
ಸಚಿವ ಎಚ್.ಸಿ. ಮಹದೇವಪ್ಪ
ದಲಿತ ಸಚಿವರು, ಶಾಸಕರೊಂದಿಗೆ ಸಿಎಂ ಚರ್ಚೆ: ಬಜೆಟ್ ಪೂರ್ವಭಾವಿ ಸಭೆಯೋ ? ರಾಜಕೀಯ ಗುರಿಯೋ ?
ಸರ್ಕಾರದ ಯೋಜನೆಗಳಲ್ಲಿನ ಹಣವನ್ನು ದಲಿತ ಸಮುದಾಯಕ್ಕೆ ಬಳಸುವ ಅವಕಾಶವಿದೆ. ವಾರ್ಷಿಕವಾಗಿ ಖರ್ಚಾಗುವ 56 ಸಾವಿರ ಕೋಟಿ ಗ್ಯಾರಂಟಿ ಹಣದಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಹಣವೂ ಸೇರಿದೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.
ಬಜೆಟ್ ಸಿದ್ಧತೆಯಲ್ಲಿರುವ ಸಿಎಂ ಸಿದ್ದರಾಮಯ್ಯ ದಲಿತ ಸಚಿವರು ಹಾಗೂ ಶಾಸಕರೊಂದಿಗೆ ಇಂದು ಸಭೆ ನಿಗದಿಪಡಿಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ . ಬಜೆಟ್ ಹೆಸರಲ್ಲಿ ಸಿಎಂ ರಾಜಕೀಯ ಪಟ್ಟನ್ನು ಹಾಕುತ್ತಿದ್ದಾರೆಯೆ ಎಂಬ ಚರ್ಚೆಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.
ಸೋಮವಾರ(ಫೆ.16) ಸಂಜೆ ವಿಧಾನಸೌಧದಲ್ಲಿ ಸಭೆ ನಿಗದಿಪಡಿಸಿದ್ದು, ದಲಿತರ ಬದುಕಿಗೆ ಪೂರಕವಾದ ಬೇಡಿಕೆ ಮಾಡಲಾಗುವುದು ಎಂದು ಸಿಎಂ ಆಪ್ತ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದು, ಎಸ್ಸಿಪಿ, ಟಿಎಸ್ಪಿ ಕಾಯ್ದೆ ವಿಚಾರವೂ ಚರ್ಚೆಯಾಗಲಿದೆ. ಯೋಜನೆಗೆ ಮೀಸಲಿರಿಸಿದ ಹಣ ಬೇರೆಡೆಗೆ ವರ್ಗಾವಣೆಯಾಗುತ್ತಿದೆ ಎಂದೇ 7ಡಿ ನಿಯಮ ತೆಗೆದುಹಾಕಲಾಗಿದೆ. ಗ್ಯಾರಂಟಿಗೆ ಕೊಡಬಾರದು ಎಂದು ಕಾಯ್ದೆಯಲ್ಲಿ ಹೇಳಿಲ್ಲ ಎಂದರು.
ಹೆಚ್ಚಿನ ಅನುದಾನಕ್ಕೆ ಸಿಎಂಗೆ ಮನವಿ
ಸರ್ಕಾರದ ಯೋಜನೆಗಳಲ್ಲಿನ ಹಣವನ್ನು ದಲಿತ ಸಮುದಾಯಕ್ಕೆ ಬಳಸುವ ಅವಕಾಶವಿದೆ. ವಾರ್ಷಿಕವಾಗಿ ಖರ್ಚಾಗುವ 56 ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಮೊತ್ತ ಎಸ್ಸಿಪಿ ಹಾಗೂ ಟಿಎಸ್ಪಿ ಹಣವೂ ಸೇರಿದೆ. ಬಜೆಟ್ನಲ್ಲಿ ಸಮುದಾಯಕ್ಕೆ ಹೆಚ್ಚು ಅನುದಾನ ನೀಡುವಂತೆ ಕೇಳಿದ್ದೇವೆ, ಸಿಎಂ ಕೊಡುತ್ತಾರೆ ಎಂಬ ಭರವಸೆಯೂ ಇದೆ ಎಂದು ತಿಳಿಸಿದರು.
ಎಲ್ಲಾ ಸಂಸ್ಥೆಗಳು ನೋಂದಣಿಯಾಗಲಿ
ದೇಶದಲ್ಲಿ ಯಾವ ಸಂಸ್ಥೆ ಅಥವಾ ಸಂಘಟನೆಯನ್ನು ಆರಂಭಿಸಿದರೂ ನೋಂದಣಿಯಾಗಬೇಕು ಎಂಬ ನಿಯಮವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ನೋಂದಣಿಯಾಗಬೇಕು. ಅವರಿಗೆ ಇಷ್ಟ ಬಂದಂತೆ ನಡೆದುಕೊಂಡರೆ ಕಾನೂನು ಕೇಳುವುದಿಲ್ಲ. ಸಂಘದ ಮೇಲೆ ಹಲವು ಆರೋಪಗಳೂ ಇವೆ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ. ಬೀದಿ ನಾಯಿಗಳನ್ನೆಲ್ಲ ಹಿಡಿದು ಹಾಕಿ ಎಂದು ಸುಪ್ರಿಂ ಕೋರ್ಟ್ ಹೇಳಿದೆ , ನಾನೇನೂ ಇದನ್ನು ಹೇಳುತ್ತಿಲ್ಲ, ನೀವೇ ಬೇಕಾದಂತೆ ಅರ್ಥ ಮಾಡಿಕೊಳ್ಳುತ್ತಿದ್ದೀರಿ. ನಮಗೆ ಜನರ ಆರೋಗ್ಯ ಮುಖ್ಯ ಅಲ್ಲವೇ ? ಎಂದು ಪರೋಕ್ಷವಾಗಿ ನಾಯಕತ್ವದ ಬದಲಾವಣೆ ಹೇಳಿಕೆಗೆ ವ್ಯಂಗ್ಯವಾಡಿದರು.

