ಕೇರಳದಲ್ಲಿ ವರುಣನ ಆರ್ಭಟ; 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
x

ಕೇರಳದಲ್ಲಿ ವರುಣನ ಆರ್ಭಟ; 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ಆರು ಜಿಲ್ಲೆಗಳಾದ ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.


Click the Play button to hear this message in audio format

ಕೇರಳದ ಹಲವು ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಭಾನುವಾರವೂ ಭಾರೀ ಮಳೆ ಮುಂದುವರಿದಿದ್ದು, ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇಡುಕ್ಕಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಮನೆಗಳು ಮತ್ತು ಕೃಷಿ ಭೂಮಿಗೆ ನೀರು ನುಗ್ಗಿದೆ. ಮುಲ್ಲಪೆರಿಯಾರ್ ಅಣೆಕಟ್ಟಿನ ಗೇಟ್​​ಗಳನ್ನು ತೆರೆದು ನೀರು ಬಿಡಲಾಗಿದ್ದು, ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ಆರು ಜಿಲ್ಲೆಗಳಾದ ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಉಳಿದ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಲಕ್ಷದ್ವೀಪಕ್ಕೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 24 ಗಂಟೆಗಳಲ್ಲಿ 11 ರಿಂದ 20 ಸೆಂ.ಮೀ. ವ್ಯಾಪ್ತಿಯಲ್ಲಿ "ಅತಿ ಭಾರೀ ಮಳೆ"ಯನ್ನು ಆರೆಂಜ್ ಅಲರ್ಟ್ ಸೂಚಿಸಿದರೆ, 6 ರಿಂದ 11 ಸೆಂ.ಮೀ. "ಭಾರೀ ಮಳೆ"ಯನ್ನು ಯೆಲ್ಲೋ ಅಲರ್ಟ್ ಸೂಚಿಸುತ್ತದೆ.

ಇಡುಕ್ಕಿ ಜಿಲ್ಲೆಯಲ್ಲಿ ಪ್ರವಾಹ

ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಗೆ ಇಡುಕ್ಕಿ ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಜಿಲ್ಲೆಯ ಹಲವೆಡೆ ಪ್ರವಾಹ ಮತ್ತು ಭೂಕುಸಿತದ ವರದಿಗಳಾಗಿವೆ. ನೆಡುಂಕಂಡಂ, ಕುಮಿಲಿ ಮತ್ತು ಕಟ್ಟಪ್ಪಣ ಪ್ರದೇಶಗಳಲ್ಲಿನ ಹಲವಾರು ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಅಣೆಕಟ್ಟುಗಳಿಂದ ನೀರು ಬಿಡುಗಡೆ

ಭಾರೀ ಮಳೆಯಿಂದಾಗಿ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಅಣೆಕಟ್ಟನ್ನು ನಿರ್ವಹಿಸುವ ತಮಿಳುನಾಡು ಜಲಸಂಪನ್ಮೂಲ ಇಲಾಖೆಯು 13 ಸ್ಪಿಲ್‌ವೇ ಶಟರ್‌ಗಳನ್ನು 100 ಸೆಂ.ಮೀ.ನಷ್ಟು ತೆರೆದಿದೆ. ಅಣೆಕಟ್ಟಿನಿಂದ 1,400 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ಬೆಳಿಗ್ಗೆ 5 ಗಂಟೆಗೆ ನೀರಿನ ಮಟ್ಟ 139.30 ಅಡಿ ದಾಖಲಾಗಿತ್ತು. ಇದಲ್ಲದೆ, ಜಿಲ್ಲೆಯ ಇತರ ಮೂರು ಅಣೆಕಟ್ಟುಗಳಿಂದಲೂ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತರೆ ಜಿಲ್ಲೆಗಳಲ್ಲೂ ಹಾನಿ

ಎರ್ನಾಕುಲಂನಲ್ಲಿ, ರಾತ್ರಿಯಿಡೀ ಸುರಿದ ಭಾರೀ ಮಳೆಗೆ ನವೀಕರಣ ಕಾಮಗಾರಿ ನಡೆಯುತ್ತಿರುವ ಎರ್ನಾಕುಲಂ ಜಂಕ್ಷನ್ ರೈಲು ನಿಲ್ದಾಣದ ಬಳಿ ಪ್ರವಾಹ ಉಂಟಾಗಿದೆ. ವಿವಿಧ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವನ್ನು ಎಚ್ಚರಿಕೆಯಿಂದ ಇರಿಸಲಾಗಿದೆ. ಪತ್ತನಂತಿಟ್ಟ, ಕೋಯಿಕ್ಕೋಡ್, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿಯೂ ಅಧಿಕ ಮಳೆಯಾಗಿದೆ. ಮಲಪ್ಪುರಂನ ಎತ್ತರದ ಪ್ರದೇಶಗಳಲ್ಲಿ ಕೃಷಿ ಭೂಮಿಗೆ ಪ್ರವಾಹದ ನೀರು ನುಗ್ಗಿ ಬೆಳೆ ನಷ್ಟವಾಗಿದೆ.

ಅಕ್ಟೋಬರ್ 22ರವರೆಗೆ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರಿಯುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

Read More
Next Story