ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ಥಾಯ್ಲೆಂಡ್ನಲ್ಲಿ ತುರ್ತು ಭೂಸ್ಪರ್ಶ
ಗುರುವಾರ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನವೊಂದು ಅಪಘಾತಕ್ಕೀಡಾಗಿ 241 ಜನರು ಮೃತಪಟ್ಟ ಘಟನೆಯ ಬೆನ್ನಲ್ಲೇ ಈ ಬಾಂಬ್ ಬೆದರಿಕೆ ಘಟನೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.;
ಥಾಯ್ಲೆಂಡ್ ರಾಜಧಾನಿ ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 379, ಶುಕ್ರವಾರ (ಜೂನ್ 13) ಬಾಂಬ್ ಬೆದರಿಕೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ 156 ಪ್ರಯಾಣಿಕರನ್ನು ತುರ್ತು ಯೋಜನೆಯಂತೆ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಥಾಯ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವಿಮಾನವು ಶುಕ್ರವಾರ ಬೆಳಿಗ್ಗೆ 9:30 ಕ್ಕೆ (GMT 02:30) ಫುಕೆಟ್ ವಿಮಾನ ನಿಲ್ದಾಣದಿಂದ ಭಾರತದ ರಾಜಧಾನಿಗೆ ಹೊರಟಿತ್ತು. ಆದರೆ, 'ಫ್ಲೈಟ್ರಾಡಾರ್24' ಮಾಹಿತಿ ಪ್ರಕಾರ, ವಿಮಾನವು ಅಂಡಮಾನ್ ದ್ವೀಪದ ಸಮುದ್ರದ ಸುತ್ತಲೂ ದೊಡ್ಡ ವೃತ್ತಾಕಾರದಲ್ಲಿ ಸುತ್ತಿ, ದಕ್ಷಿಣ ಥಾಯ್ಲೆಂಡ್ ದ್ವೀಪಕ್ಕೆ ಮರಳಿತು. ವಿಮಾನದ ಶೌಚಾಲಯದ ಗೋಡೆಯ ಮೇಲೆ ಬಾಂಬ್ ಬೆದರಿಕೆಯ ಸಂದೇಶ ಕಂಡುಬಂದಿದೆ ಎಂದು ಆರೋಪಿಸಲಾಗಿದೆ.
ಬಾಂಬ್ ಪತ್ತೆಯಾಗಿಲ್ಲ, ತನಿಖೆ ಚುರುಕು
"ಪ್ರಾಥಮಿಕ ತಪಾಸಣೆಯ ನಂತರ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ಬಾಂಬ್ ಕಂಡುಬಂದಿಲ್ಲ" ಎಂದು ಥಾಯ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ತಿಳಿಸಿದೆ. ಥಾಯ್ಲೆಂಡ್ ವಿಮಾನ ನಿಲ್ದಾಣಗಳ ಪ್ರಾಧಿಕಾರ (AOT) ಬಾಂಬ್ ಬೆದರಿಕೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಅಲ್ಲದೆ, ಏರ್ ಇಂಡಿಯಾ ಕೂಡ ಈ ಬಗ್ಗೆ ತಕ್ಷಣದ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುರುವಾರ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನವೊಂದು ಅಪಘಾತಕ್ಕೀಡಾಗಿ 241 ಜನರು ಮೃತಪಟ್ಟ ಘಟನೆಯ ಬೆನ್ನಲ್ಲೇ ಈ ಬಾಂಬ್ ಬೆದರಿಕೆ ಘಟನೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ವಿಮಾನಯಾನ ಸಂಸ್ಥೆಗಳು ಮತ್ತು ಭದ್ರತಾ ಏಜೆನ್ಸಿಗಳು ಸೂಕ್ಷ್ಮ ಪರಿಸ್ಥಿತಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುತ್ತಿವೆ.