
ಗೃಹ ಕಾರ್ಮಿಕರ ಬದುಕಿಗೆ ಭದ್ರತೆ: ದೇಶದಲ್ಲೇ ಮೊದಲ ಬಾರಿಗೆ ಕಾಯ್ದೆ ಜಾರಿಗೆ ಕರ್ನಾಟಕ ಸಜ್ಜು
ಭಾರತದಲ್ಲಿ ಗೃಹ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ನಿರ್ದಿಷ್ಟವಾದ ಮತ್ತು ಸಮಗ್ರವಾದ ಕಾನೂನು ಚೌಕಟ್ಟು ಇಲ್ಲದಿರುವುದು ದೀರ್ಘಕಾಲದ ಕೊರತೆಯಾಗಿದೆ.
ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಲಕ್ಷಾಂತರ ಗೃಹ ಕಾರ್ಮಿಕರ (ಮನೆ ಕೆಲಸದವರು) ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ವಿಮೆ ಮತ್ತು ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವ ನೂತನ ಕಾಯ್ದೆಯೊಂದನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕ್ರಾಂತಿಕಾರಿ ಕಾಯ್ದೆಯು ದೇಶದಲ್ಲೇ ಮೊದಲು ಎನ್ನಲಾಗಿದೆ.
ನಾಳೆ (ಶುಕ್ರವಾರ ) ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನೂತನ ಕಾಯ್ದೆಯ ಕರಡು ಪ್ರಸ್ತಾವನೆಯ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಯಲಿದೆ. ಕಾರ್ಮಿಕ ಸಚಿವಾಲಯ ಸಿದ್ಧಪಡಿಸಿರುವ ಈ ಪ್ರಸ್ತಾವನೆಗೆ ಸಂಪುಟದ ಅನುಮೋದನೆ ದೊರೆತರೆ, ಶೀಘ್ರದಲ್ಲೇ ಇದು ಕಾನೂನಾಗಿ ರೂಪುಗೊಳ್ಳಲಿದೆ.
ನೂತನ ಕಾಯ್ದೆಯ ಪ್ರಮುಖ ಅಂಶಗಳೇನು?
ಮನೆ ಕೆಲಸ ಮಾಡುವವರನ್ನು ಇದುವರೆಗೂ ಕಾರ್ಮಿಕರ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಪರಿಗಣಿಸಿರಲಿಲ್ಲ. ಆದರೆ, ಹೊಸ ಕಾಯ್ದೆಯು ಇವರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಿದೆ: ನಿವೃತ್ತಿ ನಂತರದ ಬದುಕು ಅಥವಾ ಅನಿರೀಕ್ಷಿತ ಸಂಕಷ್ಟದ ಸಮಯದಲ್ಲಿ ನೆರವಾಗಲು ಭವಿಷ್ಯ ನಿಧಿ ಅಥವಾ ಪಿಂಚಣಿಯಂತಹ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಇವರನ್ನು ತರುವುದು. ಗೃಹ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುವ ಆರೋಗ್ಯ ವಿಮೆ ಯೋಜನೆ. ಕೆಲಸದ ವೇಳೆ ಸಂಭವಿಸುವ ಅಪಘಾತ ಅಥವಾ ಸಾವು-ನೋವುಗಳಿಗೆ ಪರಿಹಾರ ಒದಗಿಸುವ ಅಪಘಾತ ವಿಮೆ. ವೇತನ, ಕೆಲಸದ ಅವಧಿ ಮತ್ತು ರಜೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರಚಿಸುವ ಸಾಧ್ಯತೆಯಿದೆ.
ದೇಶಕ್ಕೆ ಮಾದರಿ
ಭಾರತದಲ್ಲಿ ಗೃಹ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ನಿರ್ದಿಷ್ಟವಾದ ಮತ್ತು ಸಮಗ್ರವಾದ ಕಾನೂನು ಚೌಕಟ್ಟು ಇಲ್ಲದಿರುವುದು ದೀರ್ಘಕಾಲದ ಕೊರತೆಯಾಗಿತ್ತು. ಇದೀಗ ಕರ್ನಾಟಕ ಸರ್ಕಾರ ಇಂತಹದೊಂದು ಕಾಯ್ದೆಯನ್ನು ಜಾರಿಗೆ ತರುವ ಮೂಲಕ ದೇಶದಲ್ಲೇ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಇತರ ರಾಜ್ಯಗಳಿಗೂ ಮಾದರಿಯಾಗಲಿದೆ.

