My son is not a coward, he did not commit suicide: Suspicion over death from Sakets parents who moved to America
x

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣರನ್ನು ಭೇಟಿ ಮಾಡಿದ ಸಾಕೇತ್‌ ಶ್ರೀನಿವಾಸ್‌ ತಂದೆ ಹಾಗೂ ತಾಯಿ 

"ನನ್ನ ಮಗ ಹೇಡಿ ಅಲ್ಲ, ಆತ್ಮಹತ್ಯೆ ಮಾಡಿಲ್ಲ": ಅಮೆರಿಕಕ್ಕೆ ಹೊರಟ ಸಾಕೇತ್ ಪೋಷಕರಿಂದ ಸಾವಿನ ಬಗ್ಗೆ ಶಂಕೆ

ಮಗನ ಪಾರ್ಥಿವ ಶರೀರವನ್ನು ನಾನೇ ಖುದ್ದಾಗಿ ಹೋಗಿ ತರಬೇಕು ಎಂದು ಶ್ರೀನಿವಾಸಯ್ಯ ಹೇಳಿದ್ದಾರೆ. "ನನ್ನ ಮಗನ ಅಂತ್ಯಕ್ರಿಯೆ ನಮ್ಮ ಸಂಪ್ರದಾಯದಂತೆ ನಡೆಯಬೇಕು. ಅವನನ್ನು ನಾನೇ ಕರೆತರುತ್ತೇನೆ," ಎಂದು ಅವರು ತಿಳಿಸಿದ್ದಾರೆ.


Click the Play button to hear this message in audio format

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟಿರುವ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಸಾವು ಆತ್ಮಹತ್ಯೆಯಲ್ಲ ಎಂಬ ಬಲವಾದ ಶಂಕೆಯನ್ನು ಅವರ ಕುಟುಂಬ ವ್ಯಕ್ತಪಡಿಸಿದೆ. ಮಗನ ಸಾವಿನ ಸತ್ಯಾಸತ್ಯತೆ ತಿಳಿಯಲು ಮತ್ತು ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಸಾಕೇತ್ ಅವರ ತಂದೆ ಶ್ರೀನಿವಾಸಯ್ಯ ಹಾಗೂ ಕುಟುಂಬಸ್ಥರು ಇಂದು (ಬುಧವಾರ) ಕ್ಯಾಲಿಫೋರ್ನಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೆ ಮೊದಲು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ.

ಮಗನ ಸಾವಿನ ಸುದ್ದಿ ತಿಳಿದಾಗಿನಿಂದ ಆಘಾತದಲ್ಲಿದ್ದ ಕುಟುಂಬಕ್ಕೆ ವೀಸಾ ದೊರೆಯುವುದು ವಿಳಂಬವಾಗಿತ್ತು. ಆದರೆ, ಇದೀಗ ವೀಸಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕುಟುಂಬಸ್ಥರು ಅಮೆರಿಕಕ್ಕೆ ತೆರಳಲಿದ್ದಾರೆ. ವಿಮಾನ ಏರುವ ಮುನ್ನ ಆಪ್ತರು ಹಾಗೂ ಭೇಟಿಯಾದ ಗಣ್ಯರ ಬಳಿ ಮಾತನಾಡಿದ ಶ್ರೀನಿವಾಸಯ್ಯ, ತಮ್ಮ ಮಗನ ಸಾವಿನ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವ ಅವನದಲ್ಲ

ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಾಕೇತ್ ಸಾವು ಆತ್ಮಹತ್ಯೆ ಎಂದು ಬಿಂಬಿತವಾಗಿದ್ದರೂ, ಪೋಷಕರು ಇದನ್ನು ಒಪ್ಪಲು ತಯಾರಿಲ್ಲ. "ನನ್ನ ಮಗ ಧೈರ್ಯವಂತ. ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸುವ ಮನಸ್ಥಿತಿ ಅವನದು. ಆತ ಹೇಡಿಯಲ್ಲ, ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವ ಅವನದಲ್ಲ," ಎಂದು ತಂದೆ ಶ್ರೀನಿವಾಸಯ್ಯ ಕಣ್ಣೀರು ಹಾಕಿದ್ದಾರೆ. ಮಗನ ಜತೆಗಿನ ಒಡನಾಟ ಮತ್ತು ಆತನ ಇತ್ತೀಚಿನ ಮಾತುಕತೆಗಳನ್ನು ಸ್ಮರಿಸಿರುವ ಅವರು, ಅಲ್ಲಿ ಏನೋ ನಡೆದಿರಬೇಕು ಎಂಬ ಅನುಮಾನವನ್ನು ಬಲವಾಗಿ ವ್ಯಕ್ತಪಡಿಸಿದ್ದಾರೆ.

ನೆರವಿಗೆ ನಿಂತ ಅನಿವಾಸಿ ಭಾರತೀಯ ಸಮಿತಿ

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಶ್ರೀನಿವಾಸಯ್ಯ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಲ್ಲದೆ, ಕುಟುಂಬಸ್ಥರಿಗೆ ತ್ವರಿತವಾಗಿ ವೀಸಾ ದೊರಕಿಸಿಕೊಡುವಲ್ಲಿ ಡಾ. ಆರತಿ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು. ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ನಡೆಸಿ, ತುರ್ತಾಗಿ ವೀಸಾ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದ್ದರು. ಅವರ ನೆರವಿನಿಂದಾಗಿ ಇಂದು ಕುಟುಂಬ ಅಮೆರಿಕಕ್ಕೆ ಪ್ರಯಾಣಿಸಲು ಸಾಧ್ಯವಾಗಿದೆ.

ನಾನೇ ಹೋಗಿ ಮಗನನ್ನು ಕರೆತರುತ್ತೇನೆ

ಮಗನ ಅಂತಿಮ ದರ್ಶನ ಪಡೆಯಲು ಮತ್ತು ಆತನ ಪಾರ್ಥಿವ ಶರೀರವನ್ನು ನಾನೇ ಖುದ್ದಾಗಿ ಹೋಗಿ ತರಬೇಕು ಎಂದು ಶ್ರೀನಿವಾಸಯ್ಯ ಹೇಳಿದ್ದಾರೆ. "ನನ್ನ ಮಗನ ಅಂತ್ಯಕ್ರಿಯೆ ನಮ್ಮ ಸಂಪ್ರದಾಯದಂತೆ ನಡೆಯಬೇಕು. ಅವನನ್ನು ನಾನೇ ಕರೆತರುತ್ತೇನೆ," ಎಂದು ಅವರು ನಿರ್ಧರಿಸಿದ್ದಾರೆ. ಇದೀಗ ಅವರು ಅಮೆರಿಕಕ್ಕೆ ತೆರಳುತ್ತಿದ್ದು, ಅಲ್ಲಿನ ಪೊಲೀಸ್ ಅಧಿಕಾರಿಗಳು ಮತ್ತು ಸಾಕೇತ್ ಸ್ನೇಹಿತರೊಂದಿಗೆ ಮಾತನಾಡಿ ಸಾವಿನ ಹಿಂದಿನ ನೈಜ ಕಾರಣವನ್ನು ತಿಳಿದುಕೊಳ್ಳಲಿದ್ದಾರೆ.

Read More
Next Story