ದೋಸ್ತಿಗಳ ನಡುವೆ ಕುಸ್ತಿ: ಶಿಂಧೆ ಸೇನೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಜೊತೆ ಬಿಜೆಪಿ ಅಚ್ಚರಿಯ ಮೈತ್ರಿ
x
ಅಂಬರ್‌ನಾಥ್‌ ನಗರಸಭೆ ಚುನಾವಣೆ

ದೋಸ್ತಿಗಳ ನಡುವೆ ಕುಸ್ತಿ: ಶಿಂಧೆ ಸೇನೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಜೊತೆ ಬಿಜೆಪಿ ಅಚ್ಚರಿಯ ಮೈತ್ರಿ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್ ನಗರಸಭೆಯಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಮತ್ತು ಕಾಂಗ್ರೆಸ್ ಒಂದಾಗಿವೆ.


Click the Play button to hear this message in audio format

ಮಹಾರಾಷ್ಟ್ರ ರಾಜಕಾರಣದಲ್ಲಿ 'ಶತ್ರುವಿನ ಶತ್ರು ಮಿತ್ರ' ಎಂಬ ಮಾತು ಅಕ್ಷರಶಃ ನಿಜವಾಗಿದೆ. ರಾಜ್ಯ ಮಟ್ಟದಲ್ಲಿ ಅಧಿಕಾರ ಹಂಚಿಕೊಂಡಿರುವ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಂಬರನಾಥ್ ನಗರಸಭೆಯಲ್ಲಿ ಮಾತ್ರ ಪರಸ್ಪರ ಕಚ್ಚಾಡುತ್ತಿವೆ. ಇಲ್ಲಿ ಶಿವಸೇನೆಯನ್ನು ಸೋಲಿಸಲು ಬಿಜೆಪಿ ತನ್ನ ಸೈದ್ಧಾಂತಿಕ ವಿರೋಧಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಎಲ್ಲರನ್ನೂ ಚಕಿತಗೊಳಿಸಿದೆ.

ಮೈತ್ರಿಯ ಹಿಂದಿನ ಗಣಿತವೇನು?

ಅಂಬರನಾಥ್ ನಗರಸಭೆಯ ಒಟ್ಟು 60 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ.

• ಶಿವಸೇನೆ (ಶಿಂಧೆ ಬಣ): 27 ಸ್ಥಾನ (ಬಹುಮತಕ್ಕೆ ಕೇವಲ 4 ಸ್ಥಾನಗಳ ಕೊರತೆ ಇತ್ತು).

• ಬಿಜೆಪಿ: 14 ಸ್ಥಾನ.

• ಕಾಂಗ್ರೆಸ್: 12 ಸ್ಥಾನ.

• ಎನ್‌ಸಿಪಿ (ಅಜಿತ್ ಪವಾರ್): 4 ಸ್ಥಾನ.

• ಇತರರು: 3 ಸ್ಥಾನ.

ಸಹಜವಾಗಿ ಅತಿ ದೊಡ್ಡ ಪಕ್ಷವಾಗಿದ್ದ ಶಿವಸೇನೆ ಅಧಿಕಾರ ಹಿಡಿಯಬೇಕಿತ್ತು. ಆದರೆ, ಬಿಜೆಪಿ ಇಲ್ಲಿ ದೊಡ್ಡ ಆಟವಾಡಿತು. ಕಾಂಗ್ರೆಸ್ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಜೊತೆ ಸೇರಿ 'ಅಂಬರನಾಥ್ ವಿಕಾಸ್ ಅಘಾಡಿ' ಎಂಬ ಮೈತ್ರಿಕೂಟ ರಚಿಸಿತು. ಇದರಿಂದಾಗಿ ಬಿಜೆಪಿಯ ತೇಜಶ್ರೀ ಕರಂಜುಲೆ ಪಾಟೀಲ್ ಅವರು ಶಿವಸೇನೆಯ ಮನಿಷಾ ವಾಲೇಕರ್ ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ ಯಾಕೆ ಕಾಂಗ್ರೆಸ್ ಜೊತೆ ಕೈಜೋಡಿಸಿತು?

ಬಿಜೆಪಿಯ ಈ ನಡೆಯ ಹಿಂದೆ ಬಲವಾದ ಕಾರಣಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಂಬರನಾಥ್‌ನಲ್ಲಿ ಕಳೆದ 25 ವರ್ಷಗಳಿಂದ ಶಿವಸೇನೆಯದ್ದೇ ಅಬ್ಬರವಿತ್ತು. ಈ ಭ್ರಷ್ಟಾಚಾರದ ಜಾಲವನ್ನು ಮುರಿಯಬೇಕೆಂಬುದು ಸ್ಥಳೀಯ ಬಿಜೆಪಿ ನಾಯಕರ ವಾದ.

ನಿರ್ಲಕ್ಷ್ಯದ ಸೇಡು: ಮೈತ್ರಿ ಮಾತುಕತೆಗೆ ಹೋದಾಗ ಶಿಂಧೆ ಬಣದ ನಾಯಕರು ಸರಿಯಾಗಿ ಸ್ಪಂದಿಸಲಿಲ್ಲ, ಹೀಗಾಗಿ ನಾವು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಬಿಜೆಪಿ ಉಪಾಧ್ಯಕ್ಷ ಗುಲಾಬ್ರಾವ್ ಕರಂಜುಲೆ ಪಾಟೀಲ್ ಬಹಿರಂಗವಾಗಿಯೇ ಹೇಳಿದ್ದಾರೆ.

ಶಿಂಧೆ ಬಣದ ಆಕ್ರೋಶಕ್ಕೆ ಕಾರಣವೇನು?

"ಕಾಂಗ್ರೆಸ್ ಮುಕ್ತ ಭಾರತ" ಎಂದು ಘೋಷಣೆ ಮಾಡುವ ಬಿಜೆಪಿ, ಈಗ ಅಧಿಕಾರಕ್ಕಾಗಿ ಕಾಂಗ್ರೆಸ್ ಕಾಲು ಹಿಡಿಯುತ್ತಿರುವುದು ಎಷ್ಟು ಸರಿ? ಎಂದು ಶಿಂಧೆ ಬಣದ ಶಾಸಕ ಡಾ. ಬಾಲಾಜಿ ಪ್ರಶ್ನಿಸಿದ್ದಾರೆ. "ಇದು ನೈತಿಕತೆಯಿಲ್ಲದ ಅಪವಿತ್ರ ಮೈತ್ರಿ ಮತ್ತು ನಮ್ಮ ಬೆನ್ನಿಗೆ ಹಾಕಿದ ಚೂರಿ" ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯ ರಾಜಕಾರಣದ ಮೇಲೆ ಇದರ ಪರಿಣಾಮವೇನು?

ರಾಜ್ಯದಲ್ಲಿ ಶಿಂಧೆ, ಫಡ್ನವೀಸ್ ಮತ್ತು ಅಜಿತ್ ಪವಾರ್ ಒಂದೇ ಸರ್ಕಾರದ ಭಾಗವಾಗಿದ್ದಾರೆ. ಆದರೆ ಅಂಬರನಾಥ್‌ನಲ್ಲಿ ನಡೆದಿರುವ ಈ ಮೈತ್ರಿ, ಮಿತ್ರಪಕ್ಷಗಳ ನಡುವೆ ಬಿರುಕು ಸೃಷ್ಟಿಸಿದೆ. ಇದು ಮುಂದಿನ ಚುನಾವಣೆಗಳಲ್ಲಿ 'ಮಹಾಯುತಿ' ಮೈತ್ರಿಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.

Read More
Next Story