Bengaluru to melt on April 1; Cost of Rs 1.70 crore, tight security by a thousand policemen
x

ಬೆಂಗಳೂರು ಕರಗದಲ್ಲಿ ಪೊಲೀಸರ ಭದ್ರತೆ (ಸಾಂದರ್ಭಿಕ ಚಿತ್ರ)

ಏಪ್ರಿಲ್ 1ರಂದು ಬೆಂಗಳೂರು ಕರಗ; ಬರೋಬ್ಬರಿ 1.70 ಕೋಟಿ ರೂ. ವೆಚ್ಚ, ಸಾವಿರ ಪೊಲೀಸರ ಬಿಗಿ ಭದ್ರತೆ

ಕರಗ ಸಾಗುವ ರಸ್ತೆಗಳಲ್ಲಿ ವಿಶೇಷ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಭದ್ರತೆಗಾಗಿ 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸಂಚಾರ ನಿರ್ವಹಣೆಗಾಗಿ 200ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ.


Click the Play button to hear this message in audio format

ಬೆಂಗಳೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಕರಗ ಉತ್ಸವಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಏಪ್ರಿಲ್ 1ರಂದು ರಾತ್ರಿ ಅದ್ದೂರಿಯಾಗಿ ಕರಗ ಹಾಗೂ ಮಹಾರಥೋತ್ಸವ ಜರುಗಲಿದೆ. ಶನಿವಾರ ದೇವಾಲಯಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉತ್ಸವದ ಯಶಸ್ಸಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಕರಗ ಉತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ನೆಲೆಸಿರುವ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ, ಮುಜರಾಯಿ ಇಲಾಖೆಯ ಜೊತೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಕೂಡ ಸಿದ್ಧತಾ ಕಾರ್ಯಗಳಲ್ಲಿ ಕೈಜೋಡಿಸಿದೆ.

ಬಿಗಿ ಭದ್ರತೆ ಮತ್ತು ಪೊಲೀಸ್ ಬಂದೋಬಸ್ತ್

"ಕರಗವನ್ನು ಕಣ್ತುಂಬಿಕೊಳ್ಳಲು ಬರುವ ಅಪಾರ ಜನಸ್ತೋಮವನ್ನು ನಿಯಂತ್ರಿಸಲು ಹಾಗೂ ಉತ್ಸವವು ಸುಗಮವಾಗಿ ಸಾಗಲು ಈ ಬಾರಿ ಅತ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು" ಎಂದು ಸಚಿವರು ತಿಳಿಸಿದರು. ಕರಗ ಸಾಗುವ ರಸ್ತೆಗಳಲ್ಲಿ ವಿಶೇಷ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಭದ್ರತೆಗಾಗಿ 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸಂಚಾರ ನಿರ್ವಹಣೆಗಾಗಿ 200ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸರು ಸೇರಿದಂತೆ ಒಟ್ಟು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕರಗ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಹದ್ದಿನ ಕಣ್ಣಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

1.70 ಕೋಟಿ ರೂ. ಅಂದಾಜು ವೆಚ್ಚ ಹಾಗೂ ಮೂಲಸೌಕರ್ಯ

ಕರಗ ಉತ್ಸವಕ್ಕೆ ಈ ಬಾರಿ ಸುಮಾರು 1.70 ಕೋಟಿ ರೂಪಾಯಿಗಳಷ್ಟು ಅಂದಾಜು ವೆಚ್ಚವನ್ನು ನಿಗದಿಪಡಿಸಲಾಗಿದೆ. ದೇವಾಲಯದ ಒಳಾಂಗಣದ ಪೂಜೆ ಹಾಗೂ ಇತರೆ ಕಾರ್ಯಗಳಿಗಾಗಿ ಮುಜರಾಯಿ ಇಲಾಖೆಯಿಂದ 70-80 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ದೇವಾಲಯದ ಹೊರಭಾಗದ ಕೆಲಸಗಳನ್ನು ಜಿಬಿಎ ವಹಿಸಿಕೊಂಡಿದ್ದು, ಮೈಸೂರು ದಸರಾ ಮಾದರಿಯಲ್ಲಿಯೇ ಭವ್ಯವಾದ ವಿದ್ಯುದ್ದೀಪಾಲಂಕಾರ ಸೇರಿದಂತೆ ಇತರ ಸಿದ್ಧತೆಗಳಿಗಾಗಿ ಸುಮಾರು 1 ಕೋಟಿ ರೂ. ವ್ಯಯಿಸಲಾಗುತ್ತಿದೆ. ಹೂವಿನ ಅಲಂಕಾರ ಹಾಗೂ ಹೂವಿನ ಹಾರಗಳ ವೆಚ್ಚವನ್ನು ಸಾಮಾನ್ಯ ಸಂಗ್ರಹ ನಿಧಿಯಿಂದ ಭರಿಸಲು ಸೂಚಿಸಲಾಗಿದೆ.

ಗಣ್ಯರ ಭಾಗಿ ಮತ್ತು ಸಾರ್ವಜನಿಕ ಸೌಲಭ್ಯಗಳು

ಏಪ್ರಿಲ್ 1ರಂದು ನಡೆಯುವ ಈ ಬೃಹತ್ ಕರಗ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಲಕ್ಷಾಂತರ ಭಕ್ತರು ಸೇರುವುದರಿಂದ ಕುಡಿಯುವ ನೀರು ಹಾಗೂ ಅಗತ್ಯ ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕರಗ ಸಾಗುವ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನಿಗಾ ವಹಿಸಲು ಮತ್ತು ಕಸ ವಿಲೇವಾರಿಗೆ ವಿಶೇಷ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

Read More
Next Story