Operation Sindoor | ಸಶಸ್ತ್ರ ಪಡೆಗಳ ಶೌರ್ಯಕ್ಕೆ ನನ್ನ ಸಲಾಂ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
x

Operation Sindoor | ಸಶಸ್ತ್ರ ಪಡೆಗಳ ಶೌರ್ಯಕ್ಕೆ ನನ್ನ ಸಲಾಂ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. 'ಆಪರೇಷನ್ ಸಿಂದೂರ್' ಆರಂಭವಾದ ನಂತರ ಪ್ರಧಾನಿಯವರ ಇದು ಮೊದಲ ಭಾಷಣವಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ನೆಲ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿಗಳು ಮತ್ತು ಸೈನಿಕ ಕಾರ್ಯಾಚರಣೆಗಳನ್ನು ತಕ್ಷಣದಿಂದ ನಿಲ್ಲಿಸಲು ಒಪ್ಪಂದಕ್ಕೆ ತಲುಪಿದ ಎರಡು ದಿನಗಳ ನಂತರ ಈ ಭಾಷಣ ಮಾಡಿದ್ದಾರೆ. ಇತ್ತೀಚೆಗೆ ನಡೆದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ಸಂದರ್ಭದಲ್ಲಿ ದೇಶದ ರಕ್ಷಣಾ ಪಡೆಗಳು ತೋರಿದ ಶೌರ್ಯ ಮತ್ತು ಬದ್ಧತೆಯನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಕೊಂಡಾಡಿದರು. ಸಶಸ್ತ್ರ ಪಡೆಗಳ ಶೌರ್ಯಕ್ಕೆ ಅವರು ಸಲಾಂ ಹೇಳಿದರು.

ಈ ಮೊದಲು, ಭಾರತವು ತನ್ನ ಎಲ್ಲಾ ಮಿಲಿಟರಿ ನೆಲೆಗಳು ಮತ್ತು ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರತವಾಗಿವೆ ಮತ್ತು ಅಗತ್ಯವಿದ್ದರೆ ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಿದ್ಧವಾಗಿವೆ ಎಂದು ಹೇಳಿಕೆ ನೀಡಿತ್ತು. ಪ್ರಧಾನಿಯವರ ಭಾಷಣವು ದೇಶದ ಭದ್ರತಾ ಸ್ಥಿತಿ ಮತ್ತು ಸಶಸ್ತ್ರ ಪಡೆಗಳ ಸನ್ನದ್ಧತೆಯ ಬಗ್ಗೆ ದೇಶವಾಸಿಗಳಿಗೆ ಮಾಹಿತಿ ನೀಡುವ ಉದ್ದೇಶ ಹೊಂದಿತ್ತು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22 ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಮೇ 7 ರಂದು ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿ ನಡೆಸಿ, ನಾಶಪಡಿಸಿತ್ತು.

ಭಾರತದ ಈ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ, ರಾಜಸ್ತಾನ, ಪಂಜಾಬ್‌ ಗಡಿಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿತ್ತು. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್‌ ಗಳನ್ನು ಹೊಡೆದು ಹಾಕಿತ್ತು. ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತಿದಾಳಿ ನಡೆಸಿದ್ದ ಭಾರತೀಯ ಸೇನೆ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಪಾಕಿಸ್ತಾನದ ಒಟ್ಟು 9 ವಾಯುನೆಲೆಗಳಿಗೆ ಹಾನಿಯಾಗಿತ್ತು.

ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕೂಡಲೇ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಅಲ್ಲದೇ ಮೇ 12 ರಂದು ಎರಡೂ ದೇಶಗಳ ಡಿಜಿಎಂಒ ಮಟ್ಟದ ಮಾತುಕತೆ ನಡೆಯಲಿದೆ ಎಂದು ಹೇಳಿದ್ದರು.

ಕದನ ವಿರಾಮ ಘೋಷಣೆ ನಂತರವೂ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಒನ್ನೊಮ್ಮೆ ಕದನ ವಿರಾಮ ಉಲ್ಲಂಘಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಭಾರತ ಎಚ್ಚರಿಕೆ ನೀಡಿದ ಕೂಡಲೇ ಗುಂಡಿನ ದಾಳಿ ನಿಲ್ಲಿಸಿತ್ತು. ಸದ್ಯ ಜಮ್ಮು ಕಾಶ್ಮೀರ ಹಾಗೂ ಇತರೆ ರಾಜ್ಯಗಳ ಗಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

ಉಗ್ರರ ಹಸ್ತಾಂತರಕ್ಕೆ ಪಟ್ಟು

ಪಹಲ್ಗಾಮ್‌ ದಾಳಿಗೆ ಕಾರಣರಾದ ಉಗ್ರರನ್ನು ಹಸ್ತಾಂತರ ಮಾಡುವಂತೆ ಭಾರತವು ಡಿಜಿಎಂಒ ಮಾತುಕತೆ ವೇಳೆ ಪಟ್ಟು ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ನೆಲೆದಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದನೆ, ಪ್ರೋತ್ಸಾಹ ನೀಡಬಾರದು. ಈ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಕದನ ವಿರಾಮ ಪಾಲಿಸಲಿದೆ ಎಂದು ಹೇಳಲಾಗಿದೆ.

Live Updates

  • 12 May 2025 8:12 PM IST

    ಸಶಸ್ತ್ರ ಪಡೆಗಳ ಶೌರ್ಯಕ್ಕೆ ನನ್ನ ಸಲಾಂ ಮೋದಿ ಭಾಷಣ

    ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಪರಾಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಲಾಂ ಹೇಳಿದ್ದಾರೆ. ಮಿಲಿಟರಿ ಸಂಘರ್ಷದ ಬಳಿಕ ಮೊದಲ ಬಾರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ದೇಶದ ರಕ್ಷಣೆಗಾಗಿ ಸದಾ ಸಿದ್ಧವಾಗಿರುವ ಯೋಧರ ಬದ್ಧತೆ ಮತ್ತು ತ್ಯಾಗವನ್ನು ಅವರು ಶ್ಲಾಘಿಸಿದ್ದಾರೆ.

    ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನತೆ ಮತ್ತು 'ಆಪರೇಷನ್ ಸಿಂದೂರ್'ನಂತಹ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಮಹತ್ವ ಪಡೆದಿದೆ. ದೇಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮತ್ತು ಯಾವುದೇ ಸವಾಲನ್ನು ಎದುರಿಸುವಲ್ಲಿ ಸಶಸ್ತ್ರ ಪಡೆಗಳ ಪಾತ್ರ ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಯೋಧರ ಈ ಕೆಚ್ಚೆದೆಯ ಕಾರ್ಯಕ್ಕೆ ಇಡೀ ದೇಶವು ಕೃತಜ್ಞವಾಗಿದೆ ಎಂದು ಪ್ರಧಾನಿ ತಿಳಿಸಿದರು.

  • 12 May 2025 5:02 PM IST

    ಪೂಂಚ್ ಪಟ್ಟಣದ ಸುಮಾರು 90% ಖಾಲಿ, ನಿವಾಸಿಗಳು ಈಗ ಹಿಂತಿರುಗಬಹುದು: ಒಮರ್ ಅಬ್ದುಲ್ಲಾ

    ಪಾಕಿಸ್ತಾನಿ ಸೇನೆಯ ಭಾರೀ ಶೆಲ್ ದಾಳಿಯಿಂದಾಗಿ ಪೂಂಚ್ ಪಟ್ಟಣದ ಸುಮಾರು 90% ಖಾಲಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ. ಸದ್ಯ ಕದಮ ವಿರಾಮ ಇರುವುದರಿಂದ ಯುದ್ಧ ಪೀಡಿತ ಪ್ರದೇಶಗಳ ಜನರು ತಮ್ಮ ನಿವಾಸಗಳಿಗೆ ಮರಳಬಹುದು ಎಂದು ಅವರು ತಿಳಿಸಿದರು. 

    ʻʻಗಡಿ ಪ್ರದೇಶಗಳ ಜನರು ತಮ್ಮ ನಿವಾಸಗಳಿಗೆ ಮರಳಲು ಪ್ರಯತ್ನಿಸಬೇಕು. ಪೂಂಚ್ ಪಟ್ಟಣದ ಶೇಕಡಾ 80 ರಿಂದ 90 ರಷ್ಟು ಖಾಲಿಯಾಗಿದೆ. ಶೆಲ್ ದಾಳಿ ನಡೆಯುತ್ತಿರುವಾಗ ಅವರು ತಮ್ಮ ಮನೆಗಳನ್ನು ತೊರೆದಿದ್ದರು. ಈಗ ಶೆಲ್ ದಾಳಿ ನಿಂತಿರುವುದರಿಂದ ಅವರು ತಮ್ಮ ಮನೆಗಳಿಗೆ ಮರಳಬಹುದು ಎಂದು ಅಬ್ದುಲ್ಲಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

  • 12 May 2025 3:40 PM IST

    ಪೂಂಚ್‌ನಲ್ಲಿ ಪಾಕ್ ಶೆಲ್ ದಾಳಿಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬವನ್ನು ಭೇಟಿಯಾದ ಜಮ್ಮು - ಕಾಶ್ಮೀರ ಸಿ.ಎಂ

    ಪೂಂಚ್‌ನಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬವನ್ನು  ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭೇಟಿ ಮಾಡಿದರು. 


  • 12 May 2025 3:32 PM IST

    ನಾವು ಕಿರಾನಾ ಬೆಟ್ಟಗಳನ್ನು ಹೊಡೆದಿಲ್ಲ: ಏರ್ ಮಾರ್ಷಲ್ ಎ.ಕೆ. ಭಾರ್ತಿ

    ಭಾರತ ಕಿರಾನಾ ಬೆಟ್ಟಗಳನ್ನು ಹೊಡೆದಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಏರ್ ಮಾರ್ಷಲ್ ಎ.ಕೆ. ಭಾರ್ತಿ, "ಕಿರಾನಾ ಬೆಟ್ಟಗಳಲ್ಲಿ ಪರಮಾಣು ಸ್ಥಾವರವಿದೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು, ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ. ಅಲ್ಲಿ ಏನೇ ಇರಲಿ ನಾವು ಕಿರಾನಾ ಬೆಟ್ಟಗಳತ್ತ ದಾಳಿ ಮಾಡಿಲ್ಲ ಎಂದು ಅವರು ತಿಳಿಸಿದರು. 

  • 12 May 2025 3:13 PM IST

    ಇದು ವಿಭಿನ್ನ ರೀತಿಯ ಯುದ್ಧವಾಗಿತ್ತು: ಏರ್ ಮಾರ್ಷಲ್ ಎ.ಕೆ. ಭರತ್

    ಪ್ರತಿಯೊಂದು ಹೋರಾಟವೂ ವಿಭಿನ್ನವಾಗಿ ಹೋರಾಟಲ್ಪಡುತ್ತದೆ. ಹಾಗೇಯೇ ಇದೊಂದು ವಿಭಿನ್ನ ರೀತಿಯ ಯುದ್ದವಾಗಿತ್ತು ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. 

  • 12 May 2025 3:06 PM IST

    ಭಾರತ ಯಾವುದೇ ರೀತಿಯ ತಂತ್ರಜ್ಞಾನವನ್ನು ಎದುರಿಸಬಲ್ಲದು: ಏರ್ ಮಾರ್ಷಲ್ ಎ.ಕೆ. ಭಾರ್ತಿ

    "ನೀವು ಇಲ್ಲಿ ಟರ್ಕಿಶ್ ಮತ್ತು ಇನ್ನೊಂದು ರೀತಿಯ ಡ್ರೋನ್‌ಗಳ ಅವಶೇಷಗಳನ್ನು ನೋಡಿದ್ದೀರಿ. ನಾವು ಯಾವುದೇ ರೀತಿಯ ತಂತ್ರಜ್ಞಾನಕ್ಕೂ ಸಮರ್ಥರಾಗಿದ್ದೇವೆ" ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ತಿಳಿಸಿದರು. 

  • 12 May 2025 2:56 PM IST

    ಭಾರತದ ಎಲ್ಲಾ ವಾಯುನೆಲೆಗಳು ಕಾರ್ಯನಿರ್ವಹಿಸುತ್ತಿವೆ: ಡಿಜಿಎಂಒ

    "ನಮ್ಮ ವಾಯುಪಡೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನದ ಡ್ರೋನ್ ಮತ್ತು ಯುಎವಿ ದಾಳಿಗಳನ್ನು ನಮ್ಮ ವಾಯು ರಕ್ಷಣಾ ಗ್ರಿಡ್‌ಗಳಿಂದ ಹಾರಿಸಿದ ಶಸ್ತ್ರಾಸ್ತ್ರಗಳಿಂದ ವಿಫಲಗೊಳಿಸಲಾಯಿತು. ಇದೆಲ್ಲದರಲ್ಲೂ ಬಿಎಸ್‌ಎಫ್ ಪಾತ್ರವನ್ನು ನಾನು ಶ್ಲಾಘಿಸುತ್ತೇನೆ.  ಆಪರೇಷನ್ ಸಿಂಧೂರ್ ಅನ್ನು ಕಾರ್ಯಗತಗೊಳಿಸುವಲ್ಲಿ ಮೂರು ಸೇವೆಗಳ ನಡುವೆ ಸಂಪೂರ್ಣ ಸಮನ್ವಯವಿತ್ತು" ಎಂದು ಡಿಜಿಎಂಒ ತಿಳಿಸಿದರು. 

  • 12 May 2025 2:52 PM IST

    ಪಾಕಿಸ್ತಾನದ ದಾಳಿ ಎಲ್‌ಒಸಿ ಆಚೆಯಿಂದ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು: ಡಿಜಿಎಂಒ

    "ನಾವು ಎಲ್‌ಒಸಿ ದಾಟದೆ ಭಯೋತ್ಪಾದಕರ ಮೇಲೆ ದಾಳಿ ಮಾಡಿದೆವು ಮತ್ತು ಪಾಕಿಸ್ತಾನದ ಪ್ರತೀಕಾರವು ಗಡಿಯಾಚೆಯಿಂದ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ನಮ್ಮ ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನದ ಪುನರಾವರ್ತಿತ ದಾಳಿಗಳನ್ನು ನಮ್ಮ ವಾಯು ರಕ್ಷಣಾ ಗ್ರಿಡ್ ವಿಫಲಗೊಳಿಸಿತು. ಪಾಕಿಸ್ತಾನ ವಾಯುಪಡೆಯು ನಮ್ಮ ವಾಯು ರಕ್ಷಣೆಯನ್ನು ಉಲ್ಲಂಘಿಸಿ ನಮ್ಮ ವಾಯು ನೆಲೆಗಳನ್ನು ಗುರಿಯಾಗಿಸುವ ಯಾವುದೇ ಸಾಧ್ಯತೆ ಇರಲಿಲ್ಲ ಎಂದು ಡಿಜಿಎಂಒ ಹೇಳಿದರು. 

  • 12 May 2025 2:46 PM IST

    ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನಕ್ಕೆ ಅಭೇದ್ಯವಾಗಿತ್ತು: ಡಿಜಿ

    "ನಮ್ಮ ಹೋರಾಟ ಭಯೋತ್ಪಾದಕರೊಂದಿಗೆ ಹೊರತು ಪಾಕಿಸ್ತಾನ ಸೇನೆಯೊಂದಿಗೆ ಅಲ್ಲ ಎಂದು ನಾವು ಪುನರುಚ್ಚರಿಸಿದ್ದೇವೆ. ದುರದೃಷ್ಟವಶಾತ್ ಪಾಕಿಸ್ತಾನ ಸೇನೆಯು ಭಯೋತ್ಪಾದಕರ ಪರವಾಗಿ ಮಧ್ಯಪ್ರವೇಶಿಸಿತು. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಮತ್ತು ಅವರು ಅನುಭವಿಸಿದ ಹಾನಿಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಅವರಿಗೆ ಅಭೇದ್ಯವಾಗಿತ್ತು" ಎಂದು  ವಾಯು ಕಾರ್ಯಾಚರಣೆಗಳ ಡಿಜಿ ಹೇಳಿದ್ದಾರೆ. 

  • 12 May 2025 1:28 PM IST

    ಎಫ್‌ಎಸ್ ವಿಕ್ರಮ್ ಮಿಶ್ರಿ ಅವರ ಪುತ್ರಿಯ ಆನ್‌ಲೈನ್ ಟ್ರೋಲಿಂಗ್ ಖಂಡಿಸಿದ ರಾಷ್ಟ್ರೀಯ ಮಹಿಳಾ ಆಯೋಗ

    ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷದ ನಂತರ, ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಮೇ10ರಂದು ಕದನ ವಿರಾಮವನ್ನು ಘೋಷಿಸಲಾಯಿತು. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿಈ ಕದನ ವಿರಾಮದ ಬಗ್ಗೆ ಮಾಹಿತಿ ನೀಡಿದರು. ಅಂದಿನಿಂದ, ವಿದೇಶಾಂಗ ಕಾರ್ಯದರ್ಶಿ ಮಿಶ್ರಿ ಅವರ ಕುಟುಂಬ ಮತ್ತು ವಿಶೇಷವಾಗಿ ಅವರ ಮಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡುತ್ತಿರುವುದನ್ನು  ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ.

    ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ  ವಿಜಯ ರಹತ್ಕರ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಯುವತಿಯ ವೈಯಕ್ತಿಕ ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವುದನ್ನು ಸಮಿತಿಯು ಖಂಡಿಸಿದೆ. ಹಾಗೂ ಇದು ತೀವ್ರ ಬೇಜವಾಬ್ದಾರಿಯುತ ಕೃತ್ಯ ಮತ್ತು ಆಕೆಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಗೌಪ್ಯತೆಯ ಗಂಭೀರ ಉಲ್ಲಂಘನೆ ಎಂದು ಕರೆದಿದೆ. 

    ಮಿಸ್ರಿಯಂತಹ ಹಿರಿಯ ನಾಗರಿಕ ಸೇವಕರ ಕುಟುಂಬ ಸದಸ್ಯರ ಮೇಲಿನ ವೈಯಕ್ತಿಕ ದಾಳಿಗಳು ಸ್ವೀಕಾರಾರ್ಹವಲ್ಲ ಮಾತ್ರವಲ್ಲದೆ ನೈತಿಕವಾಗಿ ಅಸಮರ್ಥನೀಯವೂ ಆಗಿದೆ ಎಂದು ರಹತ್ಕರ್ ಒತ್ತಿ ಹೇಳಿದರು.

Read More
Next Story