
ಕೆಎಸ್ಆರ್ಟಿಸಿಯಿಂದ ಕೆಳಗೆ ಬಿದ್ದಿರುವ ವಿದ್ಯಾರ್ಥಿನಿಯರು
ಬೆಳ್ತಂಗಡಿ: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು
ಘಟನೆಯಲ್ಲಿ ಗಾಯಗೊಂಡವರನ್ನು ಹತ್ತನೇ ತರಗತಿಯ ವಿದ್ಯಾರ್ಥಿನಿ ಚರಿಷ್ಮಾ ಹಾಗೂ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಕೆಯ ಸಹೋದರಿ ಚಸ್ಮಿಕಾ ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ರೇಷ್ಮೆ ರೋಡ್ ಬಳಿ ಸಂಭವಿಸಿದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಬಾಗಿಲು ಹಠಾತ್ತನೆ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಮಂಗಳವಾರ ನಡೆದ ಈ ಭಯಾನಕ ಘಟನೆಯ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಸ್ನ ನಿರ್ವಹಣೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಹತ್ತನೇ ತರಗತಿಯ ವಿದ್ಯಾರ್ಥಿನಿ ಚರಿಷ್ಮಾ ಹಾಗೂ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಕೆಯ ಸಹೋದರಿ ಚಸ್ಮಿಕಾ ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಈ ಸರ್ಕಾರಿ ಬಸ್, ಗೇರುಕಟ್ಟೆಯಿಂದ ಬೆಳ್ತಂಗಡಿ ಮಾರ್ಗವಾಗಿ ಚಲಿಸುತ್ತಿತ್ತು. ಬಸ್ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದ ಕಾರಣ, ಈ ಇಬ್ಬರು ಸಹೋದರಿಯರು ಬಾಗಿಲ ಬಳಿಯೇ ನಿಂತುಕೊಂಡು ಪ್ರಯಾಣಿಸುತ್ತಿದ್ದರು. ಗೇರುಕಟ್ಟೆಯ ರೇಷ್ಮೆ ರೋಡ್ ಬಳಿಯ ತಿರುವಿನಲ್ಲಿ ಬಸ್ ವೇಗವಾಗಿ ಚಲಿಸುತ್ತಿದ್ದಾಗ ಏಕಾಏಕಿ ಬಾಗಿಲು ತೆರೆದುಕೊಂಡಿದೆ. ಪರಿಣಾಮವಾಗಿ, ಆಯತಪ್ಪಿದ ಅಕ್ಕ ಮೊದಲು ಕೆಳಕ್ಕೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಮುಂದಾದ ತಂಗಿ ಕೂಡ ರಸ್ತೆಗೆ ಉರುಳಿದ್ದಾಳೆ.
ಸ್ಥಳೀಯರ ನೆರವು ಮತ್ತು ಆಸ್ಪತ್ರೆಗೆ ದಾಖಲು
ವೇಗವಾಗಿ ಚಲಿಸುತ್ತಿದ್ದ ಬಸ್ನಿಂದ ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು ಉರುಳಿಕೊಂಡು ಹೋಗುವ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ನಡೆದ ಕೂಡಲೇ ಹಿಂದಿನಿಂದ ಯಾವುದೇ ದೊಡ್ಡ ವಾಹನಗಳು ಬಾರದೇ ಇದ್ದುದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ತಕ್ಷಣವೇ ಎಚ್ಚೆತ್ತ ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ಗಾಯಗೊಂಡ ಸಹೋದರಿಯರ ನೆರವಿಗೆ ಧಾವಿಸಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಬಳಿಕ ಕೆಎಸ್ಆರ್ಟಿಸಿ ಬಸ್ಗಳ ಕಳಪೆ ನಿರ್ವಹಣೆ ಹಾಗೂ ಪ್ರಯಾಣಿಕರ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

