Congress organisation needs more discipline and unity; Shashi Tharoor supports Digvijaya Singh
x

ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಹಾಗೂ ಸಂಸದ ಶಶಿ ತರೂರ್‌

ಕಾಂಗ್ರೆಸ್ ಸಂಘಟನೆಗೆ ಬೇಕಿದೆ ಹೆಚ್ಚಿನ ಶಿಸ್ತು ಮತ್ತು ಒಗ್ಗಟ್ಟು; ದಿಗ್ವಿಜಯ ಸಿಂಗ್​ ಬೆಂಬಲಕ್ಕೆ ನಿಂತ ಶಶಿ ತರೂರ್

"ನಮ್ಮ ಪಕ್ಷದ ಸಂಘಟನೆಯೂ ಬಲಿಷ್ಠವಾಗಬೇಕೆಂದು ನಾನು ಬಯಸುತ್ತೇನೆ. ಸಂಘಟನೆಯಲ್ಲಿ ಶಿಸ್ತು ಇರುವುದು ಅತ್ಯಗತ್ಯ" ಎಂದು ಸಂಸದ ಶಶಿ ತರೂರ್‌ ಅಭಿಪ್ರಾಯಪಟ್ಟರು.


Click the Play button to hear this message in audio format

ಕಾಂಗ್ರೆಸ್ ಪಕ್ಷವು ಸಂಘಟನಾತ್ಮಕವಾಗಿ ಮತ್ತಷ್ಟು ಬಲಗೊಳ್ಳಬೇಕಿದೆ ಹಾಗೂ ಪಕ್ಷದೊಳಗೆ ಹೆಚ್ಚಿನ ಶಿಸ್ತು ಮತ್ತು ಒಗ್ಗಟ್ಟಿನ ಅಗತ್ಯವಿದೆ ಎಂದು ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಭಾನುವಾರ (ಡಿ. 28) ತಿಳಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಂಘಟನಾ ಶಕ್ತಿಯನ್ನು ಶ್ಲಾಘಿಸುವ ಮೂಲಕ ಸುದ್ದಿಯಾಗಿದ್ದ ದಿಗ್ವಿಜಯ ಸಿಂಗ್ ಅವರ ಹೇಳಿಕೆಗೆ ಪೂರಕವಾಗಿ ತರೂರ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಮ್ಮ ಪಕ್ಷದ ಸಂಘಟನೆಯೂ ಬಲಿಷ್ಠವಾಗಬೇಕೆಂದು ನಾನು ಬಯಸುತ್ತೇನೆ. ಸಂಘಟನೆಯಲ್ಲಿ ಶಿಸ್ತು ಇರುವುದು ಅತ್ಯಗತ್ಯ" ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆಯಂದೇ ಹಿರಿಯ ನಾಯಕರು ಪಕ್ಷದ ಆಂತರಿಕ ಸುಧಾರಣೆಯ ಬಗ್ಗೆ ಧ್ವನಿ ಎತ್ತಿರುವುದು ಹೈಕಮಾಂಡ್‌ಗೆ ಕೊಂಚ ಇಕ್ಕಟ್ಟು ತಂದಿದೆ.

ವಿವಾದಕ್ಕೆ ಕಾರಣವಾಗಿದ್ದ ದಿಗ್ವಿಜಯ ಸಿಂಗ್ ಪೋಸ್ಟ್

ಶನಿವಾರ (ಡಿ. 27) ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಡುವೆಯೇ ದಿಗ್ವಿಜಯ ಸಿಂಗ್ ಅವರು ಹಳೆಯ ಕಪ್ಪು-ಬಿಳುಪು ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ವಿವಾದ ಕಿಡಿ ಹಚ್ಚಿದ್ದರು. ಆ ಫೋಟೋದಲ್ಲಿ ಯುವ ನರೇಂದ್ರ ಮೋದಿಯವರು ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಪಾದದ ಬಳಿ ಕುಳಿತಿದ್ದರು.

ಈ ಫೋಟೋವನ್ನು "ಅತ್ಯಂತ ಪ್ರಭಾವಶಾಲಿ" ಎಂದು ಕರೆದಿದ್ದ ಸಿಂಗ್, ಸಂಘಟನೆಯ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ಸಾಮಾನ್ಯ ಆರ್‌ಎಸ್‌ಎಸ್ ಸ್ವಯಂಸೇವಕನಾಗಿ ನಾಯಕರ ಪಾದದ ಬಳಿ ಕುಳಿತುಕೊಳ್ಳುತ್ತಿದ್ದ ಕಾರ್ಯಕರ್ತ (ಮೋದಿ), ನಂತರ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಿಯಾಗಿ ಬೆಳೆದದ್ದು ಸಂಘಟನಾ ಶಕ್ತಿಗೆ ಸಾಕ್ಷಿ" ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರನ್ನು ಟ್ಯಾಗ್ ಮಾಡಿದ್ದ ಸಿಂಗ್, ಪಕ್ಷದಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಆಂತರಿಕ ಸುಧಾರಣೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದರು.

ಪಕ್ಷದೊಳಗೆ ಭಿನ್ನ ಪ್ರತಿಕ್ರಿಯೆ

ದಿಗ್ವಿಜಯ ಸಿಂಗ್ ಮತ್ತು ಶಶಿ ತರೂರ್ ಅವರ ಹೇಳಿಕೆಗಳಿಗೆ ಕಾಂಗ್ರೆಸ್‌ನ ಇತರ ನಾಯಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜಸ್ಥಾನದ ನಾಯಕ ಸಚಿನ್ ಪೈಲಟ್ ಅವರು "ಪಕ್ಷವು ಒಗ್ಗಟ್ಟಾಗಿದೆ, ಆದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ" ಎಂದು ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ.

ಹಿರಿಯ ನಾಯಕ ಪವನ್ ಖೇರಾ ಅವರು ಈ ಅಭಿಪ್ರಾಯವನ್ನು ಬಲವಾಗಿ ತಳ್ಳಿಹಾಕಿದ್ದಾರೆ. "ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯ ವಿಚಾರಧಾರೆಯುಳ್ಳ ಆರ್‌ಎಸ್‌ಎಸ್‌ನಂತಹ ಸಂಸ್ಥೆಗಳಿಂದ ಕಾಂಗ್ರೆಸ್ ಪಾಠ ಕಲಿಯುವ ಅಗತ್ಯವಿಲ್ಲ" ಎಂದು ಅವರು ಗುಡುಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಶಿ ತರೂರ್ ಅವರು ಪ್ರಧಾನಿ ಮೋದಿಯವರ ಕೆಲಸಗಳನ್ನು ಆಗಾಗ್ಗೆ ಶ್ಲಾಘಿಸುತ್ತಿರುವುದು ಪಕ್ಷದೊಳಗೆ ಈಗಾಗಲೇ ಅಸಮಾಧಾನಕ್ಕೆ ಕಾರಣವಾಗಿತ್ತು, ಈಗ ಸಿಂಗ್ ಅವರ ಬೆನ್ನಿಗೆ ನಿಂತಿರುವುದು ಆ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

Read More
Next Story