Priyank Kharge Interview: ಕರ್ನಾಟಕಕ್ಕೆ ಬರುವ ಹೂಡಿಕೆದಾರರಿಗೆ ಕೇಂದ್ರದಿಂದ 'ಧಮ್ಕಿ': ಪ್ರಿಯಾಂಕ್ ಖರ್ಗೆ ಆರೋಪ
ನಾವು ಕಷ್ಟಪಟ್ಟು ರಾಜ್ಯಕ್ಕೆ ಬಂಡವಾಳ ತರಲು ಚರ್ಚೆ ನಡೆಸಿದರೆ, ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ ಬರುವ ಬಂಡವಾಳವನ್ನು ಒತ್ತಡ ಹೇರಿ ಉತ್ತರ ಭಾರತದ ರಾಜ್ಯಗಳಿಗೆ ರವಾನಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.;
ಕರ್ನಾಟಕಕ್ಕೆ ಬಂಡವಾಳ ಹೂಡಲು ಬರುವ ವಿದೇಶಿ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ 'ಧಮ್ಕಿ' ಹಾಕುತ್ತಿದೆ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಅಮೆರಿಕ ಪ್ರವಾಸಕ್ಕೆ ಕೇಂದ್ರ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ದ ಫೆಡರಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಆಘಾತಕಾರಿ ಹೇಳಿಕೆ ನೀಡಿದ್ದು, ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಅಧಿಕೃತವಾಗಿ ಯೋಜಿತವಾಗಿದ್ದ ಅಮೆರಿಕ ಪ್ರವಾಸಕ್ಕೆ ತಾನು ನೇತೃತ್ವ ವಹಿಸಬೇಕಿತ್ತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಬೋಸ್ಟನ್ನಲ್ಲಿ ನಡೆಯುವ BIO 2025 ಸಮ್ಮೇಳನ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಡಿಸೈನ್ ಆಂಡ್ ಆಟೊಮೇಷನ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಲು ತೆರಳಬೇಕಿತ್ತು. ಆದರೆ, "ನನ್ನ ನೇತೃತ್ವದ ತಂಡಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ, ಆದರೆ ಅಧಿಕಾರಿಗಳಿಗೆ ಅನುಮತಿ ನೀಡಿದೆ. ಈ ತಾರತಮ್ಯಕ್ಕೆ ಕಾರಣವೇನು? ಕಾರಣ ನೀಡಿದ್ದರೆ ಒಪ್ಪಿಕೊಳ್ಳುತ್ತಿದ್ದೆ" ಎಂದು ಖರ್ಗೆ ಆಕ್ಷೇಪಿಸಿದ್ದಾರೆ. "ಮೇ 15 ರಂದೇ ನಿಖರ ಕಾರ್ಯಕ್ರಮದೊಂದಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಈ ಬಗ್ಗೆ ಸ್ಪಷ್ಟ ಕಾರಣ ನೀಡಲು ನಾನು ವಿದೇಶಾಂಗ ಇಲಾಖೆಗೆ (MEA) ಪತ್ರ ಬರೆದಿದ್ದೇನೆ" ಎಂದು ಅವರು ಹೇಳಿದ್ದಾರೆ. ಇದೇ ರೀತಿಯ ಘಟನೆ ತಮಿಳುನಾಡು ಸಚಿವರೊಬ್ಬರಿಗೂ ನಡೆದಿರುವುದನ್ನು ಅವರು ಉಲ್ಲೇಖಿಸಿದ್ದು, ಅವರಿಗೂ ಕೇಂದ್ರದ ಅನುಮತಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಮೋದಿಯವರಿಗೆ ಬಹಿರಂಗ ಸವಾಲು: ಬಂಡವಾಳ ಆಕರ್ಷಣೆ ಕುರಿತು ಚರ್ಚೆಗೆ ಆಹ್ವಾನ
"ನಾವು ವಿದೇಶಕ್ಕೆ ಮೋಜಿಗೆ ಹೋಗುತ್ತಿಲ್ಲ. ನಾನು ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು 10 ದಿನಗಳ ವಿದೇಶ ಪ್ರವಾಸದಲ್ಲಿ ಹಲವರೊಂದಿಗೆ ಚರ್ಚೆ ನಡೆಸಿ, ರಾಜ್ಯಕ್ಕೆ 23,000 ಕೋಟಿ ರೂ.ಗಿಂತಲೂ ಹೆಚ್ಚಿನ ಬಂಡವಾಳ ತಂದಿದ್ದೇವೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಿವೆ" ಎಂದು ಖರ್ಗೆ ತಿಳಿಸಿದರು. "ಪ್ರಧಾನಿ ಮೋದಿ ವಿದೇಶಕ್ಕೆ ತೆರಳಿ ಭಾರತಕ್ಕೆ ಎಷ್ಟು ಬಂಡವಾಳ ತಂದಿದ್ದಾರೆ? ಈ ಬಗ್ಗೆ ಮೋದಿ ಮತ್ತು ಬಿಜೆಪಿ ನಾಯಕರೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ" ಎಂದು ಅವರು ಸವಾಲು ಹಾಕಿದರು.
ಬಂಡವಾಳ ಹೂಡಿಕೆಗೆ ಕರ್ನಾಟಕ ಮತ್ತು ತಮಿಳುನಾಡು ಹೂಡಿಕೆದಾರರ ಮೊದಲ ಆಯ್ಕೆಯಾಗಿದ್ದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡನೇ ಆಯ್ಕೆಯಾಗಿವೆ ಎಂದು ಅವರು ಹೇಳಿದ್ದಾರೆ. ಆದರೆ, "ನಾವು ಕಷ್ಟಪಟ್ಟು ರಾಜ್ಯಕ್ಕೆ ಬಂಡವಾಳ ತರಲು ಚರ್ಚೆ ನಡೆಸಿದರೆ, ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ ಬರುವ ಬಂಡವಾಳವನ್ನು ಒತ್ತಡ ಹೇರಿ ಉತ್ತರ ಭಾರತದ ರಾಜ್ಯಗಳಿಗೆ ರವಾನಿಸುತ್ತಿದೆ" ಎಂದು ಖರ್ಗೆ ಗಂಭೀರವಾಗಿ ಆರೋಪಿಸಿದ್ದಾರೆ. ಈ ಕುರಿತು ಕೇಂದ್ರಕ್ಕೆ ಪತ್ರ ಬರೆದಿದ್ದು, ಬೇಕಾದರೆ ಬಿಜೆಪಿ ನಾಯಕರೊಂದಿಗೆ ಚರ್ಚೆಗೆ ಸಿದ್ಧ ಎಂದಿದ್ದಾರೆ.
ಸುಳ್ಳು ಸುದ್ದಿ ತಡೆ ವಿಧೇಯಕ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ
ಸುಳ್ಳು ಸುದ್ದಿ (ಫೇಕ್ ನ್ಯೂಸ್) ತಡೆಗೆ ವಿಧೇಯಕ ತರುವ ನಿರ್ಧಾರವಾಗಿದೆ ಎಂದು ಖರ್ಗೆ ತಿಳಿಸಿದರು. "ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಯುತ್ತಿದ್ದು, ಕರಡು ಸಿದ್ಧವಾಗಿದೆ. ಮುಂದಿನ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಲಾಗುವುದು" ಎಂದು ಅವರು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ಪಿಎಸ್ಐ ಹಗರಣ, ಕೊರೊನಾ ಹಗರಣ, ಮತ್ತು 40% ಕಮಿಷನ್ ಆರೋಪ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. "ಬಿಜೆಪಿಯವರು ಕಡತಗಳನ್ನು ನಾಶಪಡಿಸಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಆದರೆ, ಕೊರೊನಾ ಹಗರಣದಲ್ಲಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಹೆಸರು ಕೇಳಿಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಬಿಜೆಪಿಯ ದೊಡ್ಡ ತಿಮಿಂಗಿಲಗಳಿಗೆ ಶಿಕ್ಷೆ ಕೊಡಿಸಲಾಗುವುದು" ಎಂದು ಖರ್ಗೆ ಘೋಷಿಸಿದರು.
ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವರೇ?
ತಮ್ಮ ತಂದೆಯಾದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, "ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವುದು ನಮ್ಮ ಕೈಯಲ್ಲಿಲ್ಲ. ಇದು ಹೈಕಮಾಂಡ್ನ ತೀರ್ಮಾನ. ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಅವರೇ ನಿರ್ಧರಿಸುತ್ತಾರೆ. ಆದರೆ, ಕಾಂಗ್ರೆಸ್ನಲ್ಲಿ ಅವರಿಗೆ ಎಐಸಿಸಿ ಅಧ್ಯಕ್ಷರ ಉನ್ನತ ಸ್ಥಾನವಿದೆ. ಇತರ ರಾಜ್ಯಗಳ ಸಿಎಂ ಆಯ್ಕೆಯ ಸ್ಥಾನದಲ್ಲಿರುವ ಅವರಿಗೆ ಜನರ ಮೇಲೆ ಋಣವಿದೆ. ನಮ್ಮ ಕುಟುಂಬದ ಮೇಲೆ ಜನರ ಪ್ರೀತಿ ಮತ್ತು ಕ್ಷೇತ್ರದ ಋಣ ಸಾಕಷ್ಟಿದೆ, ಇದಕ್ಕೆ ನಾವು ಯಾವಾಗಲೂ ಋಣಿಯಾಗಿರುತ್ತೇವೆ" ಎಂದು ತಿಳಿಸಿದರು.