ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರ : ದಿಢೀರ್‌ ದೆಹಲಿಗೆ ತೆರಳಿದ ವಿಜಯೇಂದ್ರ, ಆರ್‌.ಅಶೋಕ್‌

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರರನ್ನು ಭೇಟಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸುವ ಸಾಧ್ಯತೆ ಇದೆ.;

Update: 2025-06-24 15:27 GMT

ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷರ ನೇಮಕ ಅಂತಿಮಗೊಂಡಿದೆ ಎನ್ನುವಷ್ಟರಲ್ಲಿಯೇ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ  ನಾಯಕ ಆರ್‌.ಅಶೋಕ್‌ ಪ್ರತ್ಯೇಕವಾಗಿ ದೆಹಲಿಗೆ ದಿಢೀರ್‌ ಆಗಿ ಪ್ರಯಾಣ ಬೆಳೆಸಿದ್ದಾರೆ. 

ಮಂಗಳವಾರ ಮಧ್ಯಾಹ್ನ ಆರ್‌.ಅಶೋಕ್‌ ದೆಹಲಿಗೆ ಪ್ರಯಾಣಿಸಿದರೆ, ಸಂಜೆಯ ವೇಳೆಗೆ ವಿಜಯೇಂದ್ರ ತೆರಳಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಸಂಬಂಧ ಬಿಜೆಪಿಯಲ್ಲಿ ಹಲವು ತಿಂಗಳನಿಂದ ಹರಸಾಹಸ ನಡೆಯುತ್ತಲೇ ಇದೆ. ಬಿಜೆಪಿಯಲ್ಲಿನ ಬಂಡಾಯ ಬಣವು ವಿಜಯೇಂದ್ರ ಅವರೇ ಮುಂದುವರಿಯಲು ಅಡ್ಡಿಯಾಗಿದೆ. ಹೈಕಮಾಂಡ್‌ಗೆ ವಿಜಯೇಂದ್ರ ವಿರುದ್ಧ ದೂರು ಸಹ ನೀಡಿದೆ. 

ಈ ನಡುವೆ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೆಸರು ಸಹ ಮುನ್ನೆಲೆಗೆ ಬಂದಿದೆ. ವಿ.ಸೋಮಣ್ಣ ಸಹ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ವಿ.ಸೋಮಣ್ಣನಿಗೆ ಅವರ ಕ್ಷೇತ್ರ ಗೋವಿಂದರಾಜ ನಗರದಿಂದ  ಸ್ಪರ್ಧಿಸಲು ಟಿಕೆಟ್‌ ತಪ್ಪಿಸಿ ಚಾಮರಾಜನಗರ ಮತ್ತು ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ ಬರುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಜಯೇಂದ್ರ ರಾಜಕೀಯ ಷಡ್ಯಂತ್ರ ರೂಪಿಸಿದ್ದರು ಎಂದು ಹೇಳಲಾಗಿದೆ. ಎರಡು ಕ್ಷೇತ್ರದಿಂದಲೂ ವಿ.ಸೋಮಣ್ಣ ಸೋಲನುಭವಿಸಿದ್ದರು. ಇದು ಸೋಮಣ್ಣ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ವಿಜಯೇಂದ್ರ ವಿರುದ್ಧ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸೋಮಣ್ಣ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. 

ಕರ್ನಾಟಕ ಬಿಜೆಪಿ ಘಟಕಕ್ಕೆ ವಿಜಯೇಂದ್ರ ಅವರ ಹೆಸರೇ ಅಂತಿಮ ಎಂದು ಬಿಂಬಿಸಲಾಗಿತ್ತು. ಈ ನಡುವೆ, ಭಿನ್ನಮತೀಯರ ಗುಂಪಿನಲ್ಲಿ ಕಾಣಿಸಿಕೊಂಡ ನಾಯಕರು ಮತ್ತೊಮ್ಮೆ ಸಭೆ ನಡೆಸಿದರು. ಈ ಮೂಲಕ ವಿಜಯೇಂದ್ರ ಹೆಸರು ಇನ್ನೂ ಅಂತಿಮಗೊಂಡಿಲ್ಲ ಎಂಬ ಸಂದೇಶವನ್ನು ರವಾನಿಸಿದರು. ರಾಜ್ಯದ ಬಿಜೆಪಿಯು ಎಲ್ಲಾ 39 ಜಿಲ್ಲೆಗಳಿಗೆ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಿ, ಘೋಷಣೆಯನ್ನೂ ಮಾಡಲಾಗಿದೆ. ಈ ಪೈಕಿ 34 ಅಧ್ಯಕ್ಷರು ವಿಜಯೇಂದ್ರ ಅವರ ಪರವಾಗಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಜಯೇಂದ್ರ ಅವರ ಹೆಸರನ್ನು ಪ್ರಕಟಿಸುತ್ತಾರೆ ಎಂಬ ಸುದ್ದಿ ಹಬ್ಬಿಸಲಾಗಿತ್ತು. 

ಇದೀಗ ವಿಜಯೇಂದ್ರ ಮತ್ತು ಆರ್‌.ಅಶೋಕ್‌ ಪ್ರತ್ಯೇಕವಾಗಿ ದೆಹಲಿಗೆ ತೆರಳಿದ್ದು, ರಾಜ್ಯಾಧ್ಯಕ್ಷರ ಹೆಸರನ್ನು ಶೀಘ್ರದಲ್ಲಿಯೇ ಪ್ರಕಟಿಸುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಭೇಟಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರರನ್ನು ಸಹ ಭೇಟಿಯಾಗಿ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. 


Tags:    

Similar News