
Maharashtra Politics|ಒಂದಾದ ಠಾಕ್ರೆ ಸಹೋದರರು; ಮುಂಬೈ ಮೇಯರ್ ಸ್ಥಾನದ ಮೇಲೆ ಕಣ್ಣು
ಮಹಾರಾಷ್ಟ್ರದ ಬಿಎಂಸಿ ಚುನಾವಣೆ 2026 ಕ್ಕಾಗಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಮೈತ್ರಿ ಘೋಷಿಸಿದ್ದಾರೆ. ಮರಾಠಿ ಮಾನುಸ್ ಹಿತಾಸಕ್ತಿಗಾಗಿ ಒಂದಾದ ಸಹೋದರರ ಈ ನಿರ್ಧಾರವು ಬಿಜೆಪಿ ಮತ್ತು ಶಿಂದೆ ಬಣಕ್ಕೆ ಸವಾಲಾಗಲಿದೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ದಶಕಗಳಿಂದ ಕಾಯುತ್ತಿದ್ದ ಆ ಕ್ಷಣ ಕೊನೆಗೂ ಬಂದಿದೆ. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಾಯಕ ರಾಜ್ ಠಾಕ್ರೆ ಬುಧವಾರ (ಡಿಸೆಂಬರ್ 24) ಅಧಿಕೃತವಾಗಿ ಮೈತ್ರಿ ಘೋಷಿಸಿದ್ದಾರೆ. ಮುಂಬರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ರಾಜ್ಯದ 29 ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಉಭಯ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ.
'ಮುಂಬೈ ಮೇಯರ್ ಮರಾಠಿಗನೇ ಆಗಲಿದ್ದಾನೆ'
ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, "ಮಹಾರಾಷ್ಟ್ರದ ಜನತೆ ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಇಂದು ಬಂದಿದೆ. ಮುಂಬೈ ಮೇಯರ್ ಮರಾಠಿಗನೇ ಆಗಲಿದ್ದಾನೆ ಮತ್ತು ಆ ಸ್ಥಾನ ನಮ್ಮದಾಗಲಿದೆ," ಎಂದು ಘೋಷಿಸಿದರು. ಸೀಟು ಹಂಚಿಕೆಯ ಬಗ್ಗೆ ಸಂಪೂರ್ಣ ವಿವರ ನೀಡದಿದ್ದರೂ, "ನಾವು ಒಟ್ಟಾಗಿ ಇರಲು ಒಂದಾಗಿದ್ದೇವೆ" ಎಂದು ಉದ್ಧವ್ ಠಾಕ್ರೆ ಭರವಸೆ ನೀಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
“ಬಿಜೆಪಿಯ ಪ್ರಚಾರವನ್ನು ಟೀಕಿಸಿದ ಉದ್ಧವ್ ಠಾಕ್ರೆ, ಬಿಜೆಪಿ ಜನರನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ನಾವು ವಿಭಜನೆಯಾದರೆ ನಾಶವಾಗುತ್ತೇವೆ. ಮರಾಠಿ ಜನರು ಒಡೆಯಬಾರದು ಎಂಬ ಏಕತೆಯ ಸಂದೇಶವನ್ನು ನಾನು ನೀಡುತ್ತಿದ್ದೇನೆ. ಬಿಜೆಪಿಯ ಕಾರ್ಯವೈಖರಿ ಇಷ್ಟವಾಗದವರು ನಮ್ಮೊಂದಿಗೆ ಬರಬಹುದು" ಎಂದು ಮುಕ್ತ ಆಹ್ವಾನ ನೀಡಿದರು.
ಬಾಳಾಸಾಹೇಬರಿಗೆ ನಮನ
ಮೈತ್ರಿ ಘೋಷಣೆಗೂ ಮುನ್ನ ಉದ್ಧವ್ ಮತ್ತು ರಾಜ್ ಠಾಕ್ರೆ ತಮ್ಮ ಕುಟುಂಬ ಸದಸ್ಯರೊಂದಿಗೆ ಶಿವಾಜಿ ಪಾರ್ಕ್ಗೆ ಭೇಟಿ ನೀಡಿ, ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಆದಿತ್ಯ ಠಾಕ್ರೆ ಮತ್ತು ಅಮಿತ್ ಠಾಕ್ರೆ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿರೋಧಿಗಳ ಟೀಕೆ
ಏಕನಾಥ್ ಶಿಂದೆ ನೇತೃತ್ವದ ಶಿವಸೇನಾ ಈ ಬೆಳವಣಿಗೆಯನ್ನು 'ಕೇವಲ ಫೋಟೋ ಶೂಟ್' ಎಂದು ಲೇವಡಿ ಮಾಡಿದೆ. ಕಳೆದ 20 ವರ್ಷಗಳಿಂದ ಮರಾಠಿ ಜನರನ್ನು ವಿಭಜಿಸಿದವರು ಈಗ ಭಾವನಾತ್ಮಕ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ವಕ್ತಾರೆ ಮನಿಷಾ ಕಾಯಂದೆ ಟೀಕಿಸಿದ್ದಾರೆ. ಜನವರಿ 15 ರಂದು ಬಿಎಂಸಿ ಸೇರಿದಂತೆ 29 ಪಾಲಿಕೆಗಳಿಗೆ ಚುನಾವಣೆ ನಡೆಯಲಿದ್ದು, ಜನವರಿ 16 ರಂದು ಫಲಿತಾಂಶ ಪ್ರಕಟವಾಗಲಿದೆ.

