Bengaluru 2nd Airport| ಕನಕಪುರ, ನೆಲಮಂಗಲದಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ವಿರೋಧ: ಸಿದ್ದರಾಮಯ್ಯಗೆ 30 ಶಾಸಕರ ಪತ್ರ

ಶಿರಾದಲ್ಲಿ ಏರ್‌ಪೋರ್ಟ್ ಬಂದರೆ ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಅರ್ಧದಷ್ಟು ಕಡಿಮೆಯಾಗುವುದಲ್ಲದೆ, ಉತ್ತರ ಕರ್ನಾಟಕ ಮತ್ತು ಬಯಲುಸೀಮೆಗೆ ಆರ್ಥಿಕ ಪ್ರಗತಿಯ ದ್ವಾರ ತೆರೆಯಲಿದೆ ಆದರೆ ಕನಕಪುರ ಮತ್ತು ನೆಲಮಂಗಲದಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರು ಕೇಂದ್ರಿತವಾಗಿ ಮಾತ್ರ ಅಭಿವೃದ್ಧಿ ಸೀಮಿತವಾಗುತ್ತದೆ.;

Update: 2025-04-09 11:21 GMT
Click the Play button to listen to article

ಬೆಂಗಳೂರಿಗೆ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆ ಕುರಿತಾಗಿ ರಾಜಕೀಯ ಗರಿಗೆದರುತ್ತಿದೆ.

ಕನಕಪುರ ಹಾಗೂ ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಯುತ್ತಿದ್ದರೆ, ಉತ್ತರ ಕರ್ನಾಟಕ ಮತ್ತು ಬಯಲುಸೀಮೆ ಕ್ಷೇತ್ರಗಳ ಶಾಸಕರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸ್ಥಳಗಳ ಬದಲಾಗಿ ತುಮಕೂರಿನ ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಒತ್ತಾಯಿಸಿ, 30ಕ್ಕೂ ಹೆಚ್ಚು ಶಾಸಕರು ಪಕ್ಷಾತೀತವಾಗಿ ಒಗ್ಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. 

ಬೆಂಗಳೂರಿನಲ್ಲಿ ಜನಸಂಖ್ಯೆ, ಕೈಗಾರಿಕೆ ಮತ್ತು ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಟ್ರಾಫಿಕ್ ದಟ್ಟಣೆಯ ಸಮಸ್ಯೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ, ಹೊಸ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸುಗಮ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ. ಆದರೆ, ಈ ಯೋಜನೆಯ ಸ್ಥಳ ಆಯ್ಕೆಯಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ಶಿರಾ ಏಕೆ? 

ಶಿರಾ ಚೆನ್ನೈ–ಮುಂಬೈ ಹೆದ್ದಾರಿ, HAL ಸ್ತರದ ರಕ್ಷಣಾ ಸಂಸ್ಥೆಗಳು, ವಸಂತನರಸಾಪುರ ಕೈಗಾರಿಕಾ ವಸಾಹತು, ನಿರ್ಮಾಣ ಹಂತದಲ್ಲಿರುವ ಜಪಾನ್ ಟೌನ್‌ಶಿಪ್, ಅಂತಾರಾಷ್ಟ್ರೀಯ ಕ್ರೀಡಾಂಗಣ ಹಾಗೂ ನೀರಾವರಿ ಯೋಜನೆಗಳು ಈ ಪ್ರದೇಶದ ಸಾಮರ್ಥ್ಯ ಹೆಚ್ಚಿಸಿದೆ. ಇದರೊಂದಿಗೆ ತುಮಕೂರು–ರಾಯದುರ್ಗ ರೈಲು ಮಾರ್ಗ ಈ ಭಾಗದ ಸಂಪರ್ಕ ವ್ಯವಸ್ಥೆಗೆ ಬಲ ನೀಡುತ್ತದೆ.

ಶಿರಾದಲ್ಲಿ ಏರ್‌ಪೋರ್ಟ್ ಬಂದರೆ ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಅರ್ಧದಷ್ಟು ಕಡಿಮೆಯಾಗುವುದಲ್ಲದೆ, ಉತ್ತರ ಕರ್ನಾಟಕ ಮತ್ತು ಬಯಲುಸೀಮೆಗೆ ಆರ್ಥಿಕ ಪ್ರಗತಿಯ ದ್ವಾರ ತೆರೆಯಲಿದೆ ಆದರೆ ಕನಕಪುರ ಮತ್ತು ನೆಲಮಂಗಲದಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರು ಕೇಂದ್ರಿತವಾಗಿ ಮಾತ್ರ ಅಭಿವೃದ್ಧಿ ಸೀಮಿತವಾಗುತ್ತದೆ ಎಂಬುವುದು ಬಯಲುಸೀಮೆ ಮತ್ತು ಉತ್ತರ ಕರ್ನಾಟಕದ ಶಾಸಕರ ಅಭಿಪ್ರಾಯವಾಗಿದೆ.

ಸ್ವಪಕ್ಷೀಯರಿಂದಲೇ ವಿರೋಧ

ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಡಿ.ಜಿ.ಶಾಂತನಗೌಡ, ಬಿ.ಆರ್.ಪಾಟೀಲ್, ನಯನ ಮೋಟಮ್ಮ, ಬಿ.ಎಂ.ನಾಗರಾಜ, ಎಸ್.ರಾಜಪ್ಪ, ಲಕ್ಷ್ಮಣ್ ಸವದಿ, ಹಂಪನಗೌಡ ಬಾದರ್ಲಿ, ಆನಂದ್ ಕೆ.ಎಸ್. ಎಚ್.ಡಿ.ತಮ್ಮಯ್ಯ, ವಿನಯ್ ಕುಲಕರ್ಣಿ, ಸಿ.ಎಸ್.ನಾಡಗೌಡ, ಗಣೇಶ್ ಹುಕ್ಕೇರಿ, ಅಶೋಕ್ ಪಟ್ಟಣ್, ಸುರೇಶ್ ಗೌಡ ಸೇರಿದಂತೆ ಮತ್ತಿತರ ಕಾಂಗ್ರೆಸ್ ಶಾಸಕರು ಪತ್ರ ಬರೆದಿದಿದ್ದು, ಕನಕಪುರ ಇಲ್ಲವೇ ನೆಲಮಂಗಲದ ಬದಲು ಶಿರಾದಲ್ಲಿ ವಿಮಾನ ನಿಲ್ದಾಣ ಮಾಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದರಿಂದ ಬಯಲುಸೀಮೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂಬುದು ಇವರ ವಾದವಾಗಿದೆ. ಸಿರಾದಲ್ಲಿ ಚೆನ್ನೈ -ಮುಂಬೈ ಹೆದ್ದಾರಿ ಹಾದುಹೋಗಿದೆ. ಎಚ್ ಎಎಲ್ ನಂತಹ ರಕ್ಷಣಾ ಸಂಸ್ಥೆ ಇದೆ. ಅತೀದೊಡ್ಡ ವಸಂತನರಸಾಪುರ ಕೈಗಾರಿಕಾ ವಸಾಹತು ಶೀಘ್ರದಲ್ಲೇ ಜಪಾನ್ ಟೌನ್‌ ಶಿಪ್ ಕೂಡ ನಿರ್ಮಾಣವಾಗುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆಗುತ್ತಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ನೀರಾವರಿ ಸೌಲಭ್ಯ ಇದೆ. ತುಮಕೂರು-ರಾಯಮರ್ಗ ರೈಲ್ವೇ ಮಾರ್ಗ ಕೂಡ ಹಾದು ಹೋಗಲಿದೆ. ಹೀಗಿರುವಾಗ ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರಿನಲ್ಲಿ ಅರ್ಧದಷ್ಟು ಟ್ರಾಫಿಕ್ ದಟ್ಟಣೆ ಕಡಿಮೆಯಾಗಲಿದೆ ಎಂಬುವುದು ವಾದವಾಗಿದೆ.

ತಜ್ಞರ ಸಮಿತಿ ತೀರ್ಮಾನ ಅಂತಿಮ:

ಈ ನಿಟ್ಟಿನಲ್ಲಿ ತಜ್ಞರ ಸಮಿತಿ ನೀಡುವ ತೀರ್ಮಾನವೇ ಅಂತಿಮವಾಗಿದೆ. ತಜ್ಞರ ಸಮಿತಿ ಪ್ರಸ್ತಾವಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕನಕಪುರ ರಸ್ತೆ ಎರಡು ತಾಣವನ್ನು ತಜ್ಞರ ತಂಡ ವೀಕ್ಷಣೆ ಮಾಡಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಅಗತ್ಯವಿರುವ ವಾತಾವರಣ, ಸೌಲಭ್ಯಗಳನ್ನು ಆಧರಿಸಿಕೊಂಡು ನಿರ್ಧಾರ ಕೈಗೊಳ್ಳಲಿದೆ. ಹೀಗಿದ್ದರೂ ಕನಕಪುರ, ನೆಲಮಂಗಲ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರ ಗೊಂದಲ ಉಂಟು ಮಾಡುವ ಸಾಧ್ಯತೆಯಿದ್ದು, ರಾಜ್ಯದ ಯಾವ ಭಾಗದಲ್ಲಿ ಏ‌ರ್ ಪೋರ್ ನಿರ್ಮಾಣ ಮಾಡುವುದು ಉತ್ತಮ ಎಂಬುದರ ಬಗ್ಗೆ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವುದು ಸುಲಭದ ವಿಚಾರವಾಗಿ ಉಳಿದಿಲ್ಲ. ಸರ್ಕಾರ ಅಂತಿಮವಾಗಿ ಯಾವ ನಿರ್ಣಯ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ನಗರದಲ್ಲಿ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರಕಾರ ಗುರುತಿಸಿರುವ ಮೂರು ಸ್ಥಳಗಳ ಪೈಕಿ ಕನಕಪುರ ರಸ್ತೆಯಲ್ಲಿರುವ ಎರಡು ತಾಣಗಳ ಪರಿಶೀಲನೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ನಿನ್ನೆ ನಡೆಸಿತ್ತು. ನಂತರ ತಂಡದ ಸದಸ್ಯರು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿ ವಿಚಾರ ವಿನಿಮಯ ಮಾಡಿದ್ದರು.

ಈ ಸಂದರ್ಭದಲ್ಲಿ ಸಚಿವರು ಕೂಡ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿ, ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅತ್ಯಂತ ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ತಂಡಕ್ಕೆ ಸಲಹೆ ನೀಡಿದ್ದರು.

ಬುಧವಾರ ಈ ತಂಡ ನೆಲಮಂಗಲ – ಕುಣಿಗಲ್ ರಸ್ತೆಯ ಸ್ಥಳ ಪರಿಶೀಲನೆ ನಡೆಸಲಿದೆ. ಉದ್ದೇಶಿತ ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಸ್ಥಳ ಪರಿಶೀಲನೆಯ ಬಳಿಕ ಪ್ರಾಧಿಕಾರದ ಅಭಿಪ್ರಾಯ ಏನೆಂಬುದನ್ನು ತಿಳಿದುಕೊಂಡು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ರಾಧಿಕಾರದ ತಂಡದಲ್ಲಿ ಜನರಲ್ ಮ್ಯಾನೇಜರ್ ವಿಕ್ರಮ್ ಸಿಂಗ್, ಜಂಟಿ ಜನರಲ್ ಮ್ಯಾನೇಜರ್ ಕೆ.ಶ್ರೀನಿವಾಸರಾವ್, ಸಹಾಯಕ ಜನರಲ್ ಮ್ಯಾನೇಜರ್ ಮನುಜ್ ಭಾರದ್ವಾಜ್, ಪ್ರಧಾನ ಕಚೇರಿಯ ಅಧಿಕಾರಿಗಳಾದ ಸಚ್ಚಿದಾನಂದ್, ಸಂತೋಷಕುಮಾರ್ ಭಾರತಿ, ಅಮನ್ ಚಿಪಾ ಇದ್ದರು.

ಸರಕಾರದ ಪರವಾಗಿ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹೆಚ್ಚುವರಿ ಕಾರ್ಯದರ್ಶಿ ಹೆನ್ಸಿಬಾ ರಾಣಿ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಖುಷ್ಟೂ ಗೋಯಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಹಾಜರಿದ್ದರು.

 

Tags:    

Similar News