Citizenship verification by holding a mobile phone on your back - is such a technology available in India?
x

ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಬೆನ್ನಿಗೆ ಮೊಬೈಲ್‌ ಹಿಡಿದು ಪೌರತ್ವ ಪರಿಶೀಲನೆ- ಇಂತಹ ತಂತ್ರಜ್ಞಾನ ಭಾರತದಲ್ಲಿ ಇದ್ಯಾ?

ಮನುಷ್ಯರನ್ನೇ ಬಾರ್‌ಕೋಡ್ ನಂತೆ ಸ್ಕ್ಯಾನ್ ಮಾಡುತ್ತ ಬಾಂಗ್ಲಾದೇಶಿ ಎಂದು ಬೆದರಿಸಿದ ಉತ್ತರ ಪ್ರದೇಶದ ಪೊಲೀಸರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಮತ್ತು ಲೇವಡಿ ವ್ಯಕ್ತವಾಗಿದೆ.


Click the Play button to hear this message in audio format

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪೌರತ್ವ ಪರಿಶೀಲನೆ ನೆಪದಲ್ಲಿ ವ್ಯಕ್ತಿಯೊಬ್ಬರ ಬೆನ್ನಿಗೆ ಮೊಬೈಲ್ ಫೋನ್ ಸ್ಪರ್ಶಿಸಿ, ಸೂಪರ್‌ ಮಾರ್ಕೆಟ್‌ನ ಬಾರ್‌ಕೋಡ್ ನಂತೆ "ಸ್ಕ್ಯಾನ್" ಮಾಡುತ್ತಿರುವ ಪೊಲೀಸರ ವಿಡಿಯೊ ವೈರಲ್ ಆಗಿದೆ. ಈ ವಿಲಕ್ಷಣ ಕೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ಯುಪಿ ಪೊಲೀಸರ ವಿರುದ್ಧ ತೀವ್ರ ಟೀಕೆ ಮತ್ತು ಲೇವಡಿಗೆ ಕಾರಣವಾಗಿದೆ.

ದೆಹಲಿ ಸಮೀಪದ ಗಾಜಿಯಾಬಾದ್‌ನಲ್ಲಿ ನಡೆದ ಪೌರತ್ವ ಪರಿಶೀಲನಾ ಅಭಿಯಾನದ ವೇಳೆ ಈ ದೃಶ್ಯಗಳು ಕಂಡುಬಂದಿವೆ. ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮೊಬೈಲ್ ಫೋನ್ ಅನ್ನು ವ್ಯಕ್ತಿಯ ಬೆನ್ನಿನ ಹತ್ತಿರ ಹಿಡಿದು ಪರೀಕ್ಷಿಸುತ್ತಿರುವುದು ವಿಡಿಯೊದಲ್ಲಿದೆ. ಇದನ್ನು ಕಂಡ ನೆಟ್ಟಿಗರು, "ಇದು ಯಾವ ತಂತ್ರಜ್ಞಾನ?" ಎಂದು ಪ್ರಶ್ನಿಸಿದ್ದಲ್ಲದೆ, ಈ ಘಟನೆ ಅವೈಜ್ಞಾನಿಕ ಮತ್ತು ಅವಮಾನಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಪಿ ಪೊಲೀಸರು ಈ ಬಗ್ಗೆ ಅಧಿಕೃತ ವಿವರಣೆ ನೀಡಬೇಕೆಂದು ಹಲವರು ಒತ್ತಾಯಿಸಿದ್ದಾರೆ.

ಈ ಕುರಿತು ಎನ್‌ಡಿಟಿವಿ (NDTV) ಜೊತೆ ಮಾತನಾಡಿದ ಸಂತ್ರಸ್ತ ವ್ಯಕ್ತಿಯ ಸಂಬಂಧಿ ರೋಷ್ನಿ ಖಾತುನ್, ಘಟನೆಯ ವಿವರ ನೀಡಿದ್ದಾರೆ. ಡಿಸೆಂಬರ್ 23 ರಂದು ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್ (SHO) ನೇತೃತ್ವದ ಪೊಲೀಸ್ ತಂಡವು ಅವರ ಪ್ರದೇಶಕ್ಕೆ ಭೇಟಿ ನೀಡಿತ್ತು. ಬಂಧಿತರನ್ನು ಕರೆದೊಯ್ಯುವ ವಾಹನದೊಂದಿಗೆ ಬಂದಿದ್ದ ಪೊಲೀಸರು, ಅಲ್ಲಿನ ನಿವಾಸಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.

ಬೆನ್ನಿಗೆ ಮೊಬೈಲ್‌ ಹಿಡಿದು ಬಾಂಗ್ಲಾದೇಶಿ ಎಂದ ಪೊಲೀಸ್‌

ವಿಡಿಯೋದಲ್ಲಿ ಕಂಡುಬರುವಂತೆ, ಕೌಶಂಬಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಜಯ್ ಶರ್ಮಾ ಅವರು ವ್ಯಕ್ತಿಯ ಬೆನ್ನಿಗೆ ಮೊಬೈಲ್ ಹಚ್ಚಿ, "ಈ ಯಂತ್ರವು ನೀನು ಬಾಂಗ್ಲಾದೇಶಿ ಎಂದು ತೋರಿಸುತ್ತಿದೆ" ಎಂದು ಹೇಳಿರುವುದು ಕೇಳಿಸುತ್ತದೆ. ಆದರೆ, ಸಂತ್ರಸ್ತರು ತಾವು ಬಿಹಾರದ ಅರಾರಿಯಾ ಜಿಲ್ಲೆಯ ನಿವಾಸಿಗಳೆಂದು ಪ್ರತಿಪಾದಿಸಿದರೂ ಪೊಲೀಸರು ಈ ರೀತಿಯ ವಿಲಕ್ಷಣ ಪರೀಕ್ಷೆ ನಡೆಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಪ್ರತಿಕ್ರಿಯಿಸಿದ್ದು, "ಇದು ಯಾವುದೇ ತಾಂತ್ರಿಕ ಅಥವಾ ವೈಜ್ಞಾನಿಕ ತನಿಖೆಯಲ್ಲ, ಬದಲಿಗೆ ವಿಚಾರಣೆಯ ಸಮಯದಲ್ಲಿ ಸತ್ಯವನ್ನು ಹೊರತೆಗೆಯಲು ಪೊಲೀಸರು ಬಳಸುವ ಒಂದು ಸಾಮಾನ್ಯ ತಂತ್ರವಷ್ಟೇ" ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ, ಈ ಘಟನೆಯು ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

Read More
Next Story