
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್ ಭವಿಷ್ಯ ಇಂದು ನಿರ್ಧಾರ!
2020ರ ದೆಹಲಿ ಗಲಭೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು (ಜನವರಿ 5) ತೀರ್ಪು ನೀಡಲಿದೆ.
ಫೆಬ್ರವರಿ 2020ರ ದೆಹಲಿ ಗಲಭೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರರು ಸಲ್ಲಿಸಿರುವ ಜಾಮೀನು ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು (ಸೋಮವಾರ) ತನ್ನ ತೀರ್ಪನ್ನು ಪ್ರಕಟಿಸಲಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪನ್ನು ನೀಡಲಿದೆ. ದೆಹಲಿ ಪೊಲೀಸರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿದ್ದರು. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ ಮತ್ತು ಸಲ್ಮಾನ್ ಖುರ್ಷಿದ್ ಅವರು ವಾದ ಮಂಡಿಸಿದ ನಂತರ, ಡಿಸೆಂಬರ್ 10 ರಂದು ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ದೆಹಲಿ ಪೊಲೀಸರ ವಾದ
ಜಾಮೀನು ನೀಡುವುದನ್ನು ಬಲವಾಗಿ ವಿರೋಧಿಸಿರುವ ದೆಹಲಿ ಪೊಲೀಸರು ಈ ಘಟನೆಯನ್ನು ಪೂರ್ವನಿಯೋಜಿತ ಸಂಚು ಎಂದಿದ್ದಾರೆ. 2020ರ ಗಲಭೆಗಳು ಆಕಸ್ಮಿಕವಲ್ಲ, ಬದಲಿಗೆ ಭಾರತದ ಸಾರ್ವಭೌಮತ್ವದ ಮೇಲೆ ನಡೆಸಿದ "ಪೂರ್ವಯೋಜಿತ ಮತ್ತು ವ್ಯವಸ್ಥಿತ" ದಾಳಿಯಾಗಿದೆ.
ಸಂಚಿನಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಪರಸ್ಪರರ ಕೃತ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಶರ್ಜೀಲ್ ಇಮಾಮ್ ನೀಡಿದ ಭಾಷಣಗಳನ್ನು ಉಮರ್ ಖಾಲಿದ್ಗೆ ಅನ್ವಯಿಸಬಹುದು ಮತ್ತು ಇದನ್ನು ಸಾಕ್ಷ್ಯವಾಗಿ ಬಳಸಬಹುದು. ಗಲಭೆ ನಡೆದ ಸಮಯದಲ್ಲಿ ಉಮರ್ ಖಾಲಿದ್ ಉದ್ದೇಶಪೂರ್ವಕವಾಗಿ ದೆಹಲಿಯಿಂದ ಹೊರಗಿದ್ದರು, ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಾಗಿತ್ತು ಎಂದು ಪೊಲೀಸರು ವಾದಿಸಿದ್ದಾರೆ.
ಆರೋಪಿಗಳ ವಾದ
• ವಿಚಾರಣೆ ಇಲ್ಲದ ಬಂಧನ: ಯಾವುದೇ ಶಿಕ್ಷೆ ಅಥವಾ ಪೂರ್ಣ ಪ್ರಮಾಣದ ವಿಚಾರಣೆ ಇಲ್ಲದೆ ತಮ್ಮನ್ನು "ಭಯೋತ್ಪಾದಕರು" ಎಂದು ಹಣೆಪಟ್ಟಿ ಹಚ್ಚಿರುವುದಕ್ಕೆ ಶರ್ಜೀಲ್ ಇಮಾಮ್ ಆತಂಕ ವ್ಯಕ್ತಪಡಿಸಿದ್ದಾರೆ.
• ಭಾಷಣ ಮತ್ತು ಹಿಂಸಾಚಾರ: ಇಮಾಮ್ ಅವರನ್ನು ಗಲಭೆಗೂ ಮೊದಲೇ (ಜನವರಿ 28, 2020) ಬಂಧಿಸಲಾಗಿತ್ತು. ಕೇವಲ ಭಾಷಣಗಳನ್ನು "ಕ್ರಿಮಿನಲ್ ಪಿತೂರಿ" ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದಾರೆ.
• ಬಂಧನದ ಅವಧಿ: ವಿಚಾರಣೆ ಇಲ್ಲದೆ ಐದು ವರ್ಷಗಳಿಂದ ಜೈಲಿನಲ್ಲಿರುವುದು ಗಣರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಆರೋಪಿಗಳ ಪರ ವಕೀಲರು ಪ್ರತಿಪಾದಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಫಾತಿಮಾ, ಮೀರನ್ ಹೈದರ್ ಮತ್ತು ಶಿಫಾ ಉರ್ ರೆಹಮಾನ್ ಅವರ ಮೇಲೆ ಕಠಿಣವಾದ 'ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಈ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 2 ರಂದು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

