
Operation Sindoor | ಸಶಸ್ತ್ರ ಪಡೆಗಳ ಶೌರ್ಯಕ್ಕೆ ನನ್ನ ಸಲಾಂ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. 'ಆಪರೇಷನ್ ಸಿಂದೂರ್' ಆರಂಭವಾದ ನಂತರ ಪ್ರಧಾನಿಯವರ ಇದು ಮೊದಲ ಭಾಷಣವಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ನೆಲ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿಗಳು ಮತ್ತು ಸೈನಿಕ ಕಾರ್ಯಾಚರಣೆಗಳನ್ನು ತಕ್ಷಣದಿಂದ ನಿಲ್ಲಿಸಲು ಒಪ್ಪಂದಕ್ಕೆ ತಲುಪಿದ ಎರಡು ದಿನಗಳ ನಂತರ ಈ ಭಾಷಣ ಮಾಡಿದ್ದಾರೆ. ಇತ್ತೀಚೆಗೆ ನಡೆದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ಸಂದರ್ಭದಲ್ಲಿ ದೇಶದ ರಕ್ಷಣಾ ಪಡೆಗಳು ತೋರಿದ ಶೌರ್ಯ ಮತ್ತು ಬದ್ಧತೆಯನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಕೊಂಡಾಡಿದರು. ಸಶಸ್ತ್ರ ಪಡೆಗಳ ಶೌರ್ಯಕ್ಕೆ ಅವರು ಸಲಾಂ ಹೇಳಿದರು.
ಈ ಮೊದಲು, ಭಾರತವು ತನ್ನ ಎಲ್ಲಾ ಮಿಲಿಟರಿ ನೆಲೆಗಳು ಮತ್ತು ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರತವಾಗಿವೆ ಮತ್ತು ಅಗತ್ಯವಿದ್ದರೆ ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಿದ್ಧವಾಗಿವೆ ಎಂದು ಹೇಳಿಕೆ ನೀಡಿತ್ತು. ಪ್ರಧಾನಿಯವರ ಭಾಷಣವು ದೇಶದ ಭದ್ರತಾ ಸ್ಥಿತಿ ಮತ್ತು ಸಶಸ್ತ್ರ ಪಡೆಗಳ ಸನ್ನದ್ಧತೆಯ ಬಗ್ಗೆ ದೇಶವಾಸಿಗಳಿಗೆ ಮಾಹಿತಿ ನೀಡುವ ಉದ್ದೇಶ ಹೊಂದಿತ್ತು.
ಕಾಶ್ಮೀರದ ಪಹಲ್ಗಾಮ್ನಲ್ಲಿ ಏ.22 ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಮೇ 7 ರಂದು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿ ನಡೆಸಿ, ನಾಶಪಡಿಸಿತ್ತು.
ಭಾರತದ ಈ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ, ರಾಜಸ್ತಾನ, ಪಂಜಾಬ್ ಗಡಿಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿತ್ತು. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದು ಹಾಕಿತ್ತು. ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತಿದಾಳಿ ನಡೆಸಿದ್ದ ಭಾರತೀಯ ಸೇನೆ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಪಾಕಿಸ್ತಾನದ ಒಟ್ಟು 9 ವಾಯುನೆಲೆಗಳಿಗೆ ಹಾನಿಯಾಗಿತ್ತು.
ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕೂಡಲೇ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಅಲ್ಲದೇ ಮೇ 12 ರಂದು ಎರಡೂ ದೇಶಗಳ ಡಿಜಿಎಂಒ ಮಟ್ಟದ ಮಾತುಕತೆ ನಡೆಯಲಿದೆ ಎಂದು ಹೇಳಿದ್ದರು.
ಕದನ ವಿರಾಮ ಘೋಷಣೆ ನಂತರವೂ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಒನ್ನೊಮ್ಮೆ ಕದನ ವಿರಾಮ ಉಲ್ಲಂಘಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಭಾರತ ಎಚ್ಚರಿಕೆ ನೀಡಿದ ಕೂಡಲೇ ಗುಂಡಿನ ದಾಳಿ ನಿಲ್ಲಿಸಿತ್ತು. ಸದ್ಯ ಜಮ್ಮು ಕಾಶ್ಮೀರ ಹಾಗೂ ಇತರೆ ರಾಜ್ಯಗಳ ಗಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
ಉಗ್ರರ ಹಸ್ತಾಂತರಕ್ಕೆ ಪಟ್ಟು
ಪಹಲ್ಗಾಮ್ ದಾಳಿಗೆ ಕಾರಣರಾದ ಉಗ್ರರನ್ನು ಹಸ್ತಾಂತರ ಮಾಡುವಂತೆ ಭಾರತವು ಡಿಜಿಎಂಒ ಮಾತುಕತೆ ವೇಳೆ ಪಟ್ಟು ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ನೆಲೆದಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದನೆ, ಪ್ರೋತ್ಸಾಹ ನೀಡಬಾರದು. ಈ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಕದನ ವಿರಾಮ ಪಾಲಿಸಲಿದೆ ಎಂದು ಹೇಳಲಾಗಿದೆ.
Live Updates
- 12 May 2025 1:17 PM IST
ಆರ್ಎಸ್ ಪುರ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಬಿಎಸ್ಎಫ್ ಕಾನ್ಸ್ಟೆಬಲ್ಗೆ ಶ್ರದ್ಧಾಂಜಲಿ
ಮೇ 10 ರಂದು ಜಮ್ಮು ಮತ್ತು ಕಾಶ್ಮೀರದ ಆರ್ಎಸ್ ಪುರ ಸೆಕ್ಟರ್ನಲ್ಲಿ ಪಾಕಿಸ್ತಾನದಿಂದ ಗಡಿಯಾಚೆಗಿನ ಗುಂಡಿನ ದಾಳಿಗೆ ಕರ್ತವ್ಯದ ವೇಳೆ ಹುತಾತ್ಮರಾದ ಬಿಎಸ್ಎಫ್ ಕಾನ್ಸ್ಟೆಬಲ್ ದೀಪಕ್ ಚಿಂಗಖಮ್ ಅವರ ಗೌರವಾರ್ಥ ಮಾಲಾರ್ಪಣೆ ಸಮಾರಂಭ ನಡೆಯಿತು.
- 12 May 2025 12:15 PM IST
32 ವಿಮಾನ ನಿಲ್ದಾಣಗಳು ವಿಮಾನ ಕಾರ್ಯಾಚರಣೆಗೆ ಮತ್ತೆ ತೆರೆದಿವೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಮುಚ್ಚಲ್ಪಟ್ಟ 32 ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
- 12 May 2025 12:13 PM IST
ಪಾಕ್ ಶೆಲ್ ದಾಳಿಯಲ್ಲಿ ಮೃತಪಟ್ಟ ನಿವಾಸಿಯ ಕುಟುಂಬವನ್ನು ಭೇಟಿ ಮಾಡಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ
ಪೂಂಚ್: ಕಳೆದ ಕೆಲವು ದಿನಗಳಲ್ಲಿ ನಡೆದ ಪಾಕಿಸ್ತಾನ ಶೆಲ್ ದಾಳಿಯಲ್ಲಿ ಮೃತಪಟ್ಟ ಅಮ್ರಿಕ್ ಸಿಂಗ್ ಅವರ ಕುಟುಂಬವನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭೇಟಿ ಮಾಡಿ ಸಂತಾಪ ಸೂಚಿಸಿದರು.
- 12 May 2025 12:12 PM IST
ಪಾಕ್ ಶೆಲ್ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಒಮರ್ ಅಬ್ದುಲ್ಲಾ ಸಾಂತ್ವನ
ಜಮ್ಮುಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆದಿದ್ದ ಪಾಕಿಸ್ತಾನ ಶೆಲ್ ದಾಳಿಯಲ್ಲಿ ಮೃತಪಟ್ಟ ಅಮ್ರಿಕ್ ಸಿಂಗ್ ಅವರ ಕುಟುಂಬ ಸದಸ್ಯರನ್ನು ಜಮ್ಮುಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಭೇಟಿಯಾಗಿ ಸಾಂತ್ವನ ಹೇಳಿದರು.
#WATCH | Poonch: J&K CM Omar Abdullah meets the family of Amrik Singh, who died in Pakistan shelling that took place in the last few days pic.twitter.com/BWrk9fGOVB
— ANI (@ANI) May 12, 2025 - 12 May 2025 12:09 PM IST
ಸೇನಾಪಡೆಗಳ ಮುಖ್ಯಸ್ಥರ ಜೊತೆ ಪ್ರಧಾನಿ ಉನ್ನತ ಮಟ್ಟದ ಸಭೆ
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ , ಸಶಸ್ತ್ರ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಹಾಗೂ ಸೇನಾ ಪಡೆಗಳ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ.
ಭಾರತ ಹಾಗೂ ಪಾಕ್ ಡಿಜಿಎಂಒಗಳ ಮಾತುಕತೆ ಹಿನ್ನೆಲೆಯಲ್ಲಿ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
- 12 May 2025 11:09 AM IST
ಪ್ರಧಾನಿ ನಿವಾಸಕ್ಕೆ ರಾಜನಾಥ್ ಸಿಂಗ್ ಆಗಮನ
ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದ (ಡಿಜಿಎಂಒ) ಸಭೆ ಹಿನ್ನೆಲೆಯಲ್ಲಿ ನವದೆಹಲಿಯ ಪ್ರಧಾನಿ ನಿವಾಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿ, ಮಾತುಕತೆ ನಡೆಸಿದ್ದಾರೆ.
- 12 May 2025 10:31 AM IST
ಭದ್ರತೆ, ಸುರಕ್ಷತೆಗಾಗಿ ಇಸ್ರೋದಿಂದ 10 ಉಪಗ್ರಹಗಳ ನಿಯೋಜನೆ
ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಜಮ್ಮುಕಾಶ್ಮೀರ, ಪಂಜಾಬ್ ಹಾಗೂ ರಾಜಸ್ಥಾನದ ಗಡಿ ಸೇರಿದಂತೆ ದೇಶದಲ್ಲಿ ನಾಗರಿಕರ ಭದ್ರತೆ ಹಾಗೂ ಸುರಕ್ಷತೆ ಖಾತರಿಪಡಿಸಿಕೊಳ್ಳಲು 10ಉಪಗ್ರಹಗಳನ್ನು ನಿಯೋಜಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ತಿಳಿಸಿದ್ದಾರೆ.
ಉಪಗ್ರಹಗಳು ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಮೇಲೂ ನಿಗಾ ಇರಿಸಿವೆ. ಈ ಉಪಗ್ರಹಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದ್ದಾರೆ.
- 12 May 2025 10:22 AM IST
ಜಮ್ಮು ಗಡಿಯಿಂದ ಸುರಕ್ಷಿತವಾಗಿ ಮರಳಿದ ದಕ್ಷಿಣ ರಾಜ್ಯಗಳ ವಿದ್ಯಾರ್ಥಿಗಳು
ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಒಟ್ಟು 489 ವಿದ್ಯಾರ್ಥಿಗಳನ್ನು ಜಮ್ಮುಕಾಶ್ಮೀರ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಇತರ ರಾಜ್ಯಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಆಂಧ್ರಪ್ರದೇಶದ 350, ತೆಲಂಗಾಣದ 126 ಮಂದಿ, ಕರ್ನಾಟಕದ 13 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ. ಗಡಿಯಲ್ಲಿರುವ ಆಂಧ್ರಪ್ರದೇಶದ ವಿದ್ಯಾರ್ಥಿಗಳಿಗಾಗಿ ದೆಹಲಿಯ ಆಂಧ್ರಪ್ರದೇಶ ಭವನವು 24x7 ನಿಯಂತ್ರಣ ಕೊಠಡಿ ಸ್ಥಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಾಂತರಗೊಂಡ ವಿದ್ಯಾರ್ಥಿಗಳು ಶ್ರೀನಗರದ ಎನ್ಐಟಿ, ಶೇರ್-ಎ-ಕಾಶ್ಮೀರ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇನ್ನು ಕೆಲವರು ಪಂಜಾಬ್ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿದು ಬಂದಿದೆ.
- 12 May 2025 10:15 AM IST
ಸಜಹ ಸ್ಥಿತಿಗೆ ಮರಳಿದ ಜಮ್ಮುಕಾಶ್ಮೀರ; ಕೇಳದ ಗುಂಡಿನ ಸದ್ದು
ಜಮ್ಮುಕಾಶ್ಮೀರದಲ್ಲಿ ಏ.22 ರ ಬಳಿಕ ಇದೇ ಮೊದಲ ಬಾರಿಗೆ ಯಾವುದೇ ಗುಂಡಿನ ಸದ್ದು ಕೇಳದೇ ಶಾಂತಿ ನೆಲೆಸಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಬಳಿಕ ಜಮ್ಮುಕಾಶ್ಮೀರ ಗಡಿಯಲ್ಲಿ ನಿತ್ಯ ಗುಂಡಿನ ಮೊರೆತ ಜನರನ್ನು ಬೆಚ್ಚಿ ಬೀಳಿಸಿತ್ತು. ಜನರು ಬಂಕರ್ಗಳಲ್ಲಿ ಆಶ್ರಯ ಪಡೆದಿದ್ದರು. ಈಗ ಕದನ ವಿರಾಮ ಘೋಷಣೆಯಾದ ಬಳಿಕ ಯಾವುದೇ ಗುಂಡಿನ ಸದ್ದು ಕೇಳುತ್ತಿಲ್ಲ. ಜನಜೀವನ ಸಹಜ ಸ್ಥಿತಿಗೆ ಬಂದಿದೆ.