
ಅಂತರ್ಜಲ ಮಟ್ಟ ಹೆಚ್ಚಳವಾಗಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿರುವುದು. (ಸಾಂದರ್ಭಿಕ ಚಿತ್ರ)
Ground Water| ರಾಜ್ಯ ಅಂತರ್ಜಲ ಮಟ್ಟದಲ್ಲಿ ಭಾರೀ ಸುಧಾರಣೆ; 11 ತಾಲೂಕುಗಳು ಈಗ ಸೇಫ್ ಜೋನ್
ರಾಜ್ಯದ 11 ತಾಲೂಕುಗಳ ಅಂತರ್ಜಲ ಸ್ಥಿತಿಗತಿಯಲ್ಲಿ ಪ್ರಗತಿ ಕಂಡುಬಂದಿದ್ದು, ಚಾಮರಾಜನಗರ 'ಅತಿ-ಬಳಕೆ' ಪಟ್ಟಿಯಿಂದ 'ನಿರ್ಣಾಯಕ' ಹಂತಕ್ಕೆ ಸುಧಾರಿಸಿದೆ.
ರಾಜ್ಯ ಸರ್ಕಾರದ ಸುಸ್ಥಿರ ಜಲ ಸಂರಕ್ಷಣಾ ನೀತಿಗಳು ಹಾಗೂ ಕಳೆದ ಸಾಲಿನಲ್ಲಿ ಸುರಿದ ಉತ್ತಮ ಮಳೆಯ ಫಲವಾಗಿ ಕರ್ನಾಟಕದ ಅಂತರ್ಜಲ ಮಟ್ಟದಲ್ಲಿ ಆಶಾದಾಯಕ ಸುಧಾರಣೆ ಕಂಡುಬಂದಿದೆ. ಸರ್ಕಾರದ ಹೊಸ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಅಂತರ್ಜಲದ ಅತಿಯಾದ ಬಳಕೆ ಕಡಿಮೆಯಾಗಿದ್ದು, ಮರುಪೂರಣ ಸಾಮರ್ಥ್ಯವು ಗಣನೀಯವಾಗಿ ಏರಿಕೆಯಾಗಿದೆ.
ವರದಿಯ ಅನ್ವಯ, ರಾಜ್ಯದ ಒಟ್ಟಾರೆ ಅಂತರ್ಜಲ ಹೊರತೆಗೆಯುವಿಕೆ ಪ್ರಮಾಣವು 2024ರಲ್ಲಿ ಶೇ. 68.44 ರಷ್ಟಿತ್ತು, ಇದು 2025ರಲ್ಲಿ ಶೇ. 66.49 ಕ್ಕೆ ಇಳಿಕೆಯಾಗಿದೆ. ಅಂದರೆ, ಲಭ್ಯವಿರುವ ಒಟ್ಟು ಅಂತರ್ಜಲದಲ್ಲಿ ಪ್ರಸ್ತುತ ಶೇ. 66.5 ರಷ್ಟನ್ನು ಮಾತ್ರ ಬಳಸಲಾಗುತ್ತಿದ್ದು, ಇದು ಸುಸ್ಥಿರ ಬಳಕೆಯತ್ತ ರಾಜ್ಯ ಹೆಜ್ಜೆ ಇಟ್ಟಿರುವುದಕ್ಕೆ ಸಾಕ್ಷಿಯಾಗಿದೆ.
ಅಂತರ್ಜಲ ಮರುಪೂರಣ ಕಾಮಗಾರಿಗಳು
ಮರುಪೂರಣ ಪ್ರಮಾಣದಲ್ಲಿ ಜಿಗಿತ
ಅಂತರ್ಜಲ ಮರುಪೂರಣ ಪ್ರಕ್ರಿಯೆಯಲ್ಲಿ ರಾಜ್ಯವು ದೊಡ್ಡ ಮಟ್ಟದ ಯಶಸ್ಸು ಕಂಡಿದೆ. 2024ರಲ್ಲಿ 18.74 ಬಿಲಿಯನ್ ಕ್ಯೂಬಿಕ್ ಮೀಟರ್ (BCM) ಇದ್ದದ್ದು, 2025ರಲ್ಲಿ 19.28 ಬಿಸಿಎಂಗೆ ಏರಿಕೆಯಾಗಿದೆ. ಒಟ್ಟು ಲಭ್ಯವಿರುವ ಅಂತರ್ಜಲ ಸಂಪನ್ಮೂಲ 16.88 ಬಿಸಿಎಂ ನಿಂದ 17.41 ಬಿಸಿಎಂಗೆ ಹೆಚ್ಚಳವಾಗಿದೆ. ರಾಜ್ಯಾದ್ಯಂತ ಜಲ ಸಂರಕ್ಷಣಾ ಕಾಮಗಾರಿಗಳ ಸಂಖ್ಯೆಯು 3.15 ಲಕ್ಷದಿಂದ 3.94 ಲಕ್ಷಕ್ಕೆ ಏರಿಕೆಯಾಗಿದ್ದು, ಇದರಿಂದಾಗುವ ಮರುಪೂರಣ ಪ್ರಮಾಣದಲ್ಲಿ ಶೇ. 29.11 ರಷ್ಟು ಸುಧಾರಣೆ ಕಂಡುಬಂದಿದೆ.
11 ತಾಲೂಕುಗಳ ಸ್ಥಿತಿಯಲ್ಲಿ ಸುಧಾರಣೆ
ರಾಜ್ಯದ 11 ತಾಲೂಕುಗಳ ಅಂತರ್ಜಲ ಸ್ಥಿತಿಗತಿಯಲ್ಲಿ ಪ್ರಗತಿ ಕಂಡುಬಂದಿದ್ದು, ಚಾಮರಾಜನಗರ 'ಅತಿ-ಬಳಕೆ' ಪಟ್ಟಿಯಿಂದ 'ನಿರ್ಣಾಯಕ' ಹಂತಕ್ಕೆ ಸುಧಾರಿಸಿದೆ. ಚಾಮರಾಜನಗರ, ಅಥಣಿ, ಚನ್ನಪಟ್ಟಣ, ಮೊಳಕಾಲ್ಮೂರು, ರಾಣೆಬೆನ್ನೂರು, ಸವಣೂರು ಮತ್ತು ಶಿಗ್ಗಾಂವಿ ತಾಲೂಕುಗಳು 'ಅರೆ-ನಿರ್ಣಾಯಕ' ಸ್ಥಿತಿಯಿಂದ ಸಂಪೂರ್ಣ 'ಸುರಕ್ಷಿತ' ವರ್ಗಕ್ಕೆ ಸೇರ್ಪಡೆಯಾಗಿವೆ.
ಚಾಮರಾಜನಗರ ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಹಾಕಿರುವ ಕುಡಿಯುವ ನೀರು ಸಂಪರ್ಕ ನಳ (ಸಾಂದರ್ಭಿಕ ಚಿತ್ರ)
"ವೈಜ್ಞಾನಿಕ ಜಲ ನಿರ್ವಹಣೆ, ಕೆರೆಗಳ ಪುನರುಜ್ಜೀವನ ಮತ್ತು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಯೋಜನೆಗಳು ಅತ್ಯುತ್ತಮ ಫಲಿತಾಂಶ ನೀಡಿವೆ. ಕೇವಲ ಮಳೆಗಾಲವನ್ನೇ ನಂಬುವ ಬದಲು 365 ದಿನಗಳೂ ಜಲ ಭದ್ರತೆ ನೀಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. .ಜಲ ಜೀವನ್ ಮಿಷನ್ ಯೋಜನೆಯ ಪರಿಣಾಮವಾಗಿ ಜನರು ಮೇಲ್ಮೈ ನೀರಿನ ಮೂಲಗಳತ್ತ ಮುಖ ಮಾಡುತ್ತಿರುವುದರಿಂದ, ಗೃಹಬಳಕೆಯ ಅಂತರ್ಜಲ ಅವಲಂಬನೆಯು ಶೇ. 0.58 ರಷ್ಟು ತಗ್ಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಸಂತಸ ವ್ಯಕ್ತಪಡಿಸಿದ್ದಾರೆ.

