
ಭಾನುವಾರ ರಾತ್ರಿ ಬಾವಿಗೆ ಬಿದ್ದಿದ್ದ ಈ ಒಂಟಿ ಸಲಗವನ್ನು ರಕ್ಷಿಸಲು ಸೋಮವಾರ ಬೆಳಿಗ್ಗೆಯಿಂದಲೇ ನಿರಂತರ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಪೆರಾಜೆ ಬಳಿ ಬಾವಿಗೆ ಬಿದ್ದಿದ್ದ ಕಾಡಾನೆ ರಕ್ಷಣೆ , ಕಾಡಿಗೆ ಹೋಗದೆ ಕೃಷಿ ತೋಟದತ್ತ ಮುಖಮಾಡಿದ ಗಜರಾಜ
ಹಲವು ಗಂಟೆಗಳ ಕಾಲ ಆಳವಾದ ಬಾವಿಯಲ್ಲಿ ಸಿಲುಕಿ ಪರದಾಡುತ್ತಿದ್ದ ಗಜರಾಜನನ್ನು ಯಾವುದೇ ಪ್ರಾಣಾಪಾಯವಿಲ್ಲದೆ ರಕ್ಷಿಸಿದಾಗ ನೆರೆದಿದ್ದ ಸ್ಥಳೀಯರು ಹಾಗೂ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಪೆರಾಜೆ ಕಲ್ಚರ್ಪೆ ಬಳಿ ಆಯತಪ್ಪಿ ಪಾಳು ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ. ಭಾನುವಾರ ರಾತ್ರಿ ಬಾವಿಗೆ ಬಿದ್ದಿದ್ದ ಈ ಒಂಟಿ ಸಲಗವನ್ನು ರಕ್ಷಿಸಲು ಸೋಮವಾರ ಬೆಳಿಗ್ಗೆಯಿಂದಲೇ ನಿರಂತರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆದು, ಆನೆಗೆ ನಿಧಾನವಾಗಿ ಮೇಲಕ್ಕೆ ನಡೆದುಕೊಂಡು ಬರಲು ಅನುಕೂಲವಾಗುವಂತೆ ಇಳಿಜಾರು ದಾರಿ ಮಾಡಿಕೊಡುವ ಮೂಲಕ ಈ ಬೃಹತ್ ಕಾರ್ಯಾಚರಣೆಯನ್ನು ಅತ್ಯಂತ ಸುರಕ್ಷಿತವಾಗಿ ಪೂರ್ಣಗೊಳಿಸಲಾಗಿದೆ.
ಹಲವು ಗಂಟೆಗಳ ಕಾಲ ಆಳವಾದ ಬಾವಿಯಲ್ಲಿ ಸಿಲುಕಿ ಪರದಾಡುತ್ತಿದ್ದ ಗಜರಾಜನನ್ನು ಯಾವುದೇ ಪ್ರಾಣಾಪಾಯವಿಲ್ಲದೆ ರಕ್ಷಿಸಿದಾಗ ನೆರೆದಿದ್ದ ಸ್ಥಳೀಯರು ಹಾಗೂ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು. ಆದರೆ, ಬಾವಿಯಿಂದ ಹೊರಬಂದ ಕಾಡಾನೆ ತಕ್ಷಣವೇ ಅರಣ್ಯದ ಕಡೆಗೆ ಮರಳುವ ಬದಲು, ಸಮೀಪದಲ್ಲಿರುವ ಕೃಷಿ ತೋಟಗಳತ್ತ ಮುಖಮಾಡಿ ಹೆಜ್ಜೆ ಹಾಕಿದೆ. ಇದರಿಂದಾಗಿ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರಲ್ಲಿ ಹೊಸ ಆತಂಕ ಶುರುವಾಗಿದೆ.
ಅಧಿಕಾರಿಗಳಿಂದ ಕಟ್ಟೆಚ್ಚರ
ಕಾಡಾನೆ ಕಾಡಿನತ್ತ ಹೋಗದೆ ಜನವಸತಿ ಹಾಗೂ ತೋಟಗಳ ಸುತ್ತಮುತ್ತಲೇ ಬೀಡುಬಿಟ್ಟಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಆನೆಯ ಚಲನವಲನಗಳ ಮೇಲೆ ವಿಶೇಷ ತಂಡಗಳು ನಿರಂತರ ನಿಗಾ ಇರಿಸಿದ್ದು, ಅದನ್ನು ಸುರಕ್ಷಿತವಾಗಿ ಹಾಗೂ ಯಾರಿಗೂ ತೊಂದರೆಯಾಗದಂತೆ ಮರಳಿ ಕಾಡಿಗಟ್ಟಲು ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ತೋಟಗಳ ಕಡೆಗೆ ತೆರಳುವಾಗ ಎಚ್ಚರಿಕೆಯಿಂದ ಇರುವಂತೆ ಹಾಗೂ ರಾತ್ರಿ ವೇಳೆ ಒಂಟಿಯಾಗಿ ಓಡಾಡದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

