ಲೋಕಾಯುಕ್ತದ ಹೆಸರಲ್ಲಿ ಅಕ್ರಮ; ಸರ್ಕಾರಿ ನೌಕರರಿಗೆ ಬೆದರಿಸಿ ವಸೂಲಿ ಮಾಡುತ್ತಿದ್ದವನ ವಿರುದ್ಧ 35 ಕಡೆ ದೂರು!
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೇ ಪ್ರಕರಣದಲ್ಲಿ ಭಾಗಿಯಾಗಿರುವುದು ಸೇರಿದಂತೆ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಬೇಲಿಯೇ ಎದ್ದು ಹೊಲ ಮೇಯ್ದದಂತೆ ಆಗಿದೆ.;
ಲೋಕಾಯುಕ್ತ ಸಂಸ್ಥೆಯ ಹೆಸರಲ್ಲಿ ನಡೆದಿರುವ ಅಕ್ರಮ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅಬಕಾರಿ ಸೇರಿದಂತೆ ವಿವಿಧ ಇಲಾಖೆಯ ನೌಕರರಿಗೆ ಕರೆ ಮಾಡಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದೆಡೆಲ್ಲೆ 35 ಪ್ರಕರಣಗಳು ದಾಖಲಾಗಿವೆ.
ಸರ್ಕಾರಿ ನೌಕರರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿ ಮಾಜಿ ಹೆಡ್ಕಾನ್ಸ್ಟೇಬಲ್ ನಿಂಗಪ್ಪ ಅಲಿಯಾಸ್ ಸಾವಂತ್ ಬಂಧನ ಬಳಿಕ ಹಲವು ವಿಷಯಗಳು ಬಯಲಾಗುತ್ತಿವೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೇ ಪ್ರಕರಣದಲ್ಲಿ ಭಾಗಿಯಾಗಿರುವುದು ಸೇರಿದಂತೆ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಈ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಮತ್ತಷ್ಟು ತನಿಖೆಯನ್ನು ಚುರುಗೊಳಿಸಿದ್ದಾರೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಬೀದರ್, ಉಡುಪಿ, ವಿಜಯಪುರ, ಯಾದಗಿರಿ, ವಿಜಯನಗರ, ರಾಯಚೂರು, ಬಾಗಲೋಟೆ, ಬೆಳಗಾವಿ, ಮಂಡ್ಯ, ಶಿವಮೊಗ್ಗ, ಗದಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ನಿಂಗಪ್ಪ ವಿರುದ್ಧ ದೂರುಗಳು ದಾಖಲಾಗಿವೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ದೂರು ಮೂಲಕ ಕರೆ ಮಾಡಿ ನಿಮ್ಮ ವಿರುದ್ಧ ದೂರು ದಾಖಲಾಗಿದ್ದು, ದಾಳಿ ಮಾಡುವ ಸಂಭವ ಇರುತ್ತದೆ ಎಂದು ಬೆದರಿಕೆ ಹಣ ವಸೂಲಿ ಮಾಡುತ್ತಿದ್ದ. ಆರೋಪಿ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚಾಗಿ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ಕಳೆದ ಆರು ತಿಂಗಳಿನಿಂದ ವಸೂಲಿ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗೆ ಯಾವ ಅಧಿಕಾರಿಗಳು ಎಷ್ಟೆಷ್ಟು ಹಣ ನೀಡಿರುತ್ತಾರೆ ಎಂಬ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ. ಆರೋಪಿಯೊಂದಿಗೆ ಬೇರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ವಾಟ್ಸ್ಪ್ ಸಂದೇಶಗಳು, ಕರೆಗಳ ವಿವರಗಳು ಮತ್ತು ವಾಟ್ಸ್ಪ್ ಕರೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಯಾವ್ಯಾವ ಪೊಲೀಸರ ಜತೆ ನಿಂಗಪ್ಪ ಸಂಪರ್ಕದಲ್ಲಿದ್ದ. ಹಣ ತಲುಪಿಸುವ ವ್ಯವಸ್ಥೆ ಹೇಗೆ ಮಾಡುತ್ತಿದ್ದ. ಇದುವರೆಗೂ ಎಷ್ಟು ಸರಕಾರಿ ಅಧಿಕಾರಿಗಳ ಸುಲಿಗೆ ಮಾಡಿದ್ದಾನೆ ಎಂಬುದರ ಪಟ್ಟಿಯನ್ನು ಲೋಕಾಯುಕ್ತ ಪೊಲೀಸರು ಸಿದ್ಧಪಡಿಸುತ್ತಿದ್ದಾರೆ.
ಐಪಿಎಸ್ ಅಧಿಕಾರಿ ನಿವಾಸದ ಮೇಲೆ ದಾಳಿ:
ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶ್ರೀನಾಥ್ ಜೋಶಿ ನಿವಾಸದ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ. ಈ ವೇಳೆ ಕೆಲವೊಂದು ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ. ದಾಳಿ ನಡೆಸಿದ ವೇಳೆ ಶ್ರೀನಾಥ್ ಜೋಶಿ ಮನೆಯಲ್ಲಿ ಇರಲಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂಬ ಅನುಮಾನವನ್ನು ಲೋಕಾಯುಕ್ತ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪ್ರಕರಣ ಬಯಲಾಗಿದ್ದು ಹೇಗೆ?
ಆರೋಗ್ಯ, ಬಿಡಿಎ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಲೋಕಾಯುಕ್ತ ದಾಳಿ, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಯಿತು. ತನಿಖೆ ಕೈಗೊಂಡ ಪೊಲೀಸರ ತಂಡವು ಪ್ರಕರಣದಲ್ಲಿಆರೋಪಿ ನಿಂಗಪ್ಪನನ್ನು ಬಂಧಿಸಿತ್ತು. ಈ ವೇಳೆ ಆರೋಪಿ ನಿಂಗಪ್ಪನನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವು ವಿಷಯಗಳು ಬಹಿರಂಗಗೊಂಡಿದ್ದು, ಲೋಕಾಯುಕ್ತ ಪೊಲೀಸರು ಸಹ ಆರೋಪಿಗೆ ಸಹಕಾರ ನೀಡುತ್ತಿರುವ ವಿಚಾರ ಬಯಲಿಗೆ ಬಂತು.
ಟ್ರೂ ಕಾಲರ್ನಲ್ಲಿ ಅಧಿಕಾರಿಗಳ ಹೆಸರು..!
ಆರೋಪಿ ನಿಂಗಪ್ಪ ತನ್ನ ಮೊಬೈಲ್ನಲ್ಲಿ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಡಿಪಿ ಇಟ್ಟಿಕೊಂಡಿದ್ದು, ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿದಾಗ ಟ್ರೂ ಕಾಲರ್ನಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಹೆಸರು ಬರುವಂತೆ ಮಾಡಿದ್ದ. ಹೀಗಾಗಿ ಸಹಜವಾಗಿ ಅಧಿಕಾರಿಗಳು ಹೆದರುತ್ತಿದ್ದರು. ತನಿಖೆ ತಂಡವು ನಿಂಗಪ್ಪನ ಮೊಬೈಲ್ ಚೆಕ್ ಮಾಡಿದಾಗ ಈ ಬಗ್ಗೆ ಮಾಹಿತಿ ಲಭ್ಯವಾಯಿತು. ಜೊತೆಗೆ ಸಾಕ್ಷ್ಯಾಧಾರಗಳುಸಹ ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿವೆ.
ಪೊಲೀಸ್ ಇಲಾಖೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದ ನಿಂಗಪ್ಪ, ಕೆಲ ವರ್ಷಗಳ ಹಿಂದೆ ಸೇವೆಯಿಂದ ವಜಾಗೊಂಡಿದ್ದ. ಸೇವೆಯಿಂದ ವಜಾಗೊಂಡ ಬಳಿಕ ಹಿರಿಯ ಅಧಿಕಾರಿಗಳ ಸಂಪರ್ಕದಲ್ಲಿದ್ದ ನಿಂಗಪ್ಪ, ಸರ್ಕಾರಿ ನೌಕರರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಸರ್ಕಾರಿ ನೌಕರರು ಹೆದರಿ ಹಣ ನೀಡುತ್ತಿದ್ದರಿಂದ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡ. ಬಳಿಕ ಇದರಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗದ ಕೆಲವು ಅಧಿಕಾರಿಗಳು ಸಹ ಭಾಗಿಯಾಗಿ ಆರೋಪಿಗೆ ಸಹಕಾರ ನೀಡುತ್ತಿದ್ದರು ಎಂದು ತಿಳಿದುಬಂದಿದೆ.