Two Kerala tourists drown in Sela Lake in Arunachal Pradesh
x

ಸೇಲಾ ಸರೋವರದಲ್ಲಿ ಯುವಕರನ್ನು ರಕ್ಷಿಸುತ್ತಿರುವ ಸ್ಥಳೀಯರು.

ಅರುಣಾಚಲದ ಸೇಲಾ ಸರೋವರದಲ್ಲಿ ಕೇರಳದ ಇಬ್ಬರು ಪ್ರವಾಸಿಗರ ಜಲಸಮಾಧಿ

ಸರೋವರದ ಸೌಂದರ್ಯಕ್ಕೆ ಮಾರುಹೋದ ತಂಡದ ಒಬ್ಬ ಸದಸ್ಯ, ಮಂಜುಗಡ್ಡೆಯ ಮೇಲೆ ನಡೆದಾಡುವ ಸಾಹಸಕ್ಕೆ ಮುಂದಾಗಿದ್ದು, ಅದು ಒಡೆದು ಆತ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ.


Click the Play button to hear this message in audio format

ಪ್ರವಾಸದ ಮಜಾ ಕಳೆಯಲು ಬಂದಿದ್ದ ಸ್ನೇಹಿತರ ಗುಂಪೊಂದು ಕ್ಷಣಾರ್ಧದಲ್ಲಿ ದುರಂತಕ್ಕೆ ಸಾಕ್ಷಿಯಾಗಿದೆ. ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಸುಪ್ರಸಿದ್ಧ ಸೇಲಾ ಸರೋವರದಲ್ಲಿ ಮುಳುಗಿ ಕೇರಳ ಮೂಲದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನು ಕೇರಳದ ಕೊಲ್ಲಂ ಮೂಲದ ದಿನು (26) ಮತ್ತು ಮಹದೇವ್ (24) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಈ ದಾರುಣ ಘಟನೆ ಸಂಭವಿಸಿದ್ದು, ದಿನು ಅವರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಮಹದೇವ್ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕೇರಳದಿಂದ ಏಳು ಮಂದಿ ಯುವಕರ ತಂಡವೊಂದು ಗುವಾಹಟಿ ಮಾರ್ಗವಾಗಿ ಗುರುವಾರ ತವಾಂಗ್‌ಗೆ ಆಗಮಿಸಿತ್ತು. ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಸುಂದರ ಸೇಲಾ ಸರೋವರವನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ಇವರೆಲ್ಲರೂ ತೆರಳಿದ್ದರು. ಚಳಿಗಾಲವಾದ್ದರಿಂದ ಸರೋವರದ ಮೇಲ್ಮೈ ಹೆಪ್ಪುಗಟ್ಟಿ ಮಂಜುಗಡ್ಡೆಯಂತೆ ಭಾಸವಾಗುತ್ತಿತ್ತು.

ಸರೋವರದ ಸೌಂದರ್ಯಕ್ಕೆ ಮಾರುಹೋದ ತಂಡದ ಒಬ್ಬ ಸದಸ್ಯ, ಮಂಜುಗಡ್ಡೆಯ ಮೇಲೆ ನಡೆದಾಡುವ ಸಾಹಸಕ್ಕೆ ಮುಂದಾಗಿದ್ದಾರೆ. ಆದರೆ, ಮಂಜಿನ ಪದರ ತೆಳುವಾಗಿದ್ದರಿಂದ ಅದು ಒಡೆದು ಆತ ನೀರಿನಲ್ಲಿ ಮುಳುಗಲಾರಂಭಿಸಿದ್ದರು. ಆತನನ್ನು ರಕ್ಷಿಸಲು ತಕ್ಷಣವೇ ದಿನು ಮತ್ತು ಮಹದೇವ್ ಧಾವಿಸಿದ್ದಾರೆ. ವಿಚಿತ್ರವೆಂದರೆ, ಮೊದಲು ಬಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿ ದಡ ಸೇರಿದ್ದಾನೆ. ಆದರೆ, ಆತನನ್ನು ರಕ್ಷಿಸಲು ಹೋದ ದಿನು ಮತ್ತು ಮಹದೇವ್, ಮಂಜುಗಡ್ಡೆಯ ಕೆಳಗಿನ ಕೊರೆಯುವ ನೀರಿನಲ್ಲಿ ಸಿಲುಕಿ ಕಣ್ಮರೆಯಾಗಿದ್ದಾರೆ. ಈ ಭೀಕರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುವವರ ಎದೆಯುಬ್ಬಿಸುವಂತಿದೆ.

ಶೋಧ ಕಾರ್ಯ ಚುರುಕು

ಘಟನೆ ನಡೆದ ಕೂಡಲೇ ಜಿಲ್ಲಾ ಪೊಲೀಸ್, ಸೇನಾಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ದೌಡಾಯಿಸಿವೆ. ಪ್ರತಿಕೂಲ ಹವಾಮಾನ ಮತ್ತು ಮಂಜು ಮುಸುಕಿದ ವಾತಾವರಣದ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿ ದಿನು ಅವರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಕತ್ತಲಾದ ಕಾರಣ ಶುಕ್ರವಾರ ಸಂಜೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಶನಿವಾರ ಮುಂಜಾನೆಯಿಂದಲೇ ಮಹದೇವ್ ಅವರಿಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ.ಡಬ್ಲ್ಯೂ. ಥಾಂಗೋನ್ ತಿಳಿಸಿದ್ದಾರೆ.

ಎಚ್ಚರಿಕೆ ಮೀರಿದ ಸಾಹಸ

ಸೇಲಾ ಸರೋವರದ ಮಂಜುಗಡ್ಡೆಯ ಪದರವು ಮನುಷ್ಯನ ಭಾರವನ್ನು ತಡೆದುಕೊಳ್ಳುವಷ್ಟು ಗಟ್ಟಿಯಾಗಿರುವುದಿಲ್ಲ. ಹೀಗಾಗಿ, ಸರೋವರದ ಮೇಲೆ ಇಳಿಯದಂತೆ ಜಿಲ್ಲಾಡಳಿತ ಡಿಸೆಂಬರ್‌ನಲ್ಲೇ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿತ್ತು. ಅಲ್ಲದೆ, ಸ್ಥಳದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿತ್ತು. ಆದರೂ, ಪ್ರವಾಸಿಗರು ಉತ್ಸಾಹದಲ್ಲಿ ಎಚ್ಚರಿಕೆ ಮೀರಿ ವರ್ತಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story