
2004-05 ರಲ್ಲಿ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ
17ನೇ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಸಜ್ಜು: ವಜುಭಾಯಿ ವಾಲಾ ದಾಖಲೆ ಸರಿಗಟ್ಟುವರೇ; ನಿರ್ಗಮನವೇ?
ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಚರ್ಚೆಯಾಗುತ್ತಿರುವ 'ಅಧಿಕಾರ ಹಂಚಿಕೆ' ಅಥವಾ ಮುಖ್ಯಮಂತ್ರಿ ಬದಲಾವಣೆ ಸೂತ್ರದ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರು ಈ ದಾಖಲೆ ಮುರಿಯುವವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಎಂಬ ಬಹುದೊಡ್ಡ ಪ್ರಶ್ನೆ ಎದ್ದಿದೆ.
ರಾಜ್ಯದ ಹಣಕಾಸು ವ್ಯವಸ್ಥೆಯ ರೂವಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ತಮ್ಮ ರಾಜಕೀಯ ಜೀವನದ 17ನೇ ಆಯವ್ಯಯವನ್ನು (ಬಜೆಟ್) ಮಂಡಿಸುತ್ತಿದ್ದಾರೆ. ಈ ಬಾರಿ ಬರೋಬ್ಬರಿ 4.30 ಲಕ್ಷ ಕೋಟಿ ರೂಪಾಯಿಗೂ ಅಧಿಕ ಗಾತ್ರದ ಬೃಹತ್ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದ್ದು, ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಅಗ್ಗಳಿಕೆಗೆ ಪಾತ್ರರಾಗಿರುವ ಅವರ ಈ ಬಾರಿಯ ಲೆಕ್ಕಾಚಾರಗಳ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ. ಕೇವಲ ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲದೆ, ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಜೆಟ್ ತೀವ್ರ ಕುತೂಹಲ ಕೆರಳಿಸಿದೆ.
ವಜುಭಾಯಿ ವಾಲಾ ದಾಖಲೆ ಸರಿಗಟ್ಟುವರೇ ಅಥವಾ ನಿರ್ಗಮನವೇ?
ಈ ಬಜೆಟ್ ಮಂಡನೆಯೊಂದಿಗೆ ರಾಷ್ಟ್ರೀಯ ಮಟ್ಟದ ದಾಖಲೆಯೊಂದು ಮುನ್ನೆಲೆಗೆ ಬಂದಿದೆ. ಗುಜರಾತ್ನ ಮಾಜಿ ಹಣಕಾಸು ಸಚಿವರಾಗಿದ್ದ ಹಾಗೂ ಕರ್ನಾಟಕದ ಮಾಜಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ವಜುಭಾಯಿ ವಾಲಾ ಅವರು 18 ಬಾರಿ ಬಜೆಟ್ ಮಂಡಿಸಿದ ಅಖಿಲ ಭಾರತ ದಾಖಲೆಯನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದು 17ನೇ ಬಜೆಟ್ ಆಗಿದ್ದು, ಈ ಮಹತ್ವದ ದಾಖಲೆಯನ್ನು ಸರಿಗಟ್ಟಲು ಅವರು ಇನ್ನೂ ಒಂದು ಬಜೆಟ್ ಹಾಗೂ ಆ ದಾಖಲೆಯನ್ನು ಮುರಿಯಲು ಎರಡು ಬಜೆಟ್ ಮಂಡಿಸಬೇಕಿದೆ.ಹಾಗಿದ್ದರೆ ಅವರು ಮುಂದಿನ ಒಂದು ಅವಧಿ ಅಥವಾ ಎರಡು ಅವಧಿಗೆ ಬಜೆಟ್ ಮಂಡಿಸಬೇಕಾಗಿದೆ.
ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಚರ್ಚೆಯಾಗುತ್ತಿರುವ 'ಅಧಿಕಾರ ಹಂಚಿಕೆ' ಅಥವಾ ಮುಖ್ಯಮಂತ್ರಿ ಬದಲಾವಣೆ ಸೂತ್ರದ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರು ಈ ದಾಖಲೆ ಮುರಿಯುವವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಎಂಬ ಬಹುದೊಡ್ಡ ಪ್ರಶ್ನೆ ಎದ್ದಿದೆ. ಬಹುಶಃ ಎಲ್ಲ ವರ್ಗಗಳನ್ನೂ ಮೆಚ್ಚಿಸುವಂತಹ ಅತ್ಯುತ್ತಮ ಹಾಗೂ ಜನಪ್ರಿಯ ಬಜೆಟ್ ಮಂಡಿಸಿ, ಹೈಕಮಾಂಡ್ ಸೂಚನೆಯಂತೆ ಮುಂಬರುವ ದಿನಗಳಲ್ಲಿ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಾರೆಯೇ ಎಂಬುದು ಸದ್ಯದ ರಾಜಕೀಯ ವಲಯದ ಬಹುದೊಡ್ಡ ಲೆಕ್ಕಾಚಾರವಾಗಿದೆ. ಒಂದು ವೇಳೆ ಅವರು ಸ್ಥಾನ ತ್ಯಜಿಸುವುದೇ ಆದರೆ, ಇದು ಅವರ ಕೊನೆಯ ಬಜೆಟ್ ಆಗಲಿದ್ದು, ಅದನ್ನು ಸ್ಮರಣೀಯವಾಗಿಸಲು ಭಾರಿ ಕಸರತ್ತು ನಡೆಸಲಿದ್ದಾರೆ.
ಗ್ರೇಟರ್ ಬೆಂಗಳೂರು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಂಪರ್
ಮುಂಬರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ವ್ಯಾಪ್ತಿಯ ಐದು ಹೊಸ ನಗರ ಪಾಲಿಕೆಗಳ ಚುನಾವಣೆ ಹಾಗೂ ರಾಜ್ಯಾದ್ಯಂತ ನಡೆಯಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ (ಸ್ಥಳೀಯ ಸಂಸ್ಥೆ) ಚುನಾವಣೆಗಳು ಈ ಬಜೆಟ್ನ ದಿಕ್ಕನ್ನು ಸಂಪೂರ್ಣವಾಗಿ ನಿರ್ಧರಿಸಲಿವೆ. ರಾಜಧಾನಿ ಬೆಂಗಳೂರಿನ ಮತದಾರರನ್ನು ಸೆಳೆಯಲು ಮೂಲಸೌಕರ್ಯ, ಟ್ರಾಫಿಕ್ ನಿವಾರಣೆ, ರಸ್ತೆ, ರಾಜಕಾಲುವೆ ಅಭಿವೃದ್ಧಿ ಹಾಗೂ ತ್ಯಾಜ್ಯ ವಿಲೇವಾರಿಗೆ ಸಾವಿರಾರು ಕೋಟಿ ರೂಪಾಯಿಗಳ ಭಾರಿ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ. ಗ್ರೇಟರ್ ಬೆಂಗಳೂರು ಚುನಾವಣೆ ಪ್ರತಿಷ್ಠೆಯ ಕಣವಾಗಿರುವುದರಿಂದ ಬೆಂಗಳೂರಿಗೆ ವಿಶೇಷ ಅನುದಾನ ಖಚಿತ.
ಅದೇ ರೀತಿ ಗ್ರಾಮೀಣ ಭಾಗದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಕೃಷಿ, ನೀರಾವರಿ, ಪಂಚಾಯತ್ ರಾಜ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ (ಅಹಿಂದ) ಬಂಪರ್ ಕೊಡುಗೆಗಳನ್ನು ನೀಡುವ ಮೂಲಕ ಇದೊಂದು ಪಕ್ಕಾ 'ಚುನಾವಣಾ ಸ್ನೇಹಿ' ಬಜೆಟ್ ಆಗಿ ಹೊರಹೊಮ್ಮಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿರುವುದರಿಂದ, ಶಾಸಕರು ಮತ್ತು ಸಚಿವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಂಚಿಕೆಯಾಗುವ ನಿರೀಕ್ಷೆ ದಟ್ಟವಾಗಿದೆ.
ಸಿಎಂ ಕುರ್ಚಿ ಗುದ್ದಾಟ ಮತ್ತು ಬಜೆಟ್ ಸ್ವರೂಪ
ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟವು ಈ ಬಜೆಟ್ ಮೇಲೆ ನೇರ ಪ್ರಭಾವ ಬೀರಲಿದೆ. ತಮ್ಮ ಆಡಳಿತಾತ್ಮಕ ಹಿಡಿತ, ಜನಪ್ರಿಯತೆ ಹಾಗೂ ಆರ್ಥಿಕ ಶಿಸ್ತನ್ನು ಹೈಕಮಾಂಡ್ಗೆ ಹಾಗೂ ವಿರೋಧಿಗಳಿಗೆ ಸಾಬೀತುಪಡಿಸಲು ಸಿದ್ದರಾಮಯ್ಯ ಅವರಿಗೆ ಈ ಬಜೆಟ್ ಪ್ರಬಲ ಅಸ್ತ್ರವಾಗಿದೆ.
ಒಂದು ವೇಳೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಪರಿಸ್ಥಿತಿ ಎದುರಾದರೆ, "ನಾನು ರಾಜ್ಯಕ್ಕೆ ಆರ್ಥಿಕ ಶಿಸ್ತು ಮತ್ತು ಜನಪರ ಯೋಜನೆಗಳನ್ನು ಕೊಟ್ಟೇ ಹೋಗುತ್ತಿದ್ದೇನೆ" ಎಂಬ ಸ್ಪಷ್ಟ ಸಂದೇಶ ರವಾನಿಸಲು ಅವರು ಸರ್ವವ್ಯಾಪಿ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ನಿರ್ವಹಣೆಯ ಜೊತೆಗೆ ಬಂಡವಾಳ ವೆಚ್ಚದ (ಮೂಲಸೌಕರ್ಯ ಅಭಿವೃದ್ಧಿ) ನಡುವೆ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ಜಾಣ್ಮೆ ಈ ಬಜೆಟ್ನಲ್ಲಿ ಎದ್ದು ಕಾಣಲಿದೆ. ಜೊತೆಗೆ ಬಂಡಾಯದ ಸ್ವರಗಳನ್ನು ತಣ್ಣಗಾಗಿಸಲು ಅಸಮಾಧಾನಿತ ಶಾಸಕರಿಗೂ ಬಜೆಟ್ನಲ್ಲಿ ಮಣೆ ಹಾಕುವ ಅನಿವಾರ್ಯತೆ ಮುಖ್ಯಮಂತ್ರಿಗಳಿಗಿದೆ.

