ವಾಜಪೇಯಿಯಿಂದ ಶಿಂಧೆಯವರೆಗೆ: ರಾಜಕೀಯದಲ್ಲಿ ಮುಂದುವರಿದ ರೆಸಾರ್ಟ್ ತಂತ್ರಗಾರಿಕೆ!
x

ವಾಜಪೇಯಿಯಿಂದ ಶಿಂಧೆಯವರೆಗೆ: ರಾಜಕೀಯದಲ್ಲಿ ಮುಂದುವರಿದ 'ರೆಸಾರ್ಟ್' ತಂತ್ರಗಾರಿಕೆ!

ಮುಂಬೈ ಮೇಯರ್ ಚುನಾವಣೆಗೂ ಮುನ್ನ ಒಮ್ಮತ ಮೂಡದಿದ್ದರೆ ಅಥವಾ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದರೆ ತಮ್ಮ ಕಾರ್ಪೊರೇಟರ್‌ಗಳು ಅಡ್ಡಮತದಾನ ಮಾಡುವ ಸಾಧ್ಯತೆಯಿದೆ ಎಂದು ಶಿಂಧೆ ಬಣ ಆತಂಕಗೊಂಡಿದೆ.


Click the Play button to hear this message in audio format

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಗಳಲ್ಲಿ ಒಂದಾದ ಬೃಹನ್ಮುಂಬೈ ಮಹಾನಗರ ಪಾಲಿಕೆಯ (BMC) ಮೇಯರ್ ಆಯ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ 'ರೆಸಾರ್ಟ್ ಪಾಲಿಟಿಕ್ಸ್' ಸದ್ದು ಮಾಡುತ್ತಿದೆ. ಮೇಯರ್ ಹುದ್ದೆಗೆ ಮತದಾನ ನಡೆಯುವ ಮುನ್ನವೇ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ತನ್ನ ಕಾರ್ಪೊರೇಟರ್‌ಗಳನ್ನು ಬಾಂದ್ರಾದ ಐಷಾರಾಮಿ ಹೋಟೆಲ್‌ನಲ್ಲಿ ಕೂಡಿಹಾಕಿದೆ.

ಬಹುಮತ ಸಾಬೀತುಪಡಿಸಲು ಅಥವಾ ಮೈತ್ರಿಕೂಟದಲ್ಲಿ ಭಿನ್ನಮತ ಉಂಟಾಗುವ ಭೀತಿಯಿಂದ ಈ ತಂತ್ರವನ್ನು ಅನುಸರಿಸಲಾಗುತ್ತಿದೆ. ಮುಂಬೈ ಮೇಯರ್ ಚುನಾವಣೆಗೂ ಮುನ್ನ ಒಮ್ಮತ ಮೂಡದಿದ್ದರೆ ಅಥವಾ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದರೆ ತಮ್ಮ ಕಾರ್ಪೊರೇಟರ್‌ಗಳು ಅಡ್ಡಮತದಾನ ಮಾಡುವ ಸಾಧ್ಯತೆಯಿದೆ ಎಂದು ಶಿಂಧೆ ಬಣ ಆತಂಕಗೊಂಡಿದೆ. ಹೀಗಾಗಿ, ತಮ್ಮ ಬಣದ 29 ಕಾರ್ಪೊರೇಟರ್‌ಗಳನ್ನು ಸುರಕ್ಷಿತವಾಗಿ ಹೋಟೆಲ್‌ನಲ್ಲಿ ಇರಿಸಲಾಗಿದೆ.

ವಾಜಪೇಯಿ ಕಾಲದ ನೆನಪು

ದೇಶದಲ್ಲಿ ಅಥವಾ ಮಹಾರಾಷ್ಟ್ರದಲ್ಲಿ ಈ ರೀತಿಯ 'ಹೋಟೆಲ್ ರಾಜಕೀಯ' ಹೊಸದೇನಲ್ಲ. ಮೈತ್ರಿ ರಾಜಕಾರಣ ಪ್ರಾರಂಭವಾದಾಗಿನಿಂದಲೂ ಇದು ಚಾಲ್ತಿಯಲ್ಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ-1 ಸರ್ಕಾರದ ಅವಧಿಯಲ್ಲಿ ಈ ತಂತ್ರಗಾರಿಕೆ ಉತ್ತುಂಗಕ್ಕೇರಿತ್ತು. 1996ರಲ್ಲಿ ಕೇವಲ 13 ದಿನಗಳ ಆಳ್ವಿಕೆಯ ನಂತರ ವಾಜಪೇಯಿ ರಾಜೀನಾಮೆ ನೀಡಬೇಕಾಯಿತು. ಅಂದು ಅವರು, "ಇತರ ಪಕ್ಷಗಳನ್ನು ಒಡೆಯುವ ಮೂಲಕ ಅಥವಾ ಕುದುರೆ ವ್ಯಾಪಾರದ ಮೂಲಕ ಸರ್ಕಾರ ರಚಿಸುವ ಕೆಲಸಕ್ಕೆ ನಾನು ಕೈಹಾಕುವುದಿಲ್ಲ," ಎಂದು ಹೇಳಿದ್ದರು.

ನಂತರದ ದಿನಗಳಲ್ಲಿ ವಾಜಪೇಯಿ ಮತ್ತೆ ಅಧಿಕಾರಕ್ಕೆ ಬಂದಾಗ, "ಎಲ್ಲಾ ನೈತಿಕತೆಗಳು ಕೇವಲ ಬಿಜೆಪಿಗಷ್ಟೇ ಸೀಮಿತವಾಗಿರಲು ಸಾಧ್ಯವಿಲ್ಲ," ಎಂದು ಹೇಳುವ ಮೂಲಕ ಅಧಿಕಾರ ಹಿಡಿಯುವ ತಂತ್ರವನ್ನು ಸಮರ್ಥಿಸಿಕೊಂಡಿದ್ದರು.

ಪ್ರಮೋದ್ ಮಹಾಜನ್ ತಂತ್ರಗಾರಿಕೆ

ವಾಜಪೇಯಿ ಸರ್ಕಾರ ಪೂರ್ಣಾವಧಿ ಪೂರೈಸುವಂತೆ ನೋಡಿಕೊಳ್ಳುವಲ್ಲಿ ಅಂದಿನ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರ ಪಾತ್ರ ಹಿರಿದಿತ್ತು. ಎನ್‌ಡಿಎ ಅಧಿಕಾರದಲ್ಲಿದ್ದಾಗ ವಿಧಾನಸಭಾ ಚುನಾವಣೆಗಳ ಫಲಿತಾಂಶ ಅತಂತ್ರವಾದರೆ ಏನು ಮಾಡುತ್ತೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಮಹಾಜನ್ ಅವರು "ಎರಡು ಚಾರ್ಟರ್ಡ್ ವಿಮಾನಗಳನ್ನು ಸಿದ್ಧವಾಗಿಡಲಾಗಿದೆ," ಎಂದು ಹೇಳಿಕೆ ನೀಡಿದ್ದರು. ಅಂದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕೀಯ ಅಂದೇ ರೂಢಿಯಲ್ಲಿತ್ತು.

ಪ್ರಮೋದ್ ಮಹಾಜನ್ ಇಂದು ಇಲ್ಲ. ಆದರೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಇದೇ ರಾಜಕೀಯ ಶಾಲೆಯಿಂದ ಬಂದವರು.

ಶಿಂಧೆಯ ಹೋಟೆಲ್ ಹಾದಿ

ಪ್ರಸ್ತುತ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಅವರು ಕೂಡ ಅಧಿಕಾರದ ಉತ್ತುಂಗಕ್ಕೆ ಏರಿದ್ದು ಇದೇ 'ಹೋಟೆಲ್ ಹಾಪಿಂಗ್' (ಒಂದು ಹೋಟೆಲ್‌ನಿಂದ ಇನ್ನೊಂದಕ್ಕೆ ಹಾರುವುದು) ಮೂಲಕವೇ. ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆಯಿಂದ ಹೊರಬಂದಾಗ, ತಮ್ಮ ನಿಷ್ಠಾವಂತ ಶಾಸಕರನ್ನು ಗುಜರಾತ್ ಮತ್ತು ಅಸ್ಸಾಂನ ಗುವಾಹಟಿಯ ಹೋಟೆಲ್‌ಗಳಿಗೆ ಕರೆದೊಯ್ದಿದ್ದರು. ನಂತರ ಅಲ್ಲಿಂದ ನೇರವಾಗಿ ಮುಂಬೈಗೆ ಬಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಈಗ ಮೇಯರ್ ಪಟ್ಟಕ್ಕೆ ಪಟ್ಟು

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಶಿಂಧೆ ಉಪಮುಖ್ಯಮಂತ್ರಿಯಾಗಿದ್ದರು. ತಾವು ಮಾಡಿದ ಈ ತ್ಯಾಗಕ್ಕೆ ಪ್ರತಿಯಾಗಿ, ಈಗ ಬಿಎಂಸಿ ಮೇಯರ್ ಸ್ಥಾನ ತಮಗೆ ಬೇಕು ಎಂದು ಶಿಂಧೆ ಪಟ್ಟು ಹಿಡಿದಿದ್ದಾರೆ. ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿದ್ದರೂ, ಶಿಂಧೆ ತಮ್ಮ ಬಣಕ್ಕೆ ಮೇಯರ್ ಪಟ್ಟ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಅತಂತ್ರ ಫಲಿತಾಂಶದ ಆತಂಕ

ಪ್ರಸ್ತುತ ಬಿಎಂಸಿ ಚುನಾವಣಾ ಫಲಿತಾಂಶ ಅತಂತ್ರವಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 65 ಸ್ಥಾನಗಳನ್ನು ಗೆದ್ದಿದ್ದು, ರಾಜ್ ಠಾಕ್ರೆ ಅವರ ಎಂಎನ್‌ಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ 24 ಸ್ಥಾನಗಳನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ-ಶಿವಸೇನೆ (ಶಿಂಧೆ) ಮೈತ್ರಿಕೂಟದಲ್ಲಿ ಒಡಕು ಉಂಟಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಬಿಎಂಸಿ ಚುನಾವಣಾ ಪ್ರಚಾರವು ಬಡವರ ಕಲ್ಯಾಣದ ಭರವಸೆಗಳೊಂದಿಗೆ ಪ್ರಾರಂಭವಾಯಿತಾದರೂ, ಅಂತಿಮವಾಗಿ ಅದು ಹೋಟೆಲ್ ರಾಜಕೀಯದಲ್ಲಿ ಬಂದು ನಿಂತಿರುವುದು ವಿಪರ್ಯಾಸ.

Read More
Next Story