
ರಾಯ್ ಸಿ.ಜೆ. ಆತ್ಮಹತ್ಯೆ: ಎಸ್ಐಟಿ ತನಿಖೆ ಚುರುಕು- ಇಂದು ಕುಟುಂಬಸ್ಥರ ವಿಚಾರಣೆ
ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ರಾಯ್ ಸಿ.ಜೆ. ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದೆ.
ಉದ್ಯಮಿ ರಾಯ್ ಸಿ.ಜೆ. ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (SIT) ಈಗ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಅಂತ್ಯಕ್ರಿಯೆಯ ಪ್ರಕ್ರಿಯೆಗಳು ಮುಗಿದ ಬೆನ್ನಲ್ಲೇ ಎಸ್ಐಟಿ ಪೊಲೀಸರು ತನಿಖೆಯ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ. ಪ್ರಕರಣದ ಹಿನ್ನೆಲೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರಬಹುದಾದ ಅಂಶಗಳ ಬಗ್ಗೆ ಮಾಹಿತಿ ಪಡೆಯಲು ಎಸ್ಐಟಿ ಅಧಿಕಾರಿಗಳು ಇಂದು ರಾಯ್ ಸಿ.ಜೆ. ಅವರ ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಲಿದ್ದಾರೆ.
ಮೃತರ ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ನಲ್ಲಿರುವ ಮಾಹಿತಿಯನ್ನು ಕಲೆಹಾಕುವುದು ಪೊಲೀಸರಿಗೆ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸಾಧನಗಳನ್ನು ಅನ್ಲಾಕ್ ಮಾಡಲು ಬೇಕಾದ ಪಾಸ್ವರ್ಡ್ಗಳಿಗಾಗಿ ಕುಟುಂಬಸ್ಥರಿಂದ ಪೊಲೀಸರು ಮಾಹಿತಿ ಪಡೆಯಲಿದ್ದಾರೆ.
ಐಟಿ ಅಧಿಕಾರಿಗಳಿಗೆ ಸಂಕಷ್ಟ
ಈ ಪ್ರಕರಣದ ಮತ್ತೊಂದು ಆಯಾಮವೆಂದರೆ ಆದಾಯ ತೆರಿಗೆ (IT) ಇಲಾಖೆಯ ಅಧಿಕಾರಿಗಳ ಪಾತ್ರ. ಮೂಲಗಳ ಪ್ರಕಾರ, ತನಿಖಾ ತಂಡವು ಶೀಘ್ರದಲ್ಲೇ ಐಟಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಡೆತ್ನೋಟ್ ಪತ್ತೆ?
ರಾಯ್ ಅವರ ಆತ್ಮಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಆತ್ಮಹತ್ಯೆಗೂ ಮುನ್ನ ರಾಯ್ ಅವರು 9 ಪುಟಗಳ ಸುದೀರ್ಘ ಡೆತ್ನೋಟ್ ಬರೆದಿಟ್ಟಿದ್ದಾರೆ ಎಂಬ ಮಹತ್ವದ ಮಾಹಿತಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಈ ಪತ್ರದಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿಗಳು, ಅದರಿಂದ ಉಂಟಾದ ವಿಪರೀತ ಮಾನಸಿಕ ಒತ್ತಡ ಹಾಗೂ ಉದ್ಯಮದಲ್ಲಿ ಎದುರಾದ ಬಿಕ್ಕಟ್ಟುಗಳ ಬಗ್ಗೆ ರಾಯ್ ಅವರು ಉಲ್ಲೇಖಿಸಿರಬಹುದು ಎಂದು ಶಂಕಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಅವರು ಈ ಬಗ್ಗೆ ಕುಟುಂಬಕ್ಕೆ ಕೆಲವು ಸುಳಿವುಗಳನ್ನು ನೀಡಿದ್ದರು ಎನ್ನಲಾಗಿದೆ. ಈ 9 ಪುಟಗಳ ಬರಹ ಈಗ ತನಿಖೆಯ ಕೇಂದ್ರಬಿಂದುವಾಗಿದೆ.
ರಾಯ್ಗೆ ಅಂತಿಮ ವಿದಾಯ
ಸಿ.ಜೆ. ರಾಯ್ ಅವರ ಅಂತ್ಯಸಂಸ್ಕಾರವನ್ನು ಅವರ ಇಚ್ಛೆಯಂತೆಯೇ ವಿಭಿನ್ನವಾಗಿ ನೆರವೇರಿಸಲಾಗಿದೆ. ಅವರು ಇಷ್ಟಪಡುತ್ತಿದ್ದ ದುಬಾರಿ ಬ್ಲೇಜರ್, ಸನ್ಗ್ಲಾಸ್ ಹಾಗೂ ಬ್ರ್ಯಾಂಡೆಡ್ ಶೂಗಳನ್ನು ಧರಿಸಿಯೇ ಅವರ ಅಂತಿಮ ವಿಧಿವಿಧಾನಗಳನ್ನು ಭಾನುವಾರ ಪೂರೈಸಲಾಯಿತು.
ಕುಟುಂಬದ ಆಕ್ರಂದನ
"ಜನವರಿ 30ರಂದು ರಾಯ್ ನನ್ನೊಂದಿಗೆ ಕೊನೆಯದಾಗಿ ಮಾತನಾಡಿದ್ದರು. ನಿನ್ನ ಜೊತೆ ಮಾತನಾಡಬೇಕು ಎಂದು ಅವರು ಅವಸರದಿಂದ ಮನೆಗೆ ಕರೆದಿದ್ದರು. ಆದರೆ ವಿಧಿ ಅವರನ್ನು ನಮ್ಮಿಂದ ಕಿತ್ತುಕೊಂಡಿದೆ," ಎಂದು ಸಹೋದರ ಬಾಬು ಕಣ್ಣೀರಿಟ್ಟಿದ್ದಾರೆ.
ಕಾಂಗ್ರೆಸ್ ಮುಖಂಡ ಮೊಹಮದ್ ನಲಪಾಡ್ ಅವರು ಮಾತನಾಡಿ, "ರಾಯ್ ಪುತ್ರ ರೋಹಿತ್ ತಂದೆಯನ್ನು ಕಳೆದುಕೊಂಡ ಆಘಾತದಲ್ಲಿದ್ದಾರೆ. ಕುಟುಂಬವು ಸದ್ಯಕ್ಕೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಸತ್ಯಗಳನ್ನು ತಿಳಿಸಲಿದ್ದಾರೆ," ಎಂದರು.

