
ಸಾಂದರ್ಭಿಕ ಚಿತ್ರ
ಅಕ್ರಮ ಬಾಂಗ್ಲಾದೇಶಿಗಳ ಹಾವಳಿ: ನಗರದ ವಿವಿಧೆಡೆ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹಲವರ ಬಂಧನ
ಸಾರ್ವಜನಿಕರು ನೀಡಿದ ಖಚಿತ ಮಾಹಿತಿಯ ಮೇರೆಗೆ ಮೊದಲಿಗೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ. ಚನ್ನಸಂದ್ರ ಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು, 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದು, ಈ ವೇಳೆ ಅಕ್ರಮವಾಗಿ ವಾಸಿಸುತ್ತಿದ್ದ ಶಂಕಿತ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರ ನೇರ ನಿರ್ದೇಶನದಂತೆ ಈ ವಿಶೇಷ ಕಾರ್ಯಾಚರಣೆ ನಡೆದಿದ್ದು, ವಿವಿಧ ಪೊಲೀಸ್ ವಿಭಾಗಗಳ ಸಮನ್ವಯದೊಂದಿಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಸಾರ್ವಜನಿಕರು ನೀಡಿದ ಖಚಿತ ಮಾಹಿತಿಯ ಮೇರೆಗೆ ಮೊದಲಿಗೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ. ಚನ್ನಸಂದ್ರ ಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು, 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಶಂಕಿತರು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನಗರದಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತಿದ್ದು, ಸದ್ಯ ಅವರ ಗುರುತಿನ ಚೀಟಿ ಮತ್ತು ಪ್ರವಾಸ ದಾಖಲೆಗಳ ಕೂಲಂಕಷ ಪರಿಶೀಲನೆ ನಡೆಯುತ್ತಿದೆ. ದಾಖಲೆಗಳ ಸತ್ಯಾಸತ್ಯತೆ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಮತ್ತೊಂದು ಭಾಗವಾಗಿ ಯಲಹಂಕ ಮತ್ತು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಧ ನಡೆಸಲಾಗಿದ್ದು, ಈ ವೇಳೆ ಬಾಗಲೂರು ಪೊಲೀಸರು ಬೆಳ್ಳಹಳ್ಳಿ ಕಸದ ಘಟಕದ ಬಳಿ ಸುಮಾರು 20 ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇವರ ಚಲನವಲನದ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ, ತಾವು ಬಾಂಗ್ಲಾದೇಶದ ನಿವಾಸಿಗಳೆಂದು ಪ್ರಾಥಮಿಕ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಈ ನಿರ್ದಾಕ್ಷಿಣ್ಯ ಕ್ರಮ ಮುಂದುವರಿಯಲಿದ್ದು, ಮುಂಬರುವ ದಿನಗಳಲ್ಲಿ ಕಾರ್ಯಾಚರಣೆಯನ್ನು ನಗರದ ಇತರ ಭಾಗಗಳಿಗೂ ವಿಸ್ತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಸದ್ಯ ವಶದಲ್ಲಿರುವವರ ಹಿನ್ನೆಲೆ ಮತ್ತು ಅವರಿಗೆ ಸ್ಥಳೀಯವಾಗಿ ನೆರವು ನೀಡಿದವರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸಂಪೂರ್ಣ ದಾಖಲೆ ಪರಿಶೀಲನೆಯ ನಂತರ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ನಡೆಸಿದ 'ಮನೆ ಮನೆಗೆ ಪೊಲೀಸ್ ಪರಿಶೀಲನೆ' ವೇಳೆ ಬೃಹತ್ ಜಾಲವೊಂದು ಪತ್ತೆಯಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಲಿಮಂಗಲದ ಲೇಬರ್ ಕಾಲೋನಿಗಳಲ್ಲಿ ನಡೆದ ದಾಳಿಯಲ್ಲಿ ಸುಮಾರು 26ಕ್ಕೂ ಹೆಚ್ಚು ಶಂಕಿತ ಬಾಂಗ್ಲಾದೇಶಿ ಪ್ರಜೆಗಳನ್ನು ಗುರುತಿಸಲಾಗಿತ್ತು. ಇವರಲ್ಲಿ ಅನೇಕರು ನಕಲಿ ಆಧಾರ್ ಕಾರ್ಡ್ಗಳನ್ನು ಹೊಂದಿದ್ದರು ಮತ್ತು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು ಎಂದು ವರದಿಯಾಗಿತ್ತು.ಕಳೆದ ವರ್ಷ ಬೆಂಗಳೂರು ಸಿಸಿಬಿ ಪೊಲೀಸರು ಮಾದಕ ವಸ್ತುಗಳ ನಿಯಂತ್ರಣದ ಭಾಗವಾಗಿ ವಿದೇಶಿ ಪ್ರಜೆಗಳ ವಾಸಸ್ಥಳಗಳ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ 11ಕ್ಕೂ ಹೆಚ್ಚು ಆಫ್ರಿಕನ್ ಮತ್ತು ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲಾಗಿತ್ತು. ಅಲ್ಲದೆ, ದೇಶಾದ್ಯಂತ ನಡೆದ 'ಆಪರೇಷನ್ ಸಿಂಧೂರ್' ಪ್ರಭಾವ ಬೆಂಗಳೂರಿನ ಮೇಲೂ ಉಂಟಾಗಿತ್ತು, ಇದರಿಂದಾಗಿ ಅನೇಕ ಅಕ್ರಮ ವಲಸಿಗರು ಸ್ವಯಂಪ್ರೇರಿತರಾಗಿ ನಗರ ತೊರೆದಿದ್ದರು.
ಹಿಂದಿನ ತನಿಖೆಗಳಲ್ಲಿ ಕಂಡುಬಂದ ಆಘಾತಕಾರಿ ಅಂಶವೆಂದರೆ, ಪಶ್ಚಿಮ ಬಂಗಾಳದ ಗಡಿಭಾಗದ ಏಜೆಂಟರು ಸುಮಾರು 25,000 ರೂಪಾಯಿ ಪಡೆದು ಬಾಂಗ್ಲಾ ಪ್ರಜೆಗಳನ್ನು ಭಾರತಕ್ಕೆ ಅಕ್ರಮವಾಗಿ ನುಗ್ಗಿಸುತ್ತಿದ್ದರು. ಇವರು ಬೆಂಗಳೂರಿಗೆ ಬಂದ ನಂತರ ಕಸ ವಿಲೇವಾರಿ, ಕಟ್ಟಡ ನಿರ್ಮಾಣ ಮತ್ತು ಗಾರ್ಮೆಂಟ್ಸ್ಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದರು. ಇವರಿಗೆ ಸ್ಥಳೀಯವಾಗಿ ನಕಲಿ ಆಧಾರ್ ಮತ್ತು ವೋಟರ್ ಐಡಿ ಮಾಡಿಸಿಕೊಡುವ ದೊಡ್ಡ ಜಾಲವೇ ನಗರದಲ್ಲಿ ಸಕ್ರಿಯವಾಗಿತ್ತು.
ಮನೆ ಮಾಲೀಕರಿಗೆ ಎಚ್ಚರಿಕೆ
ಕಳೆದ ವರ್ಷಗಳಲ್ಲಿ ನಡೆದ ಕಾರ್ಯಾಚರಣೆಗಳ ನಂತರ, ರಾಜ್ಯ ಗೃಹ ಇಲಾಖೆಯು ಮನೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿದೇಶಿ ಅಥವಾ ಹೊರ ರಾಜ್ಯದವರಿಗೆ ಬಾಡಿಗೆಗೆ ಮನೆ ನೀಡುವ ಮುನ್ನ ಅವರ ದಾಖಲೆಗಳನ್ನು ಪರಿಶೀಲಿಸಿ 24 ಗಂಟೆಯೊಳಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದ 120ಕ್ಕೂ ಹೆಚ್ಚು ಮನೆ ಮಾಲೀಕರ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿವೆ.

