
ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆ| ಜನಜೀವನ ಅಸ್ತವ್ಯಸ್ತ
ಮೈಸೂರು, ಚಾಮರಾಜನಗರ, ತುಮಕೂರು ಮತ್ತು ದಾವಣಗೆರೆಯ ಕೆಲವು ಭಾಗಗಳಲ್ಲಿಯೂ ಶುಕ್ರವಾರ ರಾತ್ರಿ ನಿರಂತರ ಮಳೆಯಾಗಿದ್ದು, ಸಾರ್ವಜನಿಕರ ಜೀವನಕ್ಕೆ ಅಡಚಣೆಯುಂಟಾಗಿದೆ.
ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗಿದ್ದು, ಕೋಲಾರ ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುರುವಾರ ಸಂಜೆ ಆರಂಭವಾದ ಮಳೆ ಶುಕ್ರವಾರ ಬೆಳಗಿನ ಜಾವದವರೆಗೂ ಸುರಿದಿತ್ತು. ಮಳೆಯ ತೀವ್ರತೆಗೆ ಕೋಲಾರದ ಹಲವಾರು ವಸತಿ ಪ್ರದೇಶಗಳು, ಪ್ರಮುಖ ರಸ್ತೆಗಳು ಮತ್ತು ರೈಲ್ವೆ ಅಂಡರ್ಪಾಸ್ಗಳು ಸಂಪೂರ್ಣ ಜಲಾವೃತಗೊಂಡಿವೆ.
ರೈಲ್ವೆ ಹಳಿ ದಾಟಿದ ವಿದ್ಯಾರ್ಥಿಗಳು
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಖಾದ್ರಿಪುರದ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ತುಂಬಿಕೊಂಡ ಕಾರಣ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಮತ್ತು ದಿನಗೂಲಿ ಕಾರ್ಮಿಕರು ಅನಿವಾರ್ಯವಾಗಿ ರೈಲ್ವೆ ಹಳಿಗಳನ್ನು ದಾಟಿ ಪ್ರಯಾಣಿಸಬೇಕಾಯಿತು.
ನಾಗರಿಕ ಸಂಸ್ಥೆಗಳು ಸಮಸ್ಯೆಯನ್ನು ಸರಿಪಡಿಸುವಲ್ಲಿ ನಿರಾಸಕ್ತಿ ವಹಿಸಿವೆ ಎಂದು ಆರೋಪಿಸಿ, ಜನ ಸಂಘಟನೆಯ ಸದಸ್ಯರು ಅಂಡರ್ಪಾಸ್ನಲ್ಲಿದ್ದ ಸೊಂಟದ ಎತ್ತರದ ನೀರಿನಲ್ಲಿ ಅರೆನಗ್ನ ಪ್ರತಿಭಟನೆ ನಡೆಸಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಕಾರ್ಮಿಕ ಸಾವು
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಭಾರೀ ಮಳೆ ನೀರು ತುಂಬಿದ ಗುಂಡಿಗೆ ಬಿದ್ದು ದಾಸರಹಳ್ಳಿಯ ದಿನಗೂಲಿ ಕಾರ್ಮಿಕ ರಾಮಾಂಜಿ (45) ಎಂಬುವವರು ಮೃತಪಟ್ಟಿದ್ದಾರೆ.
ಮಂಡ್ಯದಲ್ಲಿ ಬೆಳೆ ಹಾನಿ
ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದ ಮಂಡ್ಯದ ಕೆಎಚ್ಬಿ ಕಾಲೋನಿ ಜಲಾವೃತಗೊಂಡಿದೆ. ಅಲ್ಲದೆ, ಮಂಡ್ಯ ತಾಲೂಕಿನಲ್ಲಿ ಎಕರೆಗಟ್ಟಲೆ ಭತ್ತದ ಬೆಳೆಗಳು ಹಾನಿಗೊಳಗಾಗಿರುವುದಾಗಿ ವರದಿಯಾಗಿದೆ.
ಮೈಸೂರು, ಚಾಮರಾಜನಗರ, ತುಮಕೂರು ಮತ್ತು ದಾವಣಗೆರೆಯ ಕೆಲವು ಭಾಗಗಳಲ್ಲಿಯೂ ಶುಕ್ರವಾರ ರಾತ್ರಿ ನಿರಂತರ ಮಳೆಯಾಗಿದ್ದು, ಸಾರ್ವಜನಿಕರ ಜೀವನಕ್ಕೆ ಅಡಚಣೆಯುಂಟಾಗಿದೆ.
ಬೆಂಗಳೂರಿನಲ್ಲಿ ಭಾರೀ ಮಳೆ
ಕಳೆದ ರಾತ್ರಿ ಬೆಂಗಳೂರು ಮಹಾನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ನಗರದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತ ಕಾರಣ, ಪ್ರಯಾಣಿಕರು ತೀವ್ರ ಸಂಚಾರ ದಟ್ಟಣೆಯನ್ನು ಎದುರಿಸುವಂತಾಯಿತು.
ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಬೆಂಗಳೂರು, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ ಸೇರಿದಂತೆ ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಒಟ್ಟು ಹತ್ತು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಿಲಾಗಿದೆ.
ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ವರದಿಯಾಗಿದೆ.