Bangalore Stampede | ಸಿಎಂ ಸಿದ್ದರಾಮಯ್ಯ: ಆಡಳಿತದಲ್ಲಿ ಬಿಗುವಿಲ್ಲದೇ ಇರುವುದೇ ಕಾಲ್ತುಳಿತಕ್ಕೆ ಕಾರಣ?
ಕಾಲ್ತುಳಿತ ದುರಂತಕ್ಕೆ ಸರ್ಕಾರದ ಲೋಪವೇ ನೇರ ಕಾರಣ ಎಂಬುದು ಸಂದರ್ಭ ಹಾಗೂ ಸನ್ನಿವೇಶಗಳಿಂದ ತಿಳಿದು ಬಂದರೂ ಘಟನೆಗೆ ಹೊಣೆಯಾಗಿಸಿ ಪೊಲೀಸರನ್ನು ಅಮಾನತು ಮಾಡಿದ್ದು ಸಿಎಂ ವಿರುದ್ಧದ ಟೀಕೆಗೆ ಕಾರಣವಾಗಿದೆ. ಒಂದೆಡೆ ಪ್ರತಿಪಕ್ಷಗಳ ವಾಗ್ದಾಳಿ, ಸಾರ್ವಜನಿಕ ಆಕ್ರೋಶವೂ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ
ಆರ್ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತವು ರಾಜ್ಯ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿದೆ. ಹೆಜ್ಜೆ ಹೆಜ್ಜೆಗೂ ಲೋಪಗಳು ಕಂಡು ಬರುತ್ತಿರುವುದರಿಂದ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಈ ವೈಫಲ್ಯಗಳಿಗೆ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಗಿಯಿಲ್ಲದ ಆಡಳಿತವೇ ಕಾರಣ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಆರ್ಸಿಬಿ ಫೈನಲ್ನಲ್ಲಿ ಗೆಲುವು ಸಾಧಿಸಿದ ರಾತ್ರಿಯೇ ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಮರುದಿನ ಆರ್ಸಿಬಿ ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸಲಿದ್ದು, ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆರ್ಸಿಬಿ ಕೂಡ ಟ್ವೀಟ್ ಮಾಡಿ ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವಕ್ಕೆ ಅಭಿಮಾನಿಗಳಿಗೆ ಆಹ್ವಾನ ನೀಡಿತ್ತು. ಇಷ್ಟೆಲ್ಲಾ ಗೊತ್ತಿದ್ದರೂ ಸರ್ಕಾರ ಯಾವುದೇ ಪೂರ್ವ ತಯಾರಿ ಕೈಗೊಳ್ಳದೇ ಏಕಾಏಕಿ ವಿಜಯೋತ್ಸವಕ್ಕೆ ಅನುಮತಿ ನೀಡಿತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಭಿಮಾನಿಗಳ ಉನ್ಮಾದ, ಪೂರ್ವ ಸಿದ್ಧತೆ ಇಲ್ಲದ ಆಡಳಿತದ ಅನಾದರದಿಂದ ಕಾಲ್ತುಳಿತ ಸಂಭವಿಸಿ, 11ಮಂದಿಯ ಸಾವಿಗೆ ಕಾರಣವಾಯಿತು.
ಸಿಎಂಗೆ ಮಾಹಿತಿ ಇರಲಿಲ್ಲವೇ?
ಆರ್ಸಿಬಿ ವಿಜಯೋತ್ಸವದ ಕುರಿತು ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಮಾರು ಮೂರು ಗಂಟೆಗಳವರೆಗಿನ ಮಾಹಿತಿ ಇರಲಿಲ್ಲ ಎಂಬುದು ಚರ್ಚಿತ ವಿಷಯವಾಗಿದೆ. ಸರ್ಕಾರದ ಮುಖ್ಯಸ್ಥರಾಗಿರುವ ಸಿಎಂ ಸಿದ್ದರಾಮಯ್ಯ ಅವರ ಅಧೀನದಲ್ಲೇ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ, ಡಿಪಿಎಆರ್ ಸೇರಿದಂತೆ ಎಲ್ಲಾ ಇಲಾಖೆಗಳು ಬರಲಿವೆ. ಹೀಗಿರುವಾಗ ಲಕ್ಷಾಂತರ ಜನರು ಸೇರುವ ದೊಡ್ಡ ವಿಜಯೋತ್ಸವದ ಆಗು-ಹೋಗುಗಳ ಮಾಹಿತಿ ಇರಲಿಲ್ಲ ಎಂಬುದು ಸಿಎಂ ಆಡಳಿತ ವೈಖರಿಯನ್ನು ಪ್ರಶ್ನಿಸುವಂತಿದೆ.
ವಿಧಾನಸೌಧದ ಮುಂದೆ ಸನ್ಮಾನ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸಲು ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದ ರಾಜು ಒತ್ತಡವೇ ಕಾರಣ ಎಂಬ ಸಚಿವರ ಅಭಿಪ್ರಾಯದಿಂದ ಎಚ್ಚೆತ್ತುಕೊಂಡ ಸಿಎಂ ಅವರು ಗೋವಿಂದರಾಜುಗೆ ನೀಡಿದ್ದ ರಾಜಕೀಯ ಕಾರ್ಯದರ್ಶಿ (ಕ್ಯಾಬಿನೆಟ್ ದರ್ಜೆ) ಸ್ಥಾನಮಾನ ಹಿಂಪಡೆದರು.
ಪೊಲೀಸ್ ಇಲಾಖೆ ವಿಧಾನಸೌಧದ ಎದುರು ನಡೆದ ಕಾರ್ಯಕ್ರಮ, ಮೆರವಣಿಗೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿ, ವಿಜಯೋತ್ಸವದಿಂದ ಆಗುವ ಸಮಸ್ಯೆಗಳ ಬಗ್ಗೆ ಎಚ್ಚರಿಸಿದ್ದರೂ ಸರ್ಕಾರವೇ ಅನುಮತಿ ನೀಡಿತ್ತು. ಆದರೆ, ಕಾಲ್ತುಳಿತದ ಘಟನೆಗೆ ಹೊಣೆಯಾಗಿಸಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದ ಸಿಎಂ ನಿಲುವು ಆಕ್ರೋಶಕ್ಕೆ ಕಾರಣವಾಗಿದೆ.
ಆರ್ಸಿಬಿ ಸಂಭ್ರಮ ತಂದ ಮುಜುಗರ
ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದ ಘಟನೆ ರಾಜ್ಯ ಸರ್ಕಾರವನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ.
ಆರ್ಸಿಬಿ ವಿಜಯೋತ್ಸವಕ್ಕೆ ಸಂಬಂಧಿಸಿ ಆತುರದ ನಿರ್ಧಾರ, ಸಮನ್ವಯತೆ ಕೊರತೆ, ಅಧಿಕಾರಿಗಳ ಸಲಹೆ ನಿರ್ಲಕ್ಷ್ಯಿಸಿದ ಪರಿಣಾಮ ಭೀಕರ ಕಾಲ್ತುಳಿತ ಸಂಭವಿಸಿದ್ದು, 11ಜನರ ಸಾವಿನೊಂದಿಗೆ 'ಕೊಲೆಗಡುಕ' ಸರ್ಕಾರ ಎಂಬ ಪ್ರತಿಪಕ್ಷದವರ ಆರೋಪಕ್ಕೂ ಗುರಿಯಾಗಿದೆ.
ಕಾಲ್ತುಳಿತ ದುರಂತಕ್ಕೆ ಸರ್ಕಾರದ ಲೋಪವೇ ನೇರ ಕಾರಣ ಎಂಬುದು ಸಂದರ್ಭ ಹಾಗೂ ಸನ್ನಿವೇಶಗಳಿಂದ ತಿಳಿದು ಬಂದಿದ್ದು, ಪ್ರತಿಪಕ್ಷಗಳ ವಾಗ್ದಾಳಿ, ಸಾರ್ವಜನಿಕ ಆಕ್ರೋಶ, ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ.
ಕಾಣದ ಸಮನ್ವಯತೆ, ನಿಯಂತ್ರಣ
ಆರ್ಸಿಬಿ ವಿಜಯೋತ್ಸವ ಆಯೋಜನೆ ವಿಚಾರದಲ್ಲಿ ಸರ್ಕಾರದ ಸಚಿವರು ಹಾಗೂ ಸಿಎಂ ನಡುವೆ ಸಮನ್ವಯತೆ ಕೊರತೆ ಇತ್ತೆಂಬುದು ಬಹಿರಂಗವಾಗಿದೆ. ಸಂಭ್ರಮಾಚರಣೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ , ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಾಕುತ್ತಿದ್ದರು. ಒಂದೊಂದು ಭಿನ್ನ ಹೇಳಿಕೆಯೂ ಆರ್ಸಿಬಿ ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿತ್ತು.
ಆದರೆ, ಶಕ್ತಿಸೌಧದಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರ ಹೊರಗೆ ಏನಾಗುತ್ತಿದೆ ಎಂಬ ಮಾಹಿತಿ ಇರಲಿಲ್ಲ. ಸಚಿವರು ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ. ತಮ್ಮ ಆಪ್ತ ಗೋವಿಂದರಾಜು ಕೂಡ ಸರಿಯಾದ ಮಾಹಿತಿ ನೀಡಿರಲಿಲ್ಲ ಎಂಬುದು ಆಡಳಿತ ಅಥವಾ ಸರ್ಕಾರದ ಮೇಲೆ ಸಿಎಂ ಬಿಗಿ ಹಿಡಿತ ಎಷ್ಟರಮಟ್ಟಿಗೆ ಇತ್ತೆಂಬುದು ಚರ್ಚೆಗೆ ಒಳಗಾಗಿದೆ.
ಈ ಮಧ್ಯೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಮಾಧ್ಯಮಗಳಲ್ಲಿ ಒಂದಿಬ್ಬರು ಮೃತಪಟ್ಟಿರುವ ಬಗ್ಗೆ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದರು. ಆದರೂ, ಏನೂ ನಡೆದೇ ಇಲ್ಲ ಎಂಬಂತೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಎಂ, ಸಚಿವರು ಆರ್ಸಿಬಿ ಆಟಗಾರರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಕಾಲ್ತುಳಿತದ ಬಳಿಕವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸಿಎಂ ಒಬ್ಬರೇ ಹೋಗಿ ಆಟಗಾರರೊಂದಿಗೆ ಹೋಗಿ ವಿಜಯೋತ್ಸವದಲ್ಲಿ ಭಾಗವಹಿಸಿದ್ದು, ಸರ್ಕಾರವನ್ನು ಇನ್ನಷ್ಟು ಮುಜುಗರಕ್ಕೆ ಗುರಿ ಮಾಡಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆರ್ಸಿಬಿ ಆಟಗಾರರನ್ನು ಸ್ವಾಗತಿಸುವ ಕ್ಷಣದಿಂದ ಬೀಳ್ಕೊಡುವವರೆಗೂ ಜೊತೆಯಲ್ಲೇ ಇದ್ದರು. ಆದರೆ, ಕಾಲ್ತುಳಿತ, ಆರ್ಸಿಬಿ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ, ಪರೇಡ್ಗೆ ಅನುಮತಿ ನೀಡಲಾಗದು ಎಂದು ಹೇಳಿದ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಯಾವ ವಿಷಯವನ್ನೂ ಸಿಎಂ ಅವರ ಗಮನಕ್ಕೆ ತಂದಿರಲಿಲ್ಲ. ಇಷ್ಟೆಲ್ಲಾ ಬೆಳವಣಿಗೆಗಳಾದರೂ ಸಿಎಂ ಕೂಡ ಡಿ.ಕೆ. ಶಿವಕುಮಾರ್ ಅವರನ್ನು ನಿಯಂತ್ರಿಸಲು ಮುಂದಾಗಿರಲಿಲ್ಲ. ಹಾಗಾಗಿ ಘೋರ ದುರಂತ ನಡೆದು ಈಗ ಸರ್ಕಾರ ಪಶ್ಚಾತಾಪ ಪಡುತ್ತಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಡಿಸಿಎಂ ಮೇಲೆ ಸಿಎಂ ಗರಂ
ಕಾಲ್ತುಳಿತದ ಘಟನೆಯು ಸರ್ಕಾರದ ಘನತೆಗೆ ಮಸಿ ಬಳಿದಂತಾಗಿದೆ. ಆರ್ಸಿಬಿ ವಿಜಯೋತ್ಸವದ ಹೆಸರಿನಲ್ಲಿ ವೈಯಕ್ತಿಕ ಪ್ರಚಾರ ಪಡೆಯಲು ಮುಂದಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಹಲವು ಸಚಿವರನ್ನು ಸಿಎಂ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, "ನೀವು ಎಚ್ಎಚ್ಎಎಲ್ಗೆ ಹೋಗಿದ್ದೇಕೆ, ಆಟಗಾರರನ್ನು ಏಕೆ ಸ್ವಾಗತ ಮಾಡಿದಿರಿ. ಈ ಬಗ್ಗೆ ನಿಮಗೆ ಪ್ರೋಟೋಕಾಲ್ ಇತ್ತೇ? ಎಂದು ಸಂಪುಟ ಸಭೆಯಲ್ಲೇ ಆಕ್ರೋಶ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊರಬರುತ್ತಿರುವ ವಿವರಗಳು
ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿದ ಒಂದು ದಿನದ ನಂತರ ಅನುಮತಿ ವಿಚಾರ ಸಂಬಂಧ ವಿವರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಎಸ್ಸಿಎ ಕೋರಿಕೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಬಳಿಕ ಡಿಪಿಎಆರ್ ಅನುಮತಿ ನೀಡಿದ್ದ ಸಂಗತಿ ಸಿಎಂ ಸಿದ್ದರಾಮಯ್ಯ ಅವರು ತಿಳಿಯದಿರುವುದು ಟೀಕೆಗೆ ಗುರಿಯಾಗಿದೆ.
ಗೆಲುವಿಗೂ ಮುನ್ನವೇ ಅನುಮತಿ ಕೋರಿಕೆ
ಆರ್ಸಿಬಿ ಪಂದ್ಯ ನಡೆಯುವ ಒಂದು ದಿನ ಮುಂಚೆಯೇ ಆರ್ ಸಿಬಿ ಆಡಳಿತ ಮಂಡಳಿಯವರು ಕಬ್ಬನ್ ಪಾರ್ಕ್ ಠಾಣೆಗೆ ಹೋಗಿ ಗೆದ್ದರೆ ಸಂಭ್ರಮಾಚರಣೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದ ಸಂಗತಿ ಬೆಳಕಿಗೆ ಬಂದಿದೆ.
ಆದರೆ, ಕೆಎಸ್ ಸಿಎ ಸಲ್ಲಿಸಿದ್ದ ಮನವಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿಗಳು ಅನುಮತಿ ನಿರಾಕರಣೆ ಮಾಡಿದ್ದರು. ಪೊಲೀಸ್ ಠಾಣೆಯಲ್ಲಿ ಅನುಮತಿ ದೊರೆಯದ ಕಾರಣ ಕೆಎಸ್ಸಿಎ ಅಧಿಕಾರಿಗಳು ವಿಧಾನಸೌಧದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಬಳಿಕ ಒಪ್ಪಿಗೆ ಪಡೆದಿದ್ದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಿದ್ದ ವೇದಿಕೆ ಮೇಲೆ ಕೇವಲ 30 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯ ಬಗ್ಗೆ ವರದಿ ನೀಡಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡ 30 ಮಂದಿ ಮಾತ್ರ ಇರಬಹುದು ಎಂದು ಹೇಳಿದ್ದರು. ಆದರೆ, ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು, ಅವರ ಕುಟುಂಬಸ್ಥರಿಂದ ತುಂಬಿ ಹೋಗಿತ್ತು. ಇದು ಕೂಡ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಲೋಪಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಗ್ಯಾರಂಟಿಗಷ್ಟೇ ಸೀಮಿತವಾದರಾ ಸಿಎಂ?
ಗ್ಯಾರಂಟಿ ಯೋಜನೆಗಳ ಘೋಷಣೆಯಿಂದ ಹೆಚ್ಚು ಜನಪ್ರಿಯತೆ ಸಂಪಾದಿಸಿದ ಸಿಎಂ ಸಿದ್ದರಾಮಯ್ಯ ಅವರು ಈಗ ವಿವಾದಗಳಿಂದ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ.
ಮುಡಾ, ವಾಲ್ಮೀಕಿ ಹಾಗೂ ಭೋವಿ ಅಭಿವೃದ್ಧಿ ನಿಗಮದ ಹಗರಣ, ಕೆಪಿಎಸ್ಸಿ ಕರ್ಮಕಾಂಡ, ಹನಿಟ್ರ್ಯಾಪ್ ಪ್ರಕರಣ, ಮಂಗಳೂರಿನಲ್ಲಿ ಕೋಮು ಸಂಘರ್ಷ ಹಾಗೂ ಸರಣಿ ಕೊಲೆಗಳು, ಬ್ಯಾಂಕ್ ದರೋಡೆಯಂತಹ ಹಲವು ವಿಚಾರಗಳಲ್ಲಿ ಸರ್ಕಾರ ದೊಡ್ಡ ಮುಜುಗರ ಎದುರಿಸಿದೆ. ಅಧಿಕಾರಕ್ಕೆ ಬಂದ ನಂತರ ಕೇವಲ ಕುರ್ಚಿ ಹಾಗೂ ಗ್ಯಾರಂಟಿಗಳಲ್ಲೇ ಸಿಎಂ ಮುಳುಗಿ ಹೋಗಿದ್ದು, ಆಡಳಿತದ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಅವರ ಅಭಿಮಾನಿಗಳೇ ಕೇಳುತ್ತಿದ್ದಾರೆ.
ತಮ್ಮ 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ 13 ಬಾರಿ ಬಜೆಟ್ ಮಂಡಿಸಿದ ಅನುಭವ ಹೊಂದಿರುವ ಸಿಎಂ ಅವರು, ತಮ್ಮದೇ ಸರ್ಕಾರದ ಆಡಳಿತದಲ್ಲಿನ ಲೋಪಗಳು, ವಿವಾದಗಳಲ್ಲಿ ಟೀಕಾಕಾರರಿಗೆ ಅಸ್ತ್ರ ಒದಗಿಸಿಕೊಟ್ಟಿದ್ದಾರೆ.