಮ್ಮನೆ ಮಾಜಿ ಮುಖ್ಯಮಂತ್ರಿ ದೇವರಾಜ ಹೆಸರು ಹೇಳಬಾರದು. ಪ್ರಾಮಾಣಿಕತೆ ಇಲ್ಲದ, ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ ಎಂದು ಚರಿತ್ರೆಯಲ್ಲಿ ಈಗಾಗಲೇ ದಾಖಲಾಗಿದ್ದೀರಿ. 170 ಕೋಟಿ ರೂ. ಗೂ ಹೆಚ್ಚು ಹಣ ಖರ್ಚು ಮಾಡಿ ಜಾತಿಗಣತಿ ಮಾಡಿಸಿದ ವರದಿಯನ್ನು ಸಿಎಂ ತಿಪ್ಪೆಗೆ ಎಸೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.